![ಕೋವಿಡ್ ಆಸ್ಪತ್ರೆಯ ನವೀಕೃತ ತೀವ್ರನಿಗಾ ಘಟಕಕ್ಕೆ ಉತ್ತರಕನ್ನಡ ಜಿಲ್ಲಾಧಿಕಾರಿ ಭೇಟಿ ಕೋವಿಡ್ ಆಸ್ಪತ್ರೆಯ ನವೀಕೃತ ತೀವ್ರನಿಗಾ ಘಟಕಕ್ಕೆ ಉತ್ತರಕನ್ನಡ ಜಿಲ್ಲಾಧಿಕಾರಿ ಭೇಟಿ](https://lh3.googleusercontent.com/-KVyaqU7ZiNg/X0ewgtrmaiI/AAAAAAAAGD4/u1gjs2LMrbYF6TB8wcAHsAQN7UpX5VFXwCNcBGAsYHQ/s1600/1598533759752017-0.png)
ಕೋವಿಡ್ ಆಸ್ಪತ್ರೆಯ ನವೀಕೃತ ತೀವ್ರನಿಗಾ ಘಟಕಕ್ಕೆ ಉತ್ತರಕನ್ನಡ ಜಿಲ್ಲಾಧಿಕಾರಿ ಭೇಟಿ
Thursday, August 27, 2020
ಕಾರವಾರ : ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೆಡಿಕೇಟೆಡ್ ಕೋವಿಡ್ ಆಸ್ಪತ್ರೆಯ ನವೀಕೃತ ತೀವ್ರ ನಿಗಾ ಘಟಕ ವಾರ್ಡ್ ಗೆ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿರುವ ಡಾ|| ಶಿವಾನಂದ ಕುಡ್ತಾರಕರ್ರವರು ಹೊಸತಾಗಿ ನವೀಕರಿಸಿದ ತೀವ್ರನಿಗಾ ಘಟಕದ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ, ಪ್ರಸ್ತುತ ತೀವ್ರನಿಗಾ ಘಟಕದಲ್ಲಿ 35 ಐ.ಸಿ.ಯು. ಹಾಸಿಗೆಗಳ ವ್ಯವಸ್ಥೆ ಇದ್ದು, 33 ವೆಂಟಿಲೇಟರ್ಗಳ ಸೌಲಭ್ಯ ಹಾಗೂ 9 ಹೈ-ಫ್ಲೋ ಆಕ್ಸಿಜೆನ್ ಮಶೀನ್ಗಳನ್ನು ಹೊಸತಾಗಿ ಅಳವಡಿಸಲಾಗಿರುತ್ತದೆ. ಇದಕ್ಕೆ ಬೇಕಾದ ಹೆಚ್ಚಿನ ಆಕ್ಸಿಜೆನ್ಗಳನ್ನು ಪಡೆಯಲು ಲಿಕ್ವಿಡ್ ಆಕ್ಸಿಜೆನ್ ಪ್ಲ್ಯಾಂಟ್ನ್ನು ಅತೀ ಶೀಘ್ರದಲ್ಲಿ ಸರ್ಕಾರದಿಂದ ಪಡೆಯಲಾಗುವುದು ಎಂದು ವಿವರಿಸಿದರು.
ಪ್ರಧಾನಮಂತ್ರಿ ಯೋಜನೆಯಿಂದ ಬಂದ ಅತ್ಯಾಧುನಿಕ ವೆಂಟಿಲೇಟರ್ಗಳು, ವೆಂಟಿಲೇಟರ್ ಹಾಗೂ ಹೈ-ಫ್ಲೋ ಆಕ್ಸಿಜೆನ್ ಡೆಲಿವರಿಯನ್ನು ನೀಡುವ ಸಾಮಥ್ರ್ಯವನ್ನು ಹೊಂದಿದೆ. ಅದರಂತೆ ತೀವ್ರನಿಗಾ ಘಟಕದಲ್ಲಿ ಒಂದು ಡಯಾಲಿಸಿಸ್ ಯಂತ್ರವನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಕೋವಿಡ್ ಪಾಸಿಟಿವ್ ಇರುವ ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ತುರ್ತಾಗಿ ಚಿಕಿತ್ಸೆ ಪಡೆಯಲು ಅನುಕೂಲಕರವಾಗಿರುತ್ತದೆ ಎಂದು ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ|| ಮಂಜುನಾಥ ಭಟ್ ರವರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.
ಲಕ್ಷಣರಹಿತ ಸೋಂಕಿತರ 70 ಹಾಸಿಗೆಗಳ ಕೋವಿಡ್ ವಾರ್ಡನ್ನು ಸಹ ಪರಿಶೀಲಿಸಿದ ಜಿಲ್ಲಾಧಿಕಾರಿ ಅಲ್ಲಿಯ ರೋಗಿಗಳ ಆರೈಕೆಯ ಕುರಿತು ಮೇಲ್ವಿಚಾರಣೆ ನಡೆಸಿದರು. ಅಲ್ಲದೇ ರೋಗಿಗಳ ಮನರಂಜನೆಗಾಗಿ ಒಂದು ಟಿ.ವಿ. ಅಳವಡಿಸುವ ವ್ಯವಸ್ಥೆಯನ್ನು ಮಾಡುವಂತೆ ವೈಧ್ಯಾಧಿಕಾರಿಗಳಿಗೆ ಸೂಚಿಸಿದರು.
ಇದುವರೆಗೂ 458 ಸೋಂಕಿತ ರೋಗಿಗಗಳು ದಾಖಲಾಗಿದ್ದು, 356 ಸೋಂಕಿತರು ಬಿಡುಗಡೆ ಹೊಂದಿರುತ್ತಾರೆ. ಇದರಲ್ಲಿ ಕೋವಿಡ್ ಐ.ಸಿ.ಯು. ನಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾರು 110 ಕೋವಿಡ್ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಹಾಗೂ ಪ್ರತಿಶತದ ಮರಣದ ಪ್ರಮಾಣವು ತೀರಾ ಕಡಿಮೆ ಅಂಕಿಅಂಶಗಳನ್ನು ಹೊಂದಿದೆ ಎಂಬ ಮಾಹಿತಿಯನ್ನು ಕ್ರಿಮ್ಸ್ ನಿರ್ದೇಶಕರಾದ ಡಾ|| ಗಜಾನನ ನಾಯಕ ಜಿಲ್ಲಾಧಿಕಾರಿಗೆ ನೀಡಿದರು.
ಕೋವಿಡ್-19 ಸನ್ನಿವೇಶದಲ್ಲಿ ಸೈನಿಕರಂತೆ ಸೇವೆ ಸಲ್ಲಿಸಿತ್ತಿರುವ ವೈದ್ಯಾಧಿಕಾರಿಗಳು, ದಾದಿಯರು, ಡಿ ವರ್ಗದ ಸಿಬ್ಬಂದಿಗಳೆಲ್ಲರ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಲ್ಲಾಧಿಕಾರಿ ಎಲ್ಲರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಆರ್.ಎಂ.ಓ., ಡಾ|| ವೆಂಕಟೇಶ, ಪಿಜಿಸಿಯನ್ ಡಾ|| ಅಮಿತ್ ಕಾಮತ್, ಡಾ|| ಭರತಕುಮಾರ ಹೆಗ್ಡೆ, ಡಾ|| ಮಹೀಧರ ಎಸ್.ಎನ್., ಡಾ|| ಆರವಿಂದ, ಶುಶ್ರೂಷಕಿಯರಾದ ಎಮಿಲಿಯಾ ಹಾಗೂ ಸುಷ್ಮಾ ನಾಯ್ಕ ಸೇರಿದಂತೆ ಇತರರು ಹಾಜರಿದ್ದರು.