
ಗಾಂಧಿವಾದಿ ಉದ್ಯಮಿ, ಖ್ಯಾತ ವೈದ್ಯ ಡಾ. ಬಂಟ್ವಾಳ ನರಸಿಂಹ ಸೋಮಯಾಜಿ ಇನ್ನಿಲ್ಲ
ಗಾಂಧಿವಾದಿ ಉದ್ಯಮಿ, ಖ್ಯಾತ ವೈದ್ಯ ಡಾ. ಬಂಟ್ವಾಳ ನರಸಿಂಹ ಸೋಮಯಾಜಿ ಇನ್ನಿಲ್ಲ
ಅಮೆರಿಕಾದ ಮೊದಲ ಪಚನಾಂಗ ತಜ್ಞರಲ್ಲಿ ಒಬ್ಬರಾಗಿದ್ದ ಡಾ. ಬಂಟ್ವಾಳ ನರಸಿಂಹ ಸೋಮಯಾಜಿ ಅವರು ಮಂಗಳವಾರ, ಫೆಬ್ರವರಿ 13, 2024ರಂದು ಮಂಗಳೂರಿನಲ್ಲಿ ಕೊನೆಯುಸಿರೆಳೆದರು.
ಗಾಂಧಿವಾದಿ ಶ್ರೀ ನಾರಾಯಣ ಸೋಮಯಾಜಿ ಮತ್ತು ಗೋಪಿ ಅಮ್ಮ ಅವರ ಎರಡನೇ ಮಗನಾಗಿ 1935ರಲ್ಲಿ ಮಂಗಳೂರಿನಲ್ಲಿ ಜನಿಸಿದ್ದ ಡಾ. ನರಸಿಂಹ ಸೋಮಯಾಜಿಯವರು ಮಂಗಳೂರಿನ ಗಣಪತಿ ಪ್ರೌಢ ಶಾಲೆಯಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದರು.
ತದನಂತರ, ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ 1958ರಲ್ಲಿ MBBS ಪದವಿಯನ್ನು ಪಡೆದರು. ಬಳಿಕ ಇಂಗ್ಲೆಂಡಿನ ಬರ್ಮಿಂಗ್ ಹ್ಯಾಂ, ನಂತರ ಅಮೆರಿಕಾದ ಹ್ಯೂಸ್ಟನ್ ಗಳಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿದರು.
ಅಮೆರಿಕಾದ ಟೆನಿಸಿ ರಾಜ್ಯದ ನಾಶ್ವಿಲ್ನ ಮೆಹಾರಿ ಮೆಡಿಕಲ್ ಕಾಲೇಜಿಲ್ಲಿ ಪಚನಾಂಗ ವಿಜ್ಞಾನದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದರು ಹಾಗೂ ನಾಶ್ವಿಲ್ನಲ್ಲಿ ಪಚನಾಂಗ ತಜ್ಞರಾಗಿ 40ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದರು. ನಾಶ್ವಿಲ್ನಲ್ಲಿ ಟೆನಿಸಿಯ ಹಿಂದೂ ಸಾಂಸ್ಕೃತಿಕ ಕೇಂದ್ರವನ್ನು 1980ರಲ್ಲಿ ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು.
ಹದಿನೈದು ವರ್ಷಗಳ ಕಾಲ ಅದರ ಅಧ್ಯಕ್ಷರಾಗಿದ್ದಾಗ ಅವರ ನೇತೃತ್ವದಲ್ಲಿ ನಾಶ್ವಿಲ್ನಲ್ಲಿ ಭವ್ಯವಾದ ಶ್ರೀ ಗಣೇಶ ದೇವಾಲಯವನ್ನು ನಿರ್ಮಿಸಲಾಗಿತ್ತು.
ಮಂಗಳೂರಿನ ಕಾವೂರಿನಲ್ಲಿ 1985ರಲ್ಲಿ ಸ್ಥಾಪಿಸಿದ ಸಪ್ತಗಿರಿ ಹೋಟೆಲ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದರಲ್ಲದೆ, ಸ್ಥಳೀಯ ಕಾರ್ಯಗಳಿಗೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಕ್ಕಾಗಿ ಸಪ್ತಗಿರಿ ಫೌಂಡೇಶನ್ ಅನ್ನು 1989ರಲ್ಲಿ ಸ್ಥಾಪಿಸಿದ್ದರು.
ಡಾ. ನರಸಿಂಹ ಸೋಮಯಾಜಿಯವರು ತನ್ನ ಪತ್ನಿ ಸುಮೇಧ ಹಾಗೂ ಮಕ್ಕಳಾದ ಅನಿಲ್ ಮತ್ತು ಶಾಲಿನಿ, ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.