ಚಾಮರಾಜನಗರ: ಪೂರ್ವಾಶ್ರಮದ ಧರ್ಮ ಬಯಲಾದ ಹಿನ್ನೆಲೆಯಲ್ಲಿ ಆ.3ರಂದು ಮಠದ ಪೀಠ ತೊರೆದಿದ್ದ ನಿಜಲಿಂಗ ಸ್ವಾಮೀಜಿ ಅಲಿಯಾಸ್ ಮಹಮ್ಮದ್ ನಿಸಾರ್, ಕೆಲವು ದಿನಗಳ ಹಿಂದೆಯಷ್ಟೇ ಮುಸ್ಲಿಮರು ಧರಿಸುವ ಟೋಪಿಯನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿರುವುದು ಬೆಳಕಿಗೆ ಬಂದಿದೆ.
ಚಾಮರಾಜನಗರ ತಾಲೂಕಿನ ಚೌಡಹಳ್ಳಿಯ ಗುರುಮಲ್ಲೇಶ್ವರ ಮಠದ ಸ್ವಾಮೀಜಿಯಾಗಿದ್ದ ನಿಜಲಿಂಗಸ್ವಾಮಿ ಹೆಸರಿಗೆ ಮಠದ ವಿಳಾಸಕ್ಕೆ ಮಂಗಳವಾರ ಮುಸ್ಲಿಮರು ಧರಿಸುವ ಟೋಪಿ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.
ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರದ ಮಹಮ್ಮದ್ ನಿಸಾರ್ (23) ಬಸವ ತಣ್ಣೀಕ್ಕೆ ಆಕರ್ಷಿತರಾಗಿ ಲಿಂಗ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದರು. ಒಂದೂವರೆ ತಿಂಗಳ ಹಿಂದೆಯಷ್ಟೇ ಅವರು ಮಠದ ಪೀಠಕ್ಕೆ ಸ್ವಾಮೀಜಿಯಾಗಿ ಬಂದಿದ್ದರು. ಆದರೆ ಕಳೆದ ರವಿವಾರ ಪೂರ್ವಶ್ರಾಮದ ಧರ್ಮ ಬಯಲಾಗಿ ಭಕ್ತರ ಆಕ್ಷೇಪದ ಬಳಿಕ ಮಠ ತೊರೆದಿದ್ದರು.
ಈ ಮಧ್ಯೆ ನಿಜಲಿಂಗಸ್ವಾಮೀಜಿ ಅಲಿಯಾಸ್ ಮಹಮ್ಮದ್ ನಿಸಾರ್ ಕರ್ಮಕಾಂಡ ಬಗೆದಷ್ಟು ಬೆಳಕಿಗೆ ಬರುತ್ತಿದೆ. ಜೊತೆಗೆ ಅವರದ್ದೇ ಎನ್ನಲಾಗಿರುವ ಮದ್ಯ ಮತ್ತು ಮಾಂಸ ಸೇವನೆ ಜತೆಗೆ ಸಲಿಂಗ ಕಾಮದ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದು ಸನ್ಯಾಸತ್ವ ಸ್ವೀಕರಿಸುವ ಮುಂಚಿನದ್ದೋ ಅಥವಾ ಆ ಬಳಿಕದ್ದೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.