
ಶಾಸಕಿ ರೂಪಾಲಿ ಎಸ್ ನಾಯ್ಕ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ
Saturday, August 15, 2020
ಕಾರವಾರ - 74ನೇ ಸ್ವಾತಂತ್ರ್ಯ ದಿನದ ಅಂಗವಾಗಿ ತಾಲ್ಲೂಕು ಪಂಚಾಯತನ ಶಾಸಕರ ಕಾರ್ಯಾಲಯದಲ್ಲಿ ಇಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್ ನಾಯ್ಕ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆಯಲ್ಲಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ ಆತ್ಮ ನಿರ್ಭರ ಭಾರತದ ಸಂಕಲ್ಪದೊಂದಿಗೆ ಈ ಬಾರಿಯ ಸ್ವಾತಂತ್ರ್ಯ ದಿನವನ್ನು ಆಚರಿಸಬೇಕಾಗಿದೆ. ಅಂದು ಮಹಾತ್ಮ ಗಾಂಧಿಯವರ ಕಂಡ ಕನಸನ್ನು ನನಸು ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ. ವಿದೇಶಿ ವಸ್ತುಗಳ ಬದಲು ಎಲ್ಲ ವಸ್ತುಗಳನ್ನು ನಮ್ಮದೇಶದಲ್ಲಿಯೇ ತಯಾರಿಸಿ ಬಳಕೆ ಮಾಡುವ ಮಹತ್ವಾಕಾಂಕ್ಷೆಯ ವಿಷಯವಾಗಿದೆ.
ಕೊರೋನಾದಿಂದ ದೇಶಾದ್ಯಂತ ಆರ್ಥಿಕ ಸಮಸ್ಯೆ ಉಂಟಾದಾಗ ಪ್ರಧಾನಿ ಅವರು ಎಲ್ಲರಿಗೂ ಆರ್ಥಿಕ ನೆರವು ನೀಡಿ ಮುನ್ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಆತ್ಮ ನಿರ್ಭರ ಯೋಜನೆಯನ್ನು ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಈ ಯೋಜನೆಯಿಂದ ದೇಶದ ಹಲವು ಯುವಕ ಯುವತಿಯರಿಗೆ ಉದ್ಯಮ ಆರಂಭಿಸುವ ಮೂಲಕ ನಿರುದ್ಯೋಗ ಹೋಗಲಾಡಿಸಲು ಸಹಕಾರಿಯಾಗಿದೆ. ಇಂತಹ ಯೋಜನೆಯನ್ನು ಪರಿಚಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹಸ್ರ ಪ್ರಣಾಮಗಳನ್ನು ಸಲ್ಲಿಸುತ್ತೇನೆ.
ರಾಮ ಮಂದಿರ ನಿರ್ಮಾಣ ಭಾರತೀಯರ ಬಹುದಿನದ ಕನಸಾಗಿತ್ತು ಅದನ್ನು ಸಹ ನೆರವೇರಿಸಿ ಮೆಚ್ಚುಗೆ ಪಡೆದಿದ್ದಾರೆ.
ಗಡಿ ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಿ ಗಟ್ಟಿಯಾಗಿ ನಿಂತಿದ್ದಾರೆ. ನಮಗೆ ಸಮಸ್ಯೆ ಬಂದಾಗ ಹೇಗೆ ಬಗೆಹರಿಸಿಕೊಳ್ಳುತ್ತೇವೆಯೋ ಅದೇ ರೀತಿ ದೇಶದ ಸಮಸ್ಯೆ ಬಂದಾಗಲೂ ಒಗ್ಗಟಿನಿಂದ ಎದುರಿಸಲು ಸಜ್ಜಾಗಬೇಕು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ ಅಧ್ಯಕ್ಷರಾದ ಪ್ರಮೀಳಾ ನಾಯ್ಕ, ಉಪಾಧ್ಯಕ್ಷರು, ನಗರಸಭೆ ಸದಸ್ಯರು, ತಾಲ್ಲೂಕು ಪಂಚಾಯತ ಕಾರ್ಯ ನಿರ್ವಹಣಾ ಅಧಿಕಾರಿ, ಸಿಬ್ಬಂದಿ ವರ್ಗ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.