
ಕಾರವಾರ: 435 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದ ಅನಂತಕುಮಾರ್ ಹೆಗ್ಡೆ ಶಂಕುಸ್ಥಾಪನೆ
ಕಾರವಾರ - ತಾಲೂಕಿನ ದೇವಳಮಕ್ಕಿಯಿಂದ ಸೋರೆಗದ್ದೆ ಸಿದ್ಧರಾಮೇಶ್ವರ ದೇವಾಲಯದಿಂದ ಕೊಂಕಣ ಗದ್ದೆ ಶಿರ್ವೆ ವರೆಗಿನ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ -3ರ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು (435.04 ಲಕ್ಷ ರೂ.ವೆಚ್ಚದಲ್ಲಿ 6.28 ಕಿ.ಮೀ.) ಸಂಸದ ಅನಂತಕುಮಾರ ಹೆಗಡೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್ ನಾಯ್ಕ ಸಂಸದರು ಹಲವಾರು ಯೋಜನೆಗಳನ್ನು ಜಿಲ್ಲೆಯಲ್ಲಿ ಮತ್ತು ಕಾರವಾರದ ವಿವಿಧ ಗ್ರಾಮಗಳಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ. ಆದರೆ ಅವುಗಳ ಬಗ್ಗೆ ಯಾವುದೇ ಪ್ರಚಾರವನ್ನು ಮಾಡಿಲ್ಲ. ಯಾರಿಂದಲೂ ಮನವಿಯನ್ನು ಸ್ವೀಕರಿಸಿದೆ ರಸ್ತೆ ಯಾವ ಗ್ರಾಮಕ್ಕೆ ಅವಶ್ಯಕತೆ ಇದೆಯೋ ಅವರಿಗೆ ನೀಡಿದ್ದಾರೆ. ಜನ ಪರವಾಗಿರುವ ಸಂಸದರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಕ್ಷೇತ್ರದ ಜನರಿಗೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಕೆಲವರು ಕಾಲಹರಣ ಮಾಡುತ್ತ ದುಷ್ಚ ಚಟಕ್ಕೆ ದಾಸರಾಗುತ್ತಿದ್ದಾರೆ. ಇನ್ನೂ ಕೆಲವರು ಅಲ್ಪ ಸಂಬಳಕ್ಕಾಗಿ ಬೇರೆ ಬೇರೆ ಊರುಗಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಕಾರವಾರ ಅಂಕೋಲಾ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಯುವಕರಿಗೆ ಕೆಲಸ ಒದಗಿಸಬೇಕು ಎಂದು ಸಂಸದರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೋಗೇರ್, ತಾ.ಪಂ. ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು, ಸ್ಥಳೀಯ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.