Header Ad

ಪೊಲೀಸ್ ತಪಾಸಣೆ ನೆಪದಲ್ಲಿ ಯುವತಿಯರ ಸುಲಿಗೆ: ಇನ್ಸ್‌ಪೆಕ್ಟರ್ ಸಹಿತ ನಾಲ್ವರು ಸಸ್ಪೆಂಡ್‌ !

ಪೊಲೀಸ್ ತಪಾಸಣೆ ನೆಪದಲ್ಲಿ ಯುವತಿಯರ ಸುಲಿಗೆ: ಇನ್ಸ್‌ಪೆಕ್ಟರ್ ಸಹಿತ ನಾಲ್ವರು ಸಸ್ಪೆಂಡ್‌ !






ಪೊಲೀಸರು ನಡೆಸುವ ಡ್ರಂಕ್ ಆಂಡ್ ಡ್ರೈವ್ ಪರಿಶೀಲನೆ ನಪದಲ್ಲಿ ಯುವತಿಯರನ್ನು ಸುಲಿಗೆ ಮಾಡಿದ ಆರೋಪದಲ್ಲಿ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.


ಜೀವನ್ ಬಿಮಾ ನಗರದ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ವೆಂಕಟಾಚಲಪತಿ, ಕಾನ್ಸ್‌ಟೆಬಲ್‌ಗಳಾದ ಹುಚ್ಚು ಸಾಬ್ ಕಡೆಮನಿ, ಗಿರೀಶ್, ಬಸಪ್ಪ ಅವರನ್ನು ಕರ್ತವ್ಯ ಲೋಪ ಮತ್ತು ಅಶಿಸ್ತಿನ ಆರೋಪದಡಿ ಸೇವೆಯಿಂದ ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಆದೇಶ ಹೊರಡಿಸಿದ್ದಾರೆ.


ಪೊಲೀಸರು ನಡೆಸಿದ್ದ ಸುಲಿಗೆ: ಏನಿದು ಘಟನೆ?


ಫೆಬ್ರವರಿ 23, 2024ರ ರಾತ್ರಿ 11 ಗಂಟೆಗೆ ಯುವತಿಯೊಬ್ಬರು ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಳೆ ಏರ್‌ಪೋರ್ಟ್‌ ರಸ್ತೆಯಲ್ಲಿ ಡ್ರಂಕ್ ಆಂಡ್ ಡ್ರೈನ್ ಪರಿಶೀಲನೆಯ ನೆಪದಲ್ಲಿ ಪೊಲೀಸರು ತಡೆದು ನಿಲ್ಲಿಸಿದರು.


ತಪಾಸಣೆ ವೇಳೆ ತಾನು ಮದ್ಯ ಸೇವನೆ ಮಾಡಿಲ್ಲ ಎಂದು ಪೊಲೀಸರನ್ನು ಯುವತಿ ಪರಿ ಪರಿಯಾಗಿ ಬೇಡಿಕೊಂಡರು. ಆದರೆ, ಅವರಿಗೆ ಕಿಂಚಿತ್ತೂ ಕರುಣೆ ಬರಲಿಲ್ಲ. ನೀವು ಮದ್ಯಪಾನ ಮಾಡಿದ್ದೀರಿ ಎಂದು ಪೊಲೀಸರು ಆಧಾರರಹಿತವಾಗಿ ವಾದಿಸಿದರು.


ಬಳಿಕ, ಕೇಸು ದಾಖಲು ಮಾಡದೇ ಇರಲು ರೂ. 15000/- ನೀಡುವಂತೆ ಡಿಮ್ಯಾಂಡ್‌ ಮಾಡಿದರು. ಹಣ ಪಡೆದುಕೊಳ್ಳಲು ಖಾಸಗಿ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಕಳುಹಿಸಿ ಎಟಿಎಂನಲ್ಲಿ ಹಣ ಡ್ರಾ ಮಾಡಿಸಿಕೊಳ್ಳಲು ಮುಂದಾದರು.


ಎಟಿಎಂನಲ್ಲಿ ತಾಂತ್ರಿಕ ಕಾರಣದಿಂದ ಹಣ ಬರದೇ ಇದ್ದಾಗ, ಪೆಟ್ರೋಲ್ ಬಂಕ್‌ಗೆ ಕರೆದೊಯ್ದು ಹಣ ಪಡೆಯಲು ಯತ್ನಿಸಿದರು. ಅದು ಸಾಧ್ಯವಾಗದೇ ಇದ್ದಾಗ, ಅಂತಿಮವಾಗಿ ಇರೊಬ್ಬ ಖಾಸಗಿ ವ್ಯಕ್ತಿಯ ಯುಪಿಐ ಖಾತೆಗೆ ರೂ. 8000/- ಹಣವನ್ನು ವರ್ಗಾಯಿಸಿಕೊಂಡರು.


ಈ ಕುರಿತು ಯುವತಿಯ ತಂದೆ ತನ್ನ ಎಕ್ಸ್‌ ಖಾತೆಯಲ್ಲಿ ಬರೆದು ಟ್ವೀಟ್ ಮಾಡಿದರು. ನಗರ ಪೊಲೀಸ್ ಆಯುಕ್ತರಿಗೆ ಅದನ್ನು ಟ್ಯಾಗ್ ಮಾಡಿದರು.


ಜೀವನ್ ಬೀಮಾ ನಗರದ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳ ಈ ಸುಲಿಗೆ ಆರೋಪ ವ್ಯಾಪಕವಾಗಿ ವೈರಲ್ ಆಯಿತು. ತಕ್ಷಣ ಎಚ್ಚೆತ್ತ ಪೊಲೀಸ್ ಇಲಾಖೆ ತನಿಖೆಗೆ ಒಳಪಡಿಸಿದರು. ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತನಿಖೆ ನಡೆಸಿ ನಗರ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದರು.


ತನಿಖಾ ವರದಿಯಲ್ಲಿ ಪೊಲೀಸ್ ಸಿಬ್ಬಂದಿ ಯುವತಿಯಿಂದ ಖಾಸಗಿ ವ್ಯಕ್ತಿಯ ಯುಪಿಐ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿರುವುದು ಖಚಿತಪಡಿಸಲಾಗಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು, ಇನ್ಸ್‌ಪೆಕ್ಟರ್ ಮತ್ತು ಇತರ ಮೂವರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.


ಇತ್ತೀಚಿನ ಸುದ್ದಿಗಳು