
Mangaluru-ಪಕ್ಕದ ಮನೆಗೆ ಕನ್ನ ಹಾಕಿದ ಭೂಪನನ್ನು ಜೈಲಿಗಟ್ಟಿದ ಪೊಲೀಸರು!
ಮಂಗಳೂರು: ಪಕ್ಕದ ಮನೆಗೇ ಕನ್ನ ಹಾಕಿ 11 ಲಕ್ಷ ರೂ. ಮೌಲ್ಯದ ನಗ-ನಗದು ಕಳವುಗೈದಿರುವ ಆರೋಪಿಯನ್ನು ಪಣಂಬೂರು ಪೊಲೀಸರು ದೂರು ದಾಖಲಾದ ಕೆಲವೇ ಘಂಟೆಯೊಳಗೆ ಬಂಧಿಸಿ ಜೈಲಿಗಟ್ಟಿದ್ದಾರೆ.
ನಗರದ ಕೆಳಗಿನ ತೋಕೂರು ನಿವಾಸಿ ದಾವೂದ್ ಹಕೀಂ(30) ಬಂಧಿತ ಆರೋಪಿ.
ಆರೋಪಿ ದಾವೂದ್ ಹಕೀಂ ನಗರದ ಕೆಳಗಿನ ತೋಕೂರಿನಲ್ಲಿರುವ ಕಳವುಗೈದ ಮನೆಯ ನೆರೆಮನೆಯವನಾಗಿದ್ದನು. ಆ ಮನೆಯವರೊಂದಿಗೆ ಬಹಳ ಆತ ಅನ್ಯೋನ್ಯತೆಯಿಂದಿದ್ದು, ಆ ಮನೆಯ ಆಗುಹೋಗುಗಳನ್ನು ಬಲ್ಲವನಾಗಿದ್ದ. ಆದರೆ ಹಣಕಾಸಿನ ತೊಂದರೆಯಲ್ಲಿದ್ದ ಆರೋಪಿ ದಾವೂದ್ ಹಕೀಂ ಪಕ್ಕದ ಮನೆಯವರು 2 ದಿನಗಳ ಕಾಲ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಆ ಮನೆಯ ಹೆಂಚು ತೆಗೆದು ಒಳಹೋಗಿ ಕಳವುಗೈದಿದ್ದ.
ಮನೆಯವರು ಮರಳಿ ಬಂದಾಗ ಕಳವು ನಡೆದಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿ ದಾವೂದ್ ಹಕೀಂನನ್ನು ಬಂಧಿಸಿದ್ದಾರೆ. ಬಂಧಿತನಿಂದ ಪೊಲೀಸರು 248.600 ಗ್ರಾಂ ತೂಕದ 11,06,270 ರೂ. ಮೌಲ್ಯದ
ಚಿನ್ನಾಭರಣ ಸಹಿತ 4000 ರೂ. ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿಪರೀತ ಸಾಲ ಮಾಡಿಕೊಂಡಿದ್ದು, ಹಣಕಾಸಿನ ತೊಂದರೆಯಲ್ಲಿರುವ ಹಿನ್ನೆಲೆಯಲ್ಲಿ ಕಳವುಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.