![ಬಿಜೆಪಿಗೆ ಹೀನಾಯ ಸೋಲು ಕಟ್ಟಿಟ್ಟ ಬುತ್ತಿ, "ಮೋದಿ" ಅವಧಿ ಮುಗಿದ ಔಷಧಿ: ತೆಲಂಗಾಣ ಮುಖ್ಯಮಂತ್ರಿ ಬಿಜೆಪಿಗೆ ಹೀನಾಯ ಸೋಲು ಕಟ್ಟಿಟ್ಟ ಬುತ್ತಿ, "ಮೋದಿ" ಅವಧಿ ಮುಗಿದ ಔಷಧಿ: ತೆಲಂಗಾಣ ಮುಖ್ಯಮಂತ್ರಿ](https://i.ytimg.com/vi/eU8htENMCCE/hqdefault.jpg)
ಬಿಜೆಪಿಗೆ ಹೀನಾಯ ಸೋಲು ಕಟ್ಟಿಟ್ಟ ಬುತ್ತಿ, "ಮೋದಿ" ಅವಧಿ ಮುಗಿದ ಔಷಧಿ: ತೆಲಂಗಾಣ ಮುಖ್ಯಮಂತ್ರಿ
ಬಿಜೆಪಿಗೆ ಹೀನಾಯ ಸೋಲು ಕಟ್ಟಿಟ್ಟ ಬುತ್ತಿ, "ಮೋದಿ" ಅವಧಿ ಮುಗಿದ ಔಷಧಿ: ತೆಲಂಗಾಣ ಮುಖ್ಯಮಂತ್ರಿ
ಮೋದಿ ಎಂಬ ಔಷಧದ ಅವಧಿ ಮುಗಿದಿದೆ. ಅದು ಈಗ ಎಕ್ಸ್ಪೈರಿ ಡೇಟ್ ಆಗಿರುವ ಔಷಧಿ. ಜನರು ಈ ಔಷಧಿಯನ್ನು ತಿರಸ್ಕರಿಸಲಿದ್ದಾರೆ. ಲೋಕಸಭೆಯಲ್ಲಿ ಈ ಬಾರಿ ಬಿಜೆಪಿ ಹೀನಾಯ ಸೋಲು ಕಾಣಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿರುವ ಅವರು ಈ ಹೇಳಿಕೆ ನೀಡಿದ್ದು, ಪ್ರಸಕ್ತ ಪರಿಸ್ಥಿತಿ ನೋಡಿದರೆ ಬಿಜೆಪಿ ಮತ್ತು ಮೈತ್ರಿಕೂಟ 220 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗೆಲ್ಲದು ಎಂದು ಭವಿಷ್ಯ ನುಡಿದರು.
ದೇಶದ ಪ್ರತಿಯೊಬ್ಬರ ಖಾಸಗಿ ಬದುಕಿನ ಮೇಲೆ ಮೋದಿ ನೇತೃತ್ವದ ಸರ್ಕಾರ ದಾಳಿ ಮಾಡುತ್ತಿದೆ. ವ್ಯಾಪಾರಿ ಕಳ್ಳನಂತೆ, ರಾಜಕಾರಣಿಯನ್ನು ದರೋಡೆಕೋರನಂತೆ ನೋಡುತ್ತಿದೆ. ರೈತರು, ಮಾಧ್ಯಮಗಳನ್ನು ಶೋಷಿಸುತ್ತಿದೆ ಎಂದು ತೆಲಂಗಾಣ ಸಿಎಂ ವ್ಯಾಖ್ಯಾನಿಸಿದ್ಧಾರೆ.
ಈ ದೇಶದಲ್ಲಿ ಎರಡು ಬಾರಿ ಅಧಿಕಾರ ಹಿಡಿದವರು ಮತ್ತೆ ಪ್ರಧಾನಿಯಾಗಿ ಆಯ್ಕೆಯಾಗಿಲ್ಲ. ಈ ಹಿಂದೆ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಅವರೂ ಮೂರನೇ ಅವಧಿಗೆ ಅಧಿಕಾರಕ್ಕೇರಲು ವಿಫಲರಾದರು. ಅದೇ ಪರಿಸ್ಥಿತಿ ಮೋದಿಗೂ ಬರಲಿದೆ ಎಂದು ಅವರು ಹೇಳಿದರು.
ವ್ಯವಸ್ಥೆಗಿಂತಲೂ ದೊಡ್ಡವನು ಎಂದು ಭಾವಿಸಿ ಯಾವ ವ್ಯಕ್ತಿ ತಾನು ಸರ್ವಾಧಿಕಾರಿ ಧೋರಣೆ ತೋರಿಸುತ್ತಾನೆಯೋ ಆ ವ್ಯವಸ್ಥೆಯನ್ನು ಪ್ರಕೃತಿಯೇ ಮರುಸ್ಥಾಪಿಸಲಿದೆ ಎಂದು ರೇವಂತ್ ರೆಡ್ಡಿ ಆಶಾಭಾವನೆ ವ್ಯಕ್ತಪಡಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಮತದಾರರ ಮುಂದೆ ಹಲವು ವಿಚಾರಗಳಿವೆ. ಇಡೀ ದೇಶ ಮೋದಿ ಮತ್ತೆ ಪ್ರಧಾನಿಯಾಗಿ ಮುಂದುವರಿಯಬೇಕೋ? ಬೇಡವೋ ಎಂಬ ಪ್ರಶ್ನೆಯನ್ನು ಮುಂದಿಟ್ಟು ಮತ ಚಲಾಯಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.