
ಗೋಹತ್ಯೆ ತಡೆದರೆ ಭೂಮಿಯ ಮೇಲಿನ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ : ಗುಜರಾತ್ ನ್ಯಾಯಾಲಯ
Monday, January 23, 2023
ಗುಜರಾತ್: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಗುಜರಾತ್ನ ನ್ಯಾಯಾಲಯವೊಂದು ಗೋಹತ್ಯೆಯ ಕುರಿತು ಕೆಲವು ಕುತೂಹಲಕಾರಿ ಅವಲೋಕನಗಳನ್ನು ಮಾಡಿದೆ. “ಗೋಹತ್ಯೆ ನಿಲ್ಲಿಸಿದರೆ ಭೂಮಿಯ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ." ಗುಜರಾತ್ನ ತಾಪಿ ಜಿಲ್ಲಾ ನ್ಯಾಯಾಲಯದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.
“ಗೋವಿನ ಸಗಣಿಯಿಂದ ಮಾಡಿದ ಮನೆಗಳು ಪರಮಾಣು ವಿಕಿರಣದಿಂದ ಪ್ರಭಾವಿತವಾಗಿಲ್ಲ ಎಂದು ವಿಜ್ಞಾನವು ಸಾಬೀತುಪಡಿಸಿದೆ. ಗೋಮೂತ್ರದ ಬಳಕೆಯು ಅನೇಕ ಗುಣಪಡಿಸಲಾಗದ ಕಾಯಿಲೆಗಳಿಗೆ ಪರಿಹಾರವಾಗಿದೆ..” ಎಂದು ನ್ಯಾಯಾಧೀಶರು ಪ್ರತಿಪಾದಿಸಿದರು
ಕಳೆದ ನವೆಂಬರ್ನಲ್ಲೇ ತಾಪಿ ಜಿಲ್ಲಾ ನ್ಯಾಯಾಲಯದ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಸಮೀರ್ ವಿನೋದಚಂದ್ರ ವ್ಯಾಸ್ ಈ ಆದೇಶವನ್ನು ಹೊರಡಿಸಿದ್ದು, ಗೋಸಂರಕ್ಷಣೆಯ ಸುತ್ತಲಿನ ಎಲ್ಲಾ ಚರ್ಚೆಗಳನ್ನು ಕಾರ್ಯರೂಪಕ್ಕೆ ತರದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
“ಗೋವು ಕೇವಲ ಪ್ರಾಣಿ ಮಾತ್ರವಲ್ಲ ಅದು ತಾಯಿ. ಗೋವು 68 ಕೋಟಿ ಪವಿತ್ರ ಸ್ಥಳಗಳು ಮತ್ತು 33 ಕೋಟಿ ದೇವರುಗಳ ಜೀವಂತ ಮನೆಯಾಗಿದೆ.ಇಡೀ ಬ್ರಹ್ಮಾಂಡದ ಮೇಲೆ ಗೋವಿನ ಬಾಧ್ಯತೆ ಬಗ್ಗೆ ಯಾವುದೇ ವಿವರಣೆಯ ಅವಶ್ಯಕತೆ ಇಲ್ಲ..” ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.
ಇಷ್ಟೇ ಅಲ್ಲದೇ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ವಿವಿಧ ಶ್ಲೋಕಗಳನ್ನು ಉಲ್ಲೇಖಿಸಿದ್ದು, “ಗೋವುಗಳನ್ನು ಅತೃಪ್ತಿಗೊಳಿಸಿದರೆ ನಮ್ಮ ಸಂಪತ್ತು ಮತ್ತು ಆಸ್ತಿ ಕಣ್ಮರೆಯಾಗುತ್ತದೆ..” ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.