ಬೀದಿಬದಿ ವರ್ತಕರು, ಕ್ಯಾಟರಿಂಗ್ ಸಹಿತ ವ್ಯಾಪಾರಿಗಳಿಗೆ ಸಹಿ ಸುದ್ದಿ: ಪ್ರಧಾನಮಂತ್ರಿ ಆತ್ಮನಿರ್ಭರ್, ಪಿಎಂ ಸ್ವ-ನಿಧಿ ಸಾಲ ಸೌಲಭ್ಯ

ಬೀದಿಬದಿ ವರ್ತಕರು, ಕ್ಯಾಟರಿಂಗ್ ಸಹಿತ ವ್ಯಾಪಾರಿಗಳಿಗೆ ಸಹಿ ಸುದ್ದಿ: ಪ್ರಧಾನಮಂತ್ರಿ ಆತ್ಮನಿರ್ಭರ್, ಪಿಎಂ ಸ್ವ-ನಿಧಿ ಸಾಲ ಸೌಲಭ್ಯ





ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸಿಹಿ ಸುದ್ದಿ. ಕೇಂದ್ರ ಸರ್ಕಾರದ ವಿವಿಧ ಸಾಲ ಸೌಲಭ್ಯಗಳನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.



ಪ್ರಧಾನ್ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ, ಪಿ.ಎಮ್ ಸ್ವ-ನಿಧಿ ಯೋಜನೆಯಡಿ ಈ ವರೆಗೆ ಸಾಲ ಪಡೆಯದೇ ಇರುವ ಬೀದಿ ಬದಿ ವ್ಯಾಪಾರಿಗಳು ಈ ಸೌಲಭ್ಯವನ್ನು ಪಡೆದು ತಮ್ಮ ವ್ಯಾಪಾರದಲ್ಲಿ ಪ್ರಗತಿ ಕಾಣಬಹುದು.



ಈ ಕಿರು ಸಾಲ ಸೌಲಭ್ಯವು ಪ್ರಥಮ ಹಂತದಲ್ಲಿ 10,000ರೂ.ಗಳಿಗೆ ಸೀಮಿತವಾಗಿರುತ್ತದೆ. ಅದನ್ನು ಸಮರ್ಪಕವಾಗಿ ಮರುಪಾವತಿ ಮಾಡಿದರೆ, ನಂತರ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವವರಿಗೆ ಬಡ್ಡಿ ಸಹಾಯಧನ ಸೌಲಭ್ಯದೊಂದಿಗೆ ಮತ್ತಷ್ಟು ಸಾಲ ಸೌಲಭ್ಯ ದೊರೆಯಲಿದೆ.


ಸಾಲ ಮರುಪಾವತಿಸಿದ ಫಲಾನುಭವಿಗಳಿಗೆ ದ್ವಿತೀಯ ಹಂತದಲ್ಲಿ ರೂ. 20,000/-, ತೃತೀಯ ಹಂತದಲ್ಲಿ ರೂ. 50,000/- ಬ್ಯಾಂಕ್ ಸಾಲ ಸೌಲಭ್ಯ ದೊರೆಯಲಿದೆ. ಆನ್‌ಲೈನ್ ಯಾ ಡಿಜಿಟಲ್ ವ್ಯವಹಾರ ಮಾಡುವ ಬೀದಿಬದಿ ವ್ಯಾಪಾರಿಗಳಿಗೆ ವಾರ್ಷಿಕ ರೂ. 1,200/- ರೂ. ಕ್ಯಾಶ್ ಬ್ಯಾಕ್ ಸೌಲಭ್ಯ ಸಿಗಲಿದೆ.



ಈ ಸೌಲಭ್ಯವನ್ನು ಇನ್ನೂ ಇತರ ವಿಭಾಗಗಳಿಗೆ ವಿಸ್ತರಿಸಲಾಗಿದೆ. PM ಸ್ವ-ನಿಧಿ ಯೋಜನೆಯ ಸಾಲ ಸೌಲಭ್ಯವನ್ನು ಈ ಕೆಳಗಿನ ವ್ಯಾಪಾರಿಗಳು ಪಡೆಯಬಹುದಾಗಿದೆ.


ಹಾಲು ಮತ್ತು ದಿನಪತ್ರಿಕೆ ವಿತರಕರು

ಡೋಬಿ ಮತ್ತು ಇಸ್ತ್ರಿ ಸೇವೆ

ಹಳೆಯ ಪಾತ್ರೆಗಳ ವ್ಯಾಪಾರಿಗಳು

ಬಡಗಿ,

ಚಮ್ಮಾರರು,

ಬಿದಿರಿನ ಬುಟ್ಟಿ,

ಬೊಂಬು ಬಾಸ್ಕೆಟ್,

ಏಣಿ ವ್ಯಾಪಾರಸ್ಥರು,

ಹೂವಿನ ಕುಂಡಗಳನ್ನು ಮಾಡುವವರು,

ನೇಯ್ಗೆಗಾರರು,

ಎಳನೀರು ಮಾರಾಟಗಾರರು,

ಆಹಾರ ತಯಾರಿಸಿ ಮಾರಾಟ ಮಾಡುವವರು (ಕ್ಯಾಟರಿಂಗ್ ಸರ್ವಿಸ್)

ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಕೂಡ ವಿಸ್ತರಿಸಲಾಗಿದೆ.


PM ಸ್ವ-ನಿಧಿ ಯೋಜನೆಯಡಿ ಇದುವರೆಗೆ ಸಾಲ ಪಡೆಯದವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಬ್ಯಾಂಕ್ ಸಾಲ ವಿತರಿಸಲು, ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಬ್ಯಾಂಕ್ ಸಾಲ ಮಂಜೂರಾತಿ ಮತ್ತು ನಗದು ಬಿಡುಗಡೆ ಮತ್ತು ಸ್ವ-ನಿಧಿ ಸೇ ಸಮೃದ್ಧಿ ಕಾರ್ಯಕ್ರಮಡಿ ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬದವರು ಸಾಮಾಜಿಕ ಭದ್ರತಾ ಯೋಜನೆಗಳ ಸದುಪಯೋಗ ಪಡೆಯಬಹುದು.


ಇದೇ ವೇಳೆ, ಸಾಮಾಜಿಕ ಮತ್ತು ಅರ್ಥಿಕ ಸಮೀಕ್ಷೆ, ಬ್ಯಾಂಕ್ ಶಾಖಾ ಮಟ್ಟದಲ್ಲಿ ಸಾಲ ಮೇಳ, ಮೈ ಬೀ ಡಿಜಿಟಲ್ ಕ್ಯಾಂಪ್, ಆರೋಗ್ಯ ಶಿಬಿರ, ಆಹಾರ ಮೇಳ ಇತ್ಯಾದಿ ಕಾರ್ಯಕ್ರಮಗಳನ್ನು ಸ್ವನಿಧಿ ಸೇ ಸಮೃದ್ಧಿ ಮಾಸಾಚರಣೆ ಪ್ರಯುಕ್ತ 2023ರ ಸೆ.16ರಿಂದ ಅ.15ರ ವರೆಗೆ ನಗರದ ಪ್ರಮುಖ ಬ್ಯಾಂಕುಗಳ ಸಹಯೋಗದೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ, ಸುರತ್ಕಲ್ ವಲಯ ಕಚೇರಿ ಮತ್ತು ಕದ್ರಿ ವಲಯ ಕಚೇರಿಯಲ್ಲಿ ಆಯೋಜಿಸಲಾಗಿರುತ್ತದೆ.


ಈ ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳು ಭಾಗವಹಿಸಿ ಪ್ರಧಾನ್ ಮಂತ್ರಿ ಅತ್ಮ ನಿರ್ಭರ್ ನಿಧಿ ಮತ್ತು PM ಸ್ವ-ನಿಧಿ ಯೋಜನೆಯ ಸೌಲಭ್ಯ ಪಡೆಯುವಂತೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಮನವಿ ಮಾಡಿದ್ದಾರೆ.