![ನೇಮಕವಾಗಿದ್ದು ಅಣ್ಣ, Duty ಮಾಡಿದ್ದು ತಮ್ಮ - ಶಿಕ್ಷಣ ಇಲಾಖೆಯನ್ನೇ ಯಾಮಾರಿಸಿ 24 ವರ್ಷ ಪಾಠ ಮಾಡಿದ 'ಶಿಕ್ಷ'ಕ ನೇಮಕವಾಗಿದ್ದು ಅಣ್ಣ, Duty ಮಾಡಿದ್ದು ತಮ್ಮ - ಶಿಕ್ಷಣ ಇಲಾಖೆಯನ್ನೇ ಯಾಮಾರಿಸಿ 24 ವರ್ಷ ಪಾಠ ಮಾಡಿದ 'ಶಿಕ್ಷ'ಕ](https://lh3.googleusercontent.com/-0s-ovvCvZ_4/YjwQx63nsRI/AAAAAAAAHAs/27CvFsQC07oCGg2jVnFHmpHYuT7PjjftgCNcBGAsYHQ/s1600/1648103619093575-0.png)
ನೇಮಕವಾಗಿದ್ದು ಅಣ್ಣ, Duty ಮಾಡಿದ್ದು ತಮ್ಮ - ಶಿಕ್ಷಣ ಇಲಾಖೆಯನ್ನೇ ಯಾಮಾರಿಸಿ 24 ವರ್ಷ ಪಾಠ ಮಾಡಿದ 'ಶಿಕ್ಷ'ಕ
Thursday, March 24, 2022
ಹುಣಸೂರು: ಹುದ್ದೆಗೆ ಸೇರುವ ಕೆಲವೇ ದಿನ ಮೊದಲು ಮೃತಪಟ್ಟ ಅಣ್ಣನ ನೇಮಕಾತಿ ಪತ್ರ ಇಟ್ಟು ಶಿಕ್ಷಣ ಇಲಾಖೆ ಸೇರಿದ ತಮ್ಮ ಬರೋಬ್ಬರಿ 24 ವರ್ಷಗಳ ಕಾಲ ಮಕ್ಕಳಿಗೆ ಪಾಠ ಬೋಧಿಸಿದ್ದು, ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕನಾಗಿ ನೇಮಕಗೊಂಡಿದ್ದ ಲೋಕೇಶ್ ಗೌಡ ಹೆಸರಲ್ಲಿ ಆತನ ಕಿರಿಯ ಸಹೋದರ ಲಕ್ಷ್ಮಣೇಗೌಡ ಕೆಲಸ ಮಾಡಿದ್ದು, ಇದೀಗ ಜೈಲು ಸೇರಿದ್ದಾನೆ.
ಮೂಲತಃ ಕೆ.ಆರ್. ನಗರ ತಾಲೂಕು ಹೆಬ್ಬಾಳು ಗ್ರಾಮದಲ್ಲಿ ಲಕ್ಷ್ಮಣೇಗೌಡರ ಕುಟುಂಬ ವಾಸವಿದ್ದು, 1994-95ರಲ್ಲಿ ಲಕ್ಷ್ಮಣೇಗೌಡರ ಹಿರಿಯ ಸಹೋದರ ಲೋಕೇಶ್ ಗೌಡ ಸರ್ಕಾರಿ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ, ಕೆಲಸಕ್ಕೆ ಸೇರುವ ಮುನ್ನವೇ ಅವರು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಅಣ್ಣನಿಗೆ ಲಭಿಸಿದ್ದ ಶಿಕ್ಷಣ ಇಲಾಖೆಯ ನೇಮಕಾತಿ ಪತ್ರದೊಂದಿಗೆ ಲಕ್ಷ್ಮಣೇಗೌಡ ತಾನೇ ಲೋಕೇಶ್ ಎಂದು ಹೇಳಿಕೊಂಡು ಶಿಕ್ಷಣ ಇಲಾಖೆಗೆ ಸೇರಿದ್ದ. ಅಲ್ಲದೇ ಪಿರಿಯಾಪಟ್ಟಣದ ಮುದ್ದನಹಳ್ಳಿ ಗ್ರಾಮದ ಶಾಲೆಯಲ್ಲಿ ಕರ್ತವ್ಯವನ್ನೂ ಆರಂಭಿಸಿದ್ದ.
ನಂತರದ ವರ್ಷಗಳಲ್ಲಿ ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಕರ್ತವ್ಯ ಮುಂದುವರಿಸಿದ್ದರೂ ಇಲಾಖೆಗೆ ಮಾತ್ರ ಈ ವಿಷಯ ಗೊತ್ತಾಗಲೇ ಇಲ್ಲ.
2019ರಲ್ಲಿ ಹುಣಸೂರಿನ ಪತ್ರಕರ್ತರೋರ್ವರಿಗೆ ಈ ಕುರಿತು ಮಾಹಿತಿ ಲಭ್ಯವಾಗಿದ್ದು, ಇದರ ಬೆನ್ನ ಹಿಂದೆ ಹೊರಟಾಗ ಈ ವಿಚಾರ ಹೊರಬಂದಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಅವರು ದೂರು ನೀಡಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಸೂಕ್ತ ಮತ್ತು ಅಧಿಕೃತ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲನಾಗಿರುವ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ದೂರಿನ ಆಧಾರದಲ್ಲಿ ಲಕ್ಷ್ಮಣೇಗೌಡನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.