GLAMOUR

ಮದುವೆಯ ದಿನವೇ ಪ್ರಿಯಕರನೊಂದಿಗೆ ಪರಾರಿಯಾಗಲು ಚ್ಯಾಟಿಂಗ್: ಸಿಕ್ಕಿಬಿದ್ದ ಪ್ರಿಯಕರ

ಮಹಬೂಬ್​ನಗರ: ಮದುವೆಗೆ ತಯಾರಾಗಿರುವ ವಧುವೋರ್ವಳು ಮುಹೂರ್ತಕ್ಕೇ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗ ತನ್ನ ಪ್ರಿಯಕರನೊಂದಿಗೆ ಓಡಿಹೋಗುವ ಪ್ಲ್ಯಾನ್ ಮಾಡಿದ್ದಾಳೆ. ಅದಕ್ಕಾಗಿ ಆತನಿಗೆ  ಸಂದೇಶ ರವಾನಿಸಿದ್ದು, ಈ ವಿಚಾರ ಕುಟುಂಬಸ್ಥರಿಗೆ ತಿಳಿದು ಎಲ್ಲವೂ ಎಡವಟ್ಟಾಗಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಶಾದ್​ನಗರದಲ್ಲಿ ನಡೆದಿದೆ.

ಯುವತಿಗೆ ಮಹಬೂಬ್​ನಗರ ಜಿಲ್ಲೆಯ ಗ್ರಾಮವೊಂದರ ಯುವಕನೊಂದಿಗೆ ಮದುವೆ ನಿಶ್ಚಿಯವಾಗಿದೆ. ರವಿವಾರ ಮದುವೆಯಿದ್ದ ಹಿನ್ನೆಲೆ ವಧುವಿನ ಕುಟುಂಬ ವರನ ಗ್ರಾಮಕ್ಕೆ ಶನಿವಾರವೇ ತೆರಳಿದೆ. ರವಿವಾರ ಮದುವೆ ಮಂಟಪದಲ್ಲಿ ವಧು ಮೊಬೈಲ್​ನಲ್ಲಿ ಚಾಟಿಂಗ್​ ಮತ್ತು ಮಾತನಾಡುತ್ತಿರುವುದು ಕೆಲ ಬಂಧುಗಳು ಗುರುತಿಸಿದ್ದಾರೆ.

ಅಲ್ಲದೆ ಮದುವೆ ಮಂಟಪದ ಬಳಿ ಯುವಕನೋರ್ವನು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡಿದೆ. ಈತನ ಬಗ್ಗೆ ಬಂಧುಗಳು ಯುವಕನನ್ನು ಹಿಡಿದು ಥಳಿಸಿದ್ದಾರೆ. ಆಗ ವಿಚಾರ ಬೆಳಕಿಗೆ ಬಂದಿದೆ. ತಾನು ಹಾಗೂ ವಧು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆ ಬಳಿಕ ಈ ದಿನ ರಾತ್ರಿ ಪರಾರಿಯಾಗಲು ಯುವತಿ ಸಂದೇಶ ಕಳುಹಿದ್ದಾಳೆ. ಹೀಗಾಗಿ ನಾನು ಯುವತಿ ಊರಿನಿಂದ ಫಾಲೋ ಮಾಡಿಕೊಂಡು ಬಂದಿದ್ದೇನೆ' ಎಂದು ಯುವಕ ತನ್ನ ಬಳಿಯಿರುವ ಫೋಟೋಗಳನ್ನು ಯುವತಿ ಬಂಧುಗಳಿಗೆ ತೋರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಇದಾದ ಬಳಿಕ ಯುವತಿ ಮತ್ತು ಯುವಕನನ್ನು ಪೊಲೀಸ್​ ಠಾಣೆಗೆ ಕರೆದೊಯ್ಯಲಾಗಿದೆ. ಠಾಣೆಯಲ್ಲಿ ನಡೆದ ವಿಷಯದ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾರೆ. ಆದರೆ ಯಾರೂ ದೂರು ನೀಡಿಲ್ಲ ಎಂದು ಪೊಲೀಸ್​​ ಅಧಿಕಾರಿ ಭಾಗ್ಯಲಕ್ಷ್ಮಿರೆಡ್ಡಿ ತಿಳಿಸಿದ್ದಾರೆ. ಬಳಿಕ ವರ ಮತ್ತು ವಧುವನ್ನು ಅವರ ಕುಟುಂಬಗಳಿಗೆ ಕಳುಹಿಸಲಾಗಿದೆ. ಯುವಕನನ್ನು ಸಹ ಬಿಟ್ಟು ಬಿಡಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.
ಟ್ಯಾಗ್‌ಗಳು: GLAMOUR INDIA