
ಮಂಗಳೂರು: ಪೋಸ್ಟ್ ಮ್ಯಾನ್ ಗೆ ನಿಂದಿಸಿ, ಹಲ್ಲೆಗೈದ ಆರೋಪಿಗೆ 10ತಿಂಗಳ ಜೈಲು ಶಿಕ್ಷೆ
Friday, September 30, 2022
ಮಂಗಳೂರು: ಕರ್ತವ್ಯದಲ್ಲಿದ್ದ ಪೋಸ್ಟ್ ಮ್ಯಾನ್ ಓರ್ವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 6ನೇ ಜೆಎಂಎಫ್ ಸಿ ನ್ಯಾಯಾಲಯ ಅಪರಾಧಿ ಯುವಕನಿಗೆ 10 ತಿಂಗಳ ಸಾದಾ ಸಜೆ ಹಾಗೂ 2,500 ರೂ. ದಂಡ ವಿಧಿಸಿ ಆದೇಶಿಸಿದೆ.
2020ರ ಜೂನ್ 16ರಂದು ಬೆಳಗ್ಗೆ 10.15ಕ್ಕೆ ಬೋಳೂರಿನ ಮಠದಕಣಿ ರಸ್ತೆಯಲ್ಲಿನ ಆರೋಪಿ ಮನೀಶ್ ಎಂಬಾತನ ಮನೆಗೆ ರಿಜಿಸ್ಟರ್ ಪೋಸ್ಟ್ ಬಟವಾಡೆ ಮಾಡಲು ಪೋಸ್ಟ್ ಮ್ಯಾನ್ ದಿನೇಶ್ ಹೋಗಿದ್ದರು. ಈ ವೇಳೆ ದಿನೇಶ್ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪಿ ಮನೀಶ್ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಅಂಚೆ ಇಲಾಖೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಹರಿದು ಹಾಕಿ ದಿನೇಶ್ ಅವರ ಬೈಕ್ ಅನ್ನು ರಾಡ್ ನಿಂದ ಜಖಂಗೊಳಿಸಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬರ್ಕೆ ಠಾಣೆಯ ಅಂದಿನ ಉಪನಿರೀಕ್ಷಕ ಹಾರೂನ್ ಅಖ್ತರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಆರನೇ ಜೆಎಂಎಫ್ ಸಿ ನ್ಯಾಯಾಲಯ ವಾದವಿವಾದವನ್ನು ಆಲಿಸಿ ಆರೋಪಿ ತಪ್ಪಿತಸ್ಥನೆಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಪೂಜಾಶ್ರೀ ಹೆಚ್.ಎಸ್. ಅಪರಾಧಿಗೆ 10 ತಿಂಗಳ ಸಾದಾ ಸಜೆ ಹಾಗೂ 2,500 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದಾರೆ.