
ರೈತರೇ ಸ್ವಯಂ ದಾಖಲಿಸುವ ಬೆಳೆ ಸಮೀಕ್ಷೆಯ ಆ್ಯಪ್ಗೆ ಸಚಿವ ಬಿ.ಸಿ ಪಾಟೀಲ್ ಚಾಲನೆ
ರೈತರೇ ಸ್ವಯಂ ದಾಖಲಿಸುವ ಬೆಳೆ ಸಮೀಕ್ಷೆಯ ಆ್ಯಪ್ಗೆ ಸಚಿವ ಬಿ.ಸಿ ಪಾಟೀಲ್ ಚಾಲನೆ
ತುಮಕೂರು
ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸ್ವಯಂ ದಾಖಲಿಸುವ “ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್”ಗೆ ಸಚಿವ ಬಿ.ಸಿ ಪಾಟೀಲ್ ಅವರು ಇಂದು ಚಾಲನೆ ನೀಡಿದರು.
ತಾಲೂಕಿನ ಕೋರ ಹೋಬಳಿಯ ರೈತರೊಬ್ಬರ ಜಮೀನಿನಲ್ಲಿ ಬೆಳೆದ ಬೆಳೆಗಳ ಫೋಟೋ ಅಪ್ಲೋಡ್ ಮಾಡುವ ಮೂಲಕ ಚಾಲನೆ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3 ವರ್ಷಗಳಿಂದ ಬೆಳೆ ಸಮೀಕ್ಷೆ ಮಾಡಲಾಗುತ್ತಿದೆ. ಈ ಮೊದಲು ಆಯಾ ಗ್ರಾಮದ ಪಿಆರ್ಒಗಳು ರೈತರ ಜಮೀನುಗಳಿಗೆ ಬಂದು ಬೆಳೆಯ ಫೋಟೋ ತೆಗೆಯುತ್ತಿದ್ದರು. ಆದರೆ ಪ್ರಸಕ್ತ ವರ್ಷದಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರ ತೆಗೆದು ರೈತರೇ ಸ್ವಯಂ ಅಪ್ಲೋಡ್ ಮಾಡಬಹುದಾಗಿದೆ ಎಂದರು.
ಬೆಳೆ ಸಮೀಕ್ಷೆಗಾಗಿ ರೈತರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವಂತಿಲ್ಲ. ರೈತ ತನ್ನ ಜಮೀನಿನಲ್ಲಿ ತಾನು ಬೆಳೆದ ಬೆಳೆಯನ್ನು ತಾನೇ ಸಮೀಕ್ಷೆ ಮಾಡಬಹುದು. ಬೆಳೆ ಸಮೀಕ್ಷೆಯಡಿ ಸಂಗ್ರಹವಾಗುವ ಮಾಹಿತಿಯನ್ನು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಸಹಾಯಧನ ನೀಡಲು ಉಪಯೋಗವಾಗುತ್ತದೆ ಎಂದು ಅವರು ತಿಳಿಸಿದರು.
ರೈತರು ಕೂಡಲೇ ಕಾರ್ಯಪ್ರವೃತ್ತರಾಗಿ ತಮ್ಮ ಜಮೀನಿನ ಬೆಳೆ ವಿವರಗಳನ್ನು ಮೊಬೈಲ್ ಮೂಲಕ ಸ್ವಯಂ ದಾಖಲಿಸಬೇಕು. ಬೆಳೆಗಳ ವಿವರಗಳನ್ನು ದಾಖಲಿಸಲು ಆಗಸ್ಟ್ 24 ಕಡೆಯ ದಿನವಾಗಿದೆ. ರೈತರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರಘು ಸೇರಿದಂತೆ ರೈತರು, ಕೃಷಿ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.
ಬೆಳೆ ಸಮೀಕ್ಷೆ ಉತ್ಸವ:- ಪ್ರತಿ ರೈತರಿಗೂ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ಮಾಹಿತಿ ನೀಡಲು ಕೃಷಿ ಇಲಾಖೆ ವತಿಯಿಂದ 10 ದಿನಗಳ ಕಾಲ ಬೆಳೆ ಸಮೀಕ್ಷೆ ಉತ್ಸವ ನಡೆಸಲಾಗುತ್ತಿದೆ. ಬೆಳೆ ಸಮೀಕ್ಷೆ ಮಾಹಿತಿ ಸಂಚಾರ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಸಚಿವರು ಚಾಲನೆ ನೀಡಿದರು.