MANGALORE

ಪರಪ್ಪನ ಅಗ್ರಹಾರ ಸೇರಿದ ರಾಜೇಶ್ವರಿ ಶೆಟ್ಟಿ: ಅಲ್ಲಿ ನಡೆದಿದ್ದೇನು ಗೊತ್ತಾ?

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಅವರನ್ನು ಪತ್ನಿ, ಪುತ್ರ ಹಾಗೂ ಗೆಳೆಯ ನಂದಳಿಕೆಯ ಜೋತಿಷಿ ನಿರಂಜನ್‌ ಭಟ್‌ ಸೇರಿಕೊಂಡು ಕೊಲೆ ಮಾಡಿ ನಂದಳಿಕೆ ಯಾಗಶಾಲೆಯಲ್ಲಿ ಸುಟ್ಟು ಹಾಕಿರುವ ಪ್ರಕರಣದಲ್ಲಿ  ರಾಜೇಶ್ವರಿ ಶೆಟ್ಟಿ ಮತ್ತು  ಪುತ್ರ ನವನೀತ ಶೆಟ್ಟಿ ಹಾಗೂ ಗೆಳೆಯ ನಿರಂಜನ್ ಭಟ್ ಅವರಿಗೆ ಜೀವಿತಾವಧಿ ಶಿಕ್ಷೆಯಾಗಿದ್ದು, ಮಂಗಳವಾರ ರಾತ್ರಿ ರಾಜೇಶ್ವರಿ ಶೆಟ್ಟಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದ್ದಾಳೆ. ಪುತ್ರ ನವನೀತ್‌ ಶೆಟ್ಟಿ, ಗೆಳೆಯ ನಿರಂಜನ್‌ ಭಟ್‌ ಈಗಾಗಲೇ ಪರಪ್ಪನ ಅಗ್ರಹಾರದಲ್ಲಿದ್ದಾರೆ.

ಜಿಲ್ಲಾ ನ್ಯಾಯಾಲಯದ ತೀರ್ಪಿನ ಬಳಿಕ ರಾಜೇಶ್ವರಿ ಶೆಟ್ಟಿಯನ್ನು ಕರೆದು ಕೊಂಡು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ‌ ಟೆಸ್ಟ್ ವರದಿ ನೆಗೆಟಿವ್‌ ಬಂದಿದ್ದು, ಆ ಬಳಿಕ ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸ್‌ ಸಹಿತ ಬಿಗು ಭದ್ರತೆಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು, ಪರಪ್ಪನ ಅಗ್ರಹಾರಕ್ಕೆ ಹಸ್ತಾಂತರಿಸಲಾಗಿದೆ.

ಮಣಿಪಾಲ ಪೊಲೀಸರು, ಮಹಿಳಾ ಠಾಣೆಯ ಎಸ್‌ ಐ, ಸಶಸ್ತ್ರ ಹೊಂದಿರುವ ಸಿಬಂದಿ ಜತೆ ಜಿಲ್ಲಾ ಸಶಸ್ತ್ರ ವಾಹನದಲ್ಲಿ ರಾಜೇಶ್ವರಿ ಶೆಟ್ಟಿಯನ್ನು ಕರೆದುಕೊಂಡು ಹೋಗಲಾಗಿದೆ.

ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರು ತಲುಪಿದ್ದು, ಜೈಲರ್‌ ಅವರಿಗೆ ಹಸ್ತಾಂತರಿಸಲಾಗಿದೆ. ಜೈಲಿನಲ್ಲಿರುವ ಪ್ರತ್ಯೇಕ ಸೆಲ್‌ ನಲ್ಲಿ 14 ದಿನಗಳ ಕ್ವಾರಂಟೈನ್‌ ಮುಗಿಸಿ ಶಿಕ್ಷೆಯಾಗಿರುವ ಸೆಲ್‌ ನಲ್ಲಿ ಹಾಕಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಟ್ಯಾಗ್‌ಗಳು: MANGALORE SPECIAL