
ಅತ್ತೆ-ಸೊಸೆ ಗಲಾಟೆ: ಸಾವಿಗೆ ಶರಣಾದ ಸೊಸೆ - ಆಕೆ ಬರೆದಿಟ್ಟ ಪತ್ರದಲ್ಲಿ ಏನಿದೆ ಗೊತ್ತಾ?
ಮೈಸೂರು: ಅತ್ತೆ ಮತ್ತು ಸೊಸೆಯ ನಡುವಿನ ಗಲಾಟೆಯಲ್ಲಿ ಸೊಸೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಿ.ನರಸೀಪುರ ತಾಲೂಕು ಯಾಕನೂರು ಗ್ರಾಮದಲ್ಲಿ ನಡೆದಿದೆ.
ಕಾವ್ಯಾ (21) ಮೃತ ದುರ್ದೈವಿ. ಕಾವ್ಯಾ ಒಂದೂವರೆ ವರ್ಷದ ಹಿಂದೆ ಯಾಕನೂರು ಗ್ರಾಮದ ಚಂದ್ರಶೇಖರ್ ಜತೆ ವಿವಾಹವಾಗಿದ್ದಳು.ಸಣ್ಣಪುಟ್ಟ ವಿಚಾರಗಳಿಗೆ ಅತ್ತೆ ಜತೆ ಜಗಳ ನಡೆಯುತ್ತಿತ್ತು. ಅತ್ತೆ ಕಿರುಕುಳಕ್ಕೆ ಬೇಸತ್ತ ಕಾವ್ಯ 3 ದಿನಗಳ ಹಿಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಾವ್ಯ ಮೃತಪಟ್ಟಿದ್ದಾಳೆ.
ಸಾವಿಗೆ ಅತ್ತೆಯೇ ಕಾರಣ ಎಂದು ಸಾವಿಗೂ ಮುನ್ನ ಕಾವ್ಯಾ ಹೇಳಿಕೆ ನೀಡಿದ್ದಾಳೆ. ಗಂಡನ ತಪ್ಪು ಏನೂ ಇಲ್ಲ. ಆತನಿಗೆ ಏನೂ ಮಾಡಬೇಡಿ ಎಂದಿದ್ದಾಳೆ. ಕಾವ್ಯಾ ಪಾಲಕರು ಆಕೆಯ ಅತ್ತೆ ಮತ್ತು ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.