INDIA

ಆಸ್ಕರ್ ಫೆರ್ನಾಂಡೀಸ್ ಪರಿಸ್ಥಿತಿ ಚಿಂತಾಜನಕ- ಐಸಿಯು ಬೆಡ್ ನಲ್ಲಿದ್ದ ಅವರನ್ನು ನೋಡಿ ಬಂದ ಜನಾರ್ದನ ಪೂಜಾರಿ ಬಿಕ್ಕಿ‌ ಬಿಕ್ಕಿ ಕಣ್ಣೀರಿಟ್ಟದ್ದೇಕೆ? ( Video)

ಮಂಗಳೂರು; ರಾಷ್ಟ್ರ ರಾಜಕಾರಣದಲ್ಲಿ ಮಿಂಚಿದ ಕರಾವಳಿಯ ಆಸ್ಕರ್ ಫೆರ್ನಾಂಡೀಸ್ ಮತ್ತು ಜನಾರ್ದನ ಪೂಜಾರಿ ಬಹುಕಾಲದ ಸ್ನೇಹಿತರು. ಆಸ್ಕರ್ ಫೆರ್ನಾಂಡೀಸ್ ಯೋಗ ಮಾಡುವ ವೇಳೆ ಜಾರಿ ಬಿದ್ದು ತಲೆಯ ಒಳಭಾಗದಲ್ಲಿ‌ ಗಾಯವಾಗಿ ಗಂಭೀರ ಸ್ಥಿತಿಯಲ್ಲಿ  ಇದ್ದಾರೆ.  ಅವರನ್ನು ಇಂದು (ಜುಲೈ 21) ರಂದು ಆಸ್ಪತ್ರೆಗೆ ಕಾಣಲು ಹೋದ ಜನಾರ್ದನ ಪೂಜಾರಿ ಅವರು ಆಸ್ಪತ್ರೆಯಿಂದ ಹೊರಬಂದು ಬಿಕ್ಕಿ ಬಿಕ್ಕಿ‌ ಕಣ್ಣೀರಿಟ್ಟಿದ್ದಾರೆ.



ಸಮಾನ ವಯಸ್ಸಿನ ಜನಾರ್ದನ ಪೂಜಾರಿ ಮತ್ತು ಆಸ್ಕರ್ ಫೆರ್ನಾಂಡೀಸ್ ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು. ಇಬ್ಬರು ಕಾಂಗ್ರೆಸ್ ‌ನಲ್ಲಿ ಕೇಂದ್ರ ಮಟ್ಟದ ನಾಯಕರಾಗಿ, ಕೇಂದ್ರದ ಸಚಿವರಾಗಿ, ಇಂದಿರಾಗಾಂಧಿಯವರ ಕಾಲದಿಂದ ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದವರು. ಇತ್ತೀಚೆಗೆ ಇಬ್ಬರು ಸಕ್ರಿಯ ರಾಜಕಾರಣದಿಂದ ದೂರ ಇದ್ದರೂ ಸ್ನೇಹವನ್ನು ಉಳಿಸಿಕೊಂಡಿದ್ದರು. ಎರಡು ವರ್ಷದ ಹಿಂದೆ ಆಸ್ಕರ್ ಅವರು ಅನಾರೋಗ್ಯದಲ್ಲಿರುವ ಮಾಹಿತಿ ಪಡೆದ ಜನಾರ್ದನ ಪೂಜಾರಿ ದೇವಸ್ಥಾನ, ‌ಮಸೀದಿ ಚರ್ಚ್ ಗಳಲ್ಲಿ ಅವರ ಆರೋಗ್ಯಕ್ಕಾಗಿ ಪೂಜೆ ಸಲ್ಲಿಸಿದ್ದರು.

ಆಸ್ಕರ್ ಫೆರ್ನಾಂಡೀಸ್ ಅವರು ಆದಿತ್ಯವಾರ ಮನೆಯಲ್ಲಿ ಯೋಗ ಮಾಡುವ ವೇಳೆ ಜಾರಿ ಬಿದ್ದು  ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರನ್ನು ನೋಡಿ ಬಂದ ಜನಾರ್ದನ ಪೂಜಾರಿ ಗೆಳೆಯನ ಸ್ಥಿತಿ ನೆನೆದು‌ ಭಾವುಕರಾಗಿದ್ದಾರೆ. ಆಸ್ಕರ್ ಫೆರ್ನಾಂಡೀಸ್ ಗೆ ಏನೂ ಆಗುವುದಿಲ್ಲ. ಅವರು ಬದುಕುತ್ತಾರೆ ಎಂದಷ್ಟೆ  ಹೇಳಿ ಆಸ್ಕರ್ ಪರಿಸ್ಥಿತಿ ಗೆ ಕಣ್ಣೀರಿಟ್ಟರು
ಟ್ಯಾಗ್‌ಗಳು: INDIA MANGALORE STATE video