![ಅವಿಶ್ವಾಸ ಗೊತ್ತುವಳಿಯ ಹಿಂದೆ ಯಡಿಯೂರಪ್ಪರನ್ನು ರಕ್ಷಿಸುವ ಹಿಡನ್ ಅಜೆಂಡಾ ಕಾಂಗ್ರೆಸ್ ಗಿತ್ತೆ? - ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದು ಹೀಗೆ... ಅವಿಶ್ವಾಸ ಗೊತ್ತುವಳಿಯ ಹಿಂದೆ ಯಡಿಯೂರಪ್ಪರನ್ನು ರಕ್ಷಿಸುವ ಹಿಡನ್ ಅಜೆಂಡಾ ಕಾಂಗ್ರೆಸ್ ಗಿತ್ತೆ? - ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದು ಹೀಗೆ...](https://lh3.googleusercontent.com/-hVDrIte-UDI/X3BTz5jVk1I/AAAAAAAAGfQ/OKzPrTmHT048ddd1R7VqJ1AgLBzBWhi0ACNcBGAsYHQ/s1600/1601197002577653-0.png)
ಅವಿಶ್ವಾಸ ಗೊತ್ತುವಳಿಯ ಹಿಂದೆ ಯಡಿಯೂರಪ್ಪರನ್ನು ರಕ್ಷಿಸುವ ಹಿಡನ್ ಅಜೆಂಡಾ ಕಾಂಗ್ರೆಸ್ ಗಿತ್ತೆ? - ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದು ಹೀಗೆ...
Sunday, September 27, 2020
ಯಡಿಯೂರಪ್ಪ ಸರಕಾರದ ವಿರುದ್ದ ಮಂಡಿಸಿದ ಅವಿಶ್ವಾಸ ಮಂಡನೆಯ ಹಿಂದೆ ಯಡಿಯೂರಪ್ಪರಿಗೆ ಆರು ತಿಂಗಳು ಜೀವದಾನ ನೀಡುವ ಹಿಡನ್ ಅಜೆಂಡಾ ಕಾಂಗ್ರೆಸ್ ಗೆ ಇತ್ತು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ತಮ್ಮ ಅಭಿಪ್ರಾಯವನ್ನು ಫೇಸ್ಬುಕ್ ನಲ್ಲಿ ಈ ಕೆಳಗಿನಂತೆ ಬರೆದುಕೊಂಡಿದ್ದಾರೆ....
ದಿನೇಶ್ ಅಮೀನ್ ಮಟ್ಟು-
ಕಾಂಗ್ರೆಸ್ ಪಕ್ಷ ವಿಧಾನಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯ ಹಿಂದೆ ಬಿ.ಎಸ್.ಯಡಿಯೂರಪ್ಪನವರಿಗೆ ಇನ್ನು ಆರು ತಿಂಗಳು ಜೀವದಾನ ನೀಡುವ ಹಿಡನ್ ಅಜೆಂಡಾ ಇತ್ತೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಕುತೂಹಲಕ್ಕಾದರೂ ಮುಖ್ಯವಾಹಿನಿ ಮಾಧ್ಯಮಗಳು ಈ ವಿಷಯದ ಚರ್ಚೆ ನಡೆಸಿರುವುದನ್ನು ನಾನು ಓದಿಲ್ಲ, ಕೇಳಿಲ್ಲ.
ಈ ಬಗ್ಗೆ ನನ್ನ ಅಭಿಪ್ರಾಯ ಹೀಗಿದೆ:
ರಾಜಕೀಯ ಸಂದರ್ಭವನ್ನು ಮತ್ತು ಕಾಂಗ್ರೆಸ್ ನ ಪ್ರಮುಖ ನಾಯಕರ ಮನಸ್ಥಿತಿಯನ್ನು ನಾನು ಅರ್ಥಮಾಡಿಕೊಂಡ ಹಾಗೆ ಇಂತಹದ್ದೊಂದು ಹಿಡನ್ ಅಜೆಂಡಾ ಕಾಂಗ್ರೆಸ್ ನಾಯಕರ ಮನಸ್ಸಲ್ಲಿ ಇರಲಿಲ್ಲ. ಅವಿಶ್ವಾಸ ಗೊತ್ತುವಳಿ ಮಂಡಿಸಿದರೆ ತರಹೇವಾರಿ ವಿಷಯಗಳ ಬಗ್ಗೆ ಮಾತನಾಡಲು ವಿಫುಲ ಅವಕಾಶ ಸಿಗುತ್ತೆ ಎನ್ನುವ ಕಾರ್ಯತಂತ್ರದ ಅಂಗವಾಗಿಯೇ ಈ ಗೊತ್ತುವಳಿ ಮಂಡಿಸಲಾಗಿದೆ.
ಹೌದು, ಒಮ್ಮೆ ವಿಧಾನಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿದ ನಂತರ ಮುಂದಿನ ಆರು ತಿಂಗಳು ಅದನ್ನು ಮತ್ತೆ ಮಂಡಿಸುವಂತಿಲ್ಲ. ಆದ್ದರಿಂದ ಇನ್ನು ಆರು ತಿಂಗಳ ಕಾಲ ವಿಧಾನಸಭೆಯಲ್ಲಿ ಬಹುಮತದ ಕೊರತೆಯಿಂದ ಯಡಿಯೂರಪ್ಪನವರು ಕುರ್ಚಿಕಳೆದುಕೊಳ್ಳುವ ಭಯ ಇಲ್ಲ. ಅಷ್ಟಕ್ಕೆ ಯಡಿಯೂರಪ್ಪನವರು ಸುರಕ್ಷಿತರೇ?
ಒಂದೊಮ್ಮೆ ಯಡಿಯೂರಪ್ಪನವರನ್ನು ಬದಲಾಯಿಸಬೇಕೆಂದು ಬಿಜೆಪಿ ಹೈಕಮಾಂಡ್ ನಿರ್ಧರಿಸಿದರೆ ಅದು ಖಂಡಿತ ವಿರೋಧಪಕ್ಷಗಳು ಮಂಡಿಸುವ ಅವಿಶ್ವಾಸ ಗೊತ್ತುವಳಿಗಾಗಿ ಇಲ್ಲವೇ ಸ್ವಪಕ್ಷೀಯರೇ ಮಂಡಿಸುವ ವಿಶ್ವಾಸ ಮತದ ಗೊತ್ತುವಳಿ ಬಗ್ಗೆ ತಲೆಕೆಡಿಸಿಕೊಳ್ಳಲಾರದು. ಅದು ತಲೆಕೆಡಿಸಿಕೊಳ್ಳುತ್ತಿರುವುದು ಯಡಿಯೂರಪ್ಪನವರ ಪದಚ್ಯುತಿಯ ನಂತರ ಎದುರಾಗಲಿರುವ ಅವರ ಕಟ್ಟಾ ಬೆಂಬಲಿಗರ, ಸ್ಪಷ್ಟವಾಗಿ ಹೇಳಬೇಕೆಂದರೆ ಲಿಂಗಾಯತ ಬೆಂಬಲಿಗರ ಪ್ರತಿಕ್ರಿಯೆ ಬಗ್ಗೆ.
ಆದ್ದರಿಂದ ಯಡಿಯೂರಪ್ಪನವರನ್ನು ಬದಲಾಯಿಸುವುದಿದ್ದರೂ ಸಾಧ್ಯವಾದರೆ ಅವರ ಮನವೊಲಿಸಬೇಕು, ಇಲ್ಲವೇ ಅವರಿಗೇನಾದರೂ ಆಮಿಷ ಒಡ್ಡಬೇಕು ಅದ್ಯಾವುದೂ ಸಾಧ್ಯವಾಗದಿದ್ದರೆ ಬ್ಲಾಕ್ ಮೇಲ್ ಮೂಲಕ ಒತ್ತಡ ಹೇರಬೇಕು ಎನ್ನುವುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವಾಗಿರಬಹುದು. ಸಾಮ,ದಾನ,ಭೇದ,ದಂಡ ಸಂಘ ಪರಿವಾರದ ಇಷ್ಟದ ಆಯುಧಗಳು.
ಒಟ್ಟಾರೆ ಸಾರಾಂಶ ಇಷ್ಟು:
ಬಿ.ಎಸ್.ಯಡಿಯೂರಪ್ಪನವರು ಅವಿಶ್ವಾಸ ಮತದ ಗೊತ್ತುವಳಿ ಮಂಡನೆಗಿಂತ ಮೊದಲು ಎಷ್ಟು ಸುರಕ್ಷಿತ, ಅಸುರಕ್ಷಿತರಾಗಿದ್ದರೋ, ಈಗಲೂ ಅಷ್ಟೇ ಸುರಕ್ಷಿತ ಮತ್ತು ಅಸುರಕ್ಷಿತ.