ಸೆ.25ರಂದು ಹಸೆಮಣೆ ಏರಬೇಕಿದ್ದ ಭಾವೀ ಮದುಮಗಳು ಅಪಘಾತಕ್ಕೆ ಬಲಿ
Monday, September 8, 2025
ಶಿವಮೊಗ್ಗ: ಸೆ.25ರಂದು ಹಸೆಮಣೆ ಏರಬೇಕಿದ್ದ ಭಾವೀ ಮದುಮಗಳ ಮೇಲೆ ಬಸ್ ಹರಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊರವಲಯದ ಮಲವಗೊಪ್ಪದಲ್ಲಿ ನಡೆದಿದೆ.
ಶಿವಮೊಗ್ಗ ತಾಲೂಕು ದುಮ್ಮಳ್ಳಿಯ ಶಿವಪುರ ತಾಂಡಾದ ನಿವಾಸಿ ಕವಿತಾ (22) ಮೃತಪಟ್ಟ ಯುವತಿ.
ಎಂಎಸ್ಸಿ ಪದವೀಧರೆಯಾಗಿದ್ದ ಕವಿತಾ ನಗರದ ಸರ್ಜಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆ ಕವಿತಾ ತಮ್ಮ ಸಹೋದರನೊಂದಿಗೆ ಬೈಕ್ನಲ್ಲಿ ಮನೆಯಿಂದ ಆಸ್ಪತ್ರೆಗೆ ಹೊರಟಿದ್ದರು. ಮಲವಗೊಪ್ಪದಲ್ಲಿ ಮುಂಭಾಗದಲ್ಲಿ ಬರುತ್ತಿದ್ದ ಮತ್ತೊಂದು ಬೈಕ್ನ ಹ್ಯಾಂಡಲ್ ಕವಿತಾ ಅವರಿಗೆ ತಾಗಿದೆ. ಪರಿಣಾಮ ಬೈಕ್ ಸಹಸವಾರೆಯಾಗಿದ್ದ ಅವರು ಬಲಗಡೆಯಿಂದ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಬೈಕ್ ಹಿಂದಿನಿಂದ ಬರುತ್ತಿದ್ದ ಸಿಟಿ ಬಸ್ ಕವಿತಾ ಮೇಲೆಯೇ ಹರಿದು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಸಹೋದರಿಯ ಮೃತದೇಹ ಕಂಡು ಸಹೋದರ ರಸ್ತೆಯಲ್ಲೇ ಗೋಳಾಡಿದ್ದಾರೆ.
ಇನ್ನು 17 ದಿನಗಳಲ್ಲಿ ಮದುವೆ ಸಂಭ್ರಮದಲ್ಲಿ ಹಸೆಮಣೆ ಏರಬೇಕಿದ್ದ ಕವಿತಾ ಬಸ್ ಅಪಘಾತಕ್ಕೆ ಬಲಿಯಾಗಿದ್ದಾರೆ. ನಾಳೆಯಿಂದ ಕೆಲಸಕ್ಕೆ ರಜೆ ಹಾಕಿ ಮದುವೆ ತಯಾರಿಯಲ್ಲಿ ತೊಡಗಿಸಿಕೊಳ್ಳಲು ಕವಿತಾ ಯೋಜಿಸಿದ್ದರು. ಆದರೆ, ವಿಧಿಯ ಆಟವೇ ಬೇರೆಯಿತ್ತು.