ಕರೋನ ವೈರಸ್ ಕುರಿತು ಸುಳ್ಳು ಮಾಹಿತಿ: ನಟಿ ವಿರುದ್ಧ ದೂರು ದಾಖಲು

 ನವದೆಹಲಿ: ಐಶಾ ಸುಲ್ತಾನ ಅವರು ಲಕ್ಷದ್ವೀಪದ ಚೆತಿಯಾತ್ ದ್ವೀಪದ ನಿವಾಸಿ. ಲಕ್ಷದ್ವೀಪ ಮೂಲದ ಮಾಡೆಲ್​ ಮತ್ತು ನಟಿ ಆಗಿರುವ ಆಯಿಷಾ ಸುಲ್ತಾನ ಮಲಯಾಳಂ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಟಿವಿ ಮಾಧ್ಯಮದ ಚರ್ಚಾ ಕಾರ್ಯಕ್ರಮದಲ್ಲಿ ಕರೊನಾ ವೈರಸ್​ ಕುರಿತು ಸುಳ್ಳು ಸುದ್ದಿ ಹರಡಿದ್ದಾರೆ ಎಂದು ಲಕ್ಷದ್ವೀಪದ ನಟಿ-ಮಾಡೆಲ್​ ಆಯಿಷಾ ಸುಲ್ತಾನರನ್ನು ದೇಶದ್ರೋಹ ಪ್ರಕರಣದಡಿಯಲ್ಲಿ ಲಕ್ಷದ್ವೀಪ ಪೊಲೀಸರು ಬಂಧಿಸಿದ್ದಾರೆ. 

ಕವರತ್ತಿ ಪೊಲೀಸರು ದಾಖಲಿಸಿರುವ ಎಫ್​ಐಆರ್​ ಪ್ರಕಾರ ಭಾರತೀಯ ದಂಡ ಸಂಹಿತೆಯ 124 ಎ (ದೇಶದ್ರೋಹ) ಮತ್ತು 153 ಬಿ (ದ್ವೇಷ ಭಾಷಣ) ಸೆಕ್ಷನ್​ ಅಡಿಯಲ್ಲಿ ಆಯಿಷಾ ಸುಲ್ತಾನ ವಿರುದ್ಧ  ಲಕ್ಷದ್ವೀಪ ಘಟಕದ ಬಿಜೆಪಿ ಅಧ್ಯಕ್ಷ ಅಬ್ದುಲ್​ ಖಾದರ್​ ದೂರು ದಾಖಲಿಸಿದ್ದಾರೆ.     

 ಆಯಿಷಾ ವಿರುದ್ಧ ಕವರತ್ತಿ ಪೊಲೀಸ್​ ಠಾಣೆಯಲ್ಲಿ ಬುಧವಾರ ಸಲ್ಲಿಕೆಯಾಗಿರುವ ದೂರಿನ ಪ್ರಕಾರ ಮಲಯಾಳಂ ಟಿವಿ ಚಾನೆಲ್​ನಲ್ಲಿ ಚರ್ಚಾ ಕಾರ್ಯಕ್ರಮದ ವೇಳೆ, ಲಕ್ಷದ್ವೀಪದಲ್ಲಿ ಕರೊನಾ ಹರಡಿಸಲು ಕೇಂದ್ರ ಸರ್ಕಾರ ಜೈವಿಕ ಅಸ್ತ್ರ ಬಳಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಎಂದು ಉಲ್ಲೇಖವಾಗಿದೆ. ಲಕ್ಷದ್ವೀಪದಲ್ಲಿ ಕರೊನಾ ಶೂನ್ಯ ಪ್ರಕರಣಗಳಿದ್ದವು. ಇಂದು ದಿನವೊಂದಕ್ಕೆ 100 ಪ್ರಕರಣಗಳು ವರದಿಯಾಗುತ್ತಿವೆ. ಇದು ಕೇಂದ್ರ ಸರ್ಕಾರ ಜೈವಿಕ ಅಸ್ತ್ರದ ಪರಿಣಾಮ ಎಂದು ಸ್ಪಷ್ಟವಾಗಿ ಹೇಳುತ್ತೇನೆಂದು ಡಿಬೇಟ್​ ಕಾರ್ಯಕ್ರಮದಲ್ಲಿ ಆಯಿಷಾ ಸುಲ್ತಾನ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿರುವ ಬಿಜೆಪಿ ಅಧ್ಯಕ್ಷ ಆಯಿಷಾ ಅವರ ಹೇಳಿಕೆ ದೇಶದ್ರೋಹದ್ದಾಗಿದೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ದೂರಿನ ಬೆನ್ನಲ್ಲೇ ಫೇಸ್​ಬುಕ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಆಯಿಷಾ, ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದಾಗ್ಯೂ, ಸತ್ಯ ಮಾತ್ರ ಮೇಲುಗೈ ಸಾಧಿಸುತ್ತದೆ. ದೂರು ದಾಖಲಿಸಿದ ಬಿಜೆಪಿ ನಾಯಕರು ಸಹ ಲಕ್ಷದ್ವೀಪದವರು. ತನ್ನ ನೆಲಕ್ಕೆ ದ್ರೋಹ ಮಾಡುವುದನ್ನು ಅವರು ಮುಂದುವರಿಸುತ್ತಿದ್ದಂತೆ, ನಾನು ಅದಕ್ಕಾಗಿ ಹೋರಾಡುತ್ತೇನೆ. ದ್ರೋಹ ಮಾಡಿದವರು ನಾಳೆ ಪ್ರತ್ಯೇಕವಾಗುತ್ತಾರೆ ಎಂದು ಆಯಿಷಾ ಸುಲ್ತಾನ ಹೇಳಿದ್ದಾರೆ.