
ಕಾಡಿನೊಳಗಡೆ ಒಂದೇ ಮರಕ್ಕೆ ನೇಣುಬಿಗಿದು ಪ್ರೇಮಿಗಳ ಆತ್ಮಹತ್ಯೆ: 15 ದಿನಗಳ ಬಳಿಕ ಪ್ರಕರಣ ಬಯಲು
ನಿಜಾಮಾಬಾದ್, ತೆಲಂಗಾಣ: ಕಾಡಿನೊಳಗಡೆ ಪ್ರೇಮಿಗಳಿಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು 15 ದಿನಗಳ ಬಳಿಕ ಬೆಳಕಿಗೆ ಬಂದಿದೆ.
ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಈ ಪ್ರಕರಣ ನಡೆದಿದ್ದು, ಮೊಸ್ರಾ ಮಂಡಲಂನ ತಿಮ್ಮಾಪುರ ಗ್ರಾಮದ ನಿವಾಸಿ ಮೋಹನ್ ಹಾಗೂ ಕಾಮರೆಡ್ಡಿ ಜಿಲ್ಲೆಯ ನಿಜಾಂನಗರ್ ಮಂಡಲಂಗೆ ಸೇರಿದ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ನಿಜಾಮಾಬಾದ್ ಜಿಲ್ಲೆಯ ವರ್ನಿ ಮಂಡಲಂನಲ್ಲಿರುವ ಶಿವಾರು ಎಂಬಲ್ಲಿರುವ ಅರಣ್ಯ ಪ್ರದೇಶದಲ್ಲಿ ಒಂದೇ ಮರಕ್ಕೆ ನೇಣುಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರಿಬ್ಬರೂ 15 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮಿಗೆ ಆರು ತಿಂಗಳ ಹಿಂದೆಯೇ ಬೇರೊಬ್ಬನ ಜೊತೆ ವಿವಾಹ ನಡೆದಿದೆ ಎಂಬ ಮಾಹಿತಿ ದೊರಕಿದೆ. ಸದ್ಯಕ್ಕೆ ಎರಡೂ ಕುಟುಂಬದವರ ವಿಚಾರಣೆ ನಡೆಸಿರುವ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.