ಮಕ್ಕಳ ಕೈಗೆ ಮೊಬೈಲ್ ಕೊಡುವ ಪೋಷಕರೇ ಎಚ್ಚರ- ಈ ಸುದ್ದಿಯನ್ನು ನೀವು ಓದಲೇಬೇಕು
Monday, July 7, 2025
ಮಂಗಳೂರು: ಸಣ್ಣ ಮಕ್ಕಳಿನಿಂದ ಹಿಡಿದು ವಯಸ್ಕರವರೆಗೂ ಹೆಚ್ಚಿನವರಿಗೆ ಮೊಬೈಲ್ ಗೀಳು ಹೆಚ್ಚಾಗಿದೆ. ಕೆಲವರಿಗೆ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಕಳೆಯುವುದಕ್ಕೆ ಸಾಧ್ಯವಿಲ್ಲ. ಮೊಬೈಲ್ ಬಳಕೆ ಒಂದು ವ್ಯಸನವೇ ಆಗಿದೆ. ಇದರಿಂದ ಕಣ್ಣಿಗೂ, ಮನಸ್ಸಿಗೂ, ಆರೋಗ್ಯಕ್ಕೂ ಸಮಸ್ಯೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬೆಚ್ಚಿಬೀಳಿಸುವ ವರದಿಯನ್ನು ಆರೋಗ್ಯ ಇಲಾಖೆ ರಿಲೀಸ್ ಮಾಡಿದ್ದು, ಒಂದಲ್ಲ ಎರಡಲ್ಲ ಬರೊಬ್ಬರಿ ನಾಲ್ಕು ಸಾವಿರ ಮಕ್ಕಳು ದೃಷ್ಟಿ ದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ವರದಿಯಲ್ಲಿ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮೊಬೈಲ್ ಬಳಕೆ ಕಣ್ಣಿನ ಹಾಗೂ ಮನಸ್ಸಿನ ಆರೋಗ್ಯಕ್ಕೂ ಒಂದು ರೀತಿ ಸಮಸ್ಯೆ ಅನ್ನೋದು ಗೊತ್ತಿದ್ದರೂ ನಾವ್ಯಾರು ಮೊಬೈಲ್ ಬಳಸುವುದನ್ನು ಕಡಿಮೆ ಮಾಡಲ್ಲ. ಹದಿಹರೆಯದವರು ಆದರೆ ಪರವಾಗಿಲ್ಲ. ಸಣ್ಣಪುಟ್ಟ ಮಕ್ಕಳು ಈ ಮೊಬೈಲ್ ಬಳಸಿ ಅದೆಂಥ ಸಂಕಷ್ಟಕ್ಕೆ ಸಿಲುಕಿದ್ದಾರೆ ಗೊತ್ತಾ? ರಾಷ್ಟ್ರೀಯ ಅಂಧತ್ವ ನಿವಾರಣ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ಭಯಾನಕ ಮಾಹಿತಿ ಪತ್ತೆಯಾಗಿದೆ. ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 4,398 ಮಕ್ಕಳು ಗಂಭೀರ ದೃಷ್ಟಿ ದೋಷದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬದು ವರದಿಯಲ್ಲಿ ದೃಢಪಟ್ಟಿದೆ. ಈ ಪೈಕಿ 2066 ಮಕ್ಕಳಿಗೆ ಕನ್ನಡಕ ಕಡ್ಡಾಯವಾಗಿ ಧರಿಸುವ ಅಗತ್ಯವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 1376 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳನ್ನು ಒಳಗೊಂಡ ಈ ತಪಾಸಣೆ ರಾಷ್ಟ್ರೀಯ ಅಂಧತ್ವ ನಿವಾರಣಾ ಯೋಜನೆಯಡಿ ಕೈಗೊಳ್ಳಲಾಗಿತ್ತು. 1,45,951 ಮಕ್ಕಳನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 4,398 ಮಕ್ಕಳಿಗೆ ದೃಷ್ಟಿದೋಷ ಕಂಡುಬಂದಿದೆ. ಮೊಬೈಲ್ ಬಳಕೆಯಿಂದ ಕೇವಲ ದೃಷ್ಟಿದೋಷ ಮಾತ್ರವಲ್ಲ, ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಇದಕ್ಕಾಗಿ ಮಾನಸಿಕ ಆರೋಗ್ಯ ಕುರಿತು ಮನೋಸ್ಥೈರ್ಯ ಎಂಬ ಜಾಗೃತಿ ಅಭಿಯಾನದ ಜೊತೆಗೆ ಪ್ರತಿ ಶಾಲೆಯ ಒಬ್ಬ ಶಿಕ್ಷಕಿಗೆ ವಿಶೇಷ ತರಬೇತಿ ನೀಡಿ ಮಕ್ಕಳ ಮಾನಸಿಕ ಸಮಸ್ಯೆ ಗುರುತಿಸಲು ಯೋಗ್ಯ ಮಾಡಲಾಗಿದೆ. ಅತಿಯಾದ ಮೊಬೈಲ್ ಬಳಕೆಯು ಮಕ್ಕಳ ದೃಷ್ಟಿ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.
ಒಟ್ಟಿನಲ್ಲಿ ಆನ್ಲೈನ್ ಕ್ಲಾಸ್ ಹೆಸರಲ್ಲಿ ಮಕ್ಕಳ ಕೈ ಸೇರಿದ್ದ ಮೊಬೈಲ್ ಇದೀಗ ಅವರ ಕೈಯಿಂದ ಬಿಡಿಸಲಾಗದಷ್ಟು ಬಿಗಿಯಾಗಿದೆ. ಇನ್ನಾದರು ಪೋಷಕರು ಎಚ್ಚೆತ್ತು ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಬೇಕು, ಸಮಯಕ್ಕೆ ಸರಿಯಾಗಿ ಕಣ್ಣಿನ ತಪಾಸಣೆ ಮಾಡಿಸಿ, ತಜ್ಞರ ಸಲಹೆ ಪಡೆಯುವುದು ಅತ್ಯಂತ ಅಗತ್ಯವಾಗಿದೆ.