ಪ್ರೀತಿ ನಿರಾಕರಿಸಿದ ಸ್ನೇಹಿತೆಗೆ ಚೂರಿಯಿಂದ ಇರಿದು ತಾಳಿ ಕಟ್ಟಿದ ಪಾಗಲ್ ಪ್ರೇಮಿ- ಯುವತಿ ಸಾವು
Monday, July 7, 2025
ಮೈಸೂರು: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕುಪಿತನಾದ ಪಾಗಲ್ ಪ್ರೇಮಿಯೊಬ್ಬ ಸ್ನೇಹಿತೆಗೆ ಚಾಕುವಿನಿಂದ ಇರಿದು ತಾಳಿ ಕಟ್ಟಿ ವಿಕೃತಿ ಮೆರೆದಿದ್ದಾನೆ. ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಶನಿವಾರ ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ಪೂರ್ಣಿಮಾ(36) ಮೃತಪಟ್ಟವರು.
ಪಾಂಡವಪುರ ಗ್ರಾಮದ ಅಭಿಷೇಕ್ ಮತ್ತು ಪೂರ್ಣಿಮಾ ಬಾಲ್ಯ ಸ್ನೇಹಿತರಾಗಿದ್ದರು. ಪೂರ್ಣಿಮಾ ಮೈಸೂರಿನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ತನ್ನನ್ನು ಪ್ರೀತಿಸುವಂತೆ ಅಭಿಷೇಕ್ ಒತ್ತಾಯಿಸುತ್ತಿದ್ದ. ಆದರೆ ಮನೆಯವರ ಒಪ್ಪಿಗೆಯಿಲ್ಲದ ಕಾರಣ ಆಕೆ ನಿರಾಕರಿಸುತ್ತಿದ್ದಳು. ಶುಕ್ರವಾರ ಮಧ್ಯಾಹ್ನ ಇಬ್ಬರೂ ಕೃಷ್ಣಮೂರ್ತಿಪುರಂನಲ್ಲಿರುವ ಉದ್ಯಾನವನಕ್ಕೆ ತೆರಳಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಅಭಿಷೇಕ್ ಚೂರಿಯಿಂದ ಇರಿದಿದ್ದಾನೆ. ಬಳಿಕ ಆತನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ತಾಳಿ ಕಟ್ಟಿ ಮೊಬೈಲ್ ಫೋನ್ನಲ್ಲಿ ಸೆಲ್ಪಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾನೆ. ಬಳಿಕ ಪರಾರಿಯಾಗಿದ್ದ ಅಭಿಷೇಕ್ನನ್ನು ಪೊಲೀಸರು ಶುಕ್ರವಾರ ರಾತ್ರಿಯೇ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಬಗ್ಗೆ ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.