-->

 ಪ್ರಕಾಶ್ ನಾಯಕ್ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಮಾಡಿದ್ದೇನು...?

ಪ್ರಕಾಶ್ ನಾಯಕ್ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಮಾಡಿದ್ದೇನು...?

 ಪ್ರಕಾಶ್ ನಾಯಕ್ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಮಾಡಿದ್ದೇನು...?




ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಶ್ರೀ ಪ್ರಕಾಶ್ ನಾಯಕ್ ಅವರ ಸಾಧನೆಗಳು


2015 ರಿಂದ 2019 ರ ನಾಲ್ಕು ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾ ಸಂಘದ ಅಧ್ಯಕ್ಷರಾಗಿ ಶ್ರೀ ಪ್ರಕಾಶ್ ನಾಯಕ್ ಅವರು ಸಲ್ಲಿಸಿದ ಸೇವೆ ಸಂಘದ ಇತಿಹಾಸದಲ್ಲಿ ಸ್ಮರಣೀಯವಾಗಿದೆ.


ಶೂನ್ಯದಿಂದ ಆರಂಭ


ಪ್ರಕಾಶ್ ನಾಯಕ್ ಅವರು ಜಿಲ್ಲಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಸಂಘದ ಬ್ಯಾಂಕ್ ಖಾತೆಯಲ್ಲಿ ಶೂನ್ಯ ಶಿಲ್ಕು ಇತ್ತು. ಸಂಘದ ಹೆಸರಿನಲ್ಲಿ ಅಗಾಧ ಸಾಲವಿತ್ತು. ಈ ಹಿಂದಿನ ಅಧ್ಯಕ್ಷರುಗಳ ಅವಧಿಯಲ್ಲಿ ಪ್ರತಿಯೊಬ್ಬ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ದೇಣಿಗೆ ಸಂಗ್ರಹದ ಕೂಪನ್ ಪುಸ್ತಕಗಳನ್ನು ನೀಡಿದ ಪರಿಣಾಮವಾಗಿ ಯಾರೂ ಸಂಘಕ್ಕೆ ಕಾಲಿಡುತ್ತಿರಲಿಲ್ಲ.


ಈ ಅಂಶಗಳನ್ನು ಮನಗಂಡ ಪ್ರಕಾಶ್ ನಾಯಕ್ ಅವರು ಸಂಘದ ಸದಸ್ಯರು ಯಾರೊಂದಿಗೂ ಕೈಚಾಚಬಾರದು. ಆರ್ಥಿಕವಾಗಿ ಸಂಘವು ಬಲಾಢ್ಯ ವಾಗಬೇಕು ಎಂಬ ಉದಾತ್ತ ಉದ್ದೇಶದಿಂದ ತಳ ಮಹಡಿಯಲ್ಲಿ ನಿರುಪಯುಕ್ತವಾದ ಸ್ಥಳದಲ್ಲಿ ಅಂಗಡಿ ಕಟ್ಟಡಗಳನ್ನು ಕಟ್ಟಿಸಿ ವಾರ್ಷಿಕ ಸುಮಾರು ಹತ್ತರಿಂದ ಹನ್ನೆರಡು ಲಕ್ಷ ಆದಾಯ ಬರುವ ವ್ಯವಸ್ಥೆಯನ್ನು ಮಾಡಿದರು. ದೊಡ್ಡ ಮೊತ್ತದ ಬ್ಯಾಂಕ್ ಸಾಲವನ್ನು ಸಂಪೂರ್ಣವಾಗಿ ಸಂದಾಯ ಮಾಡಿದರು.


ಪ್ರಕರಣಗಳ ಸರಮಾಲೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ


ಸಂಘವನ್ನು ಆರ್ಥಿಕವಾಗಿ ಸುಸ್ಥಿತಿಗೆ ತಂದ ಈ ಸಾಧನೆಗಾಗಿ ಪ್ರಕಾಶ್ ನಾಯಕ್ ಅವರಿಗೆ ದೊರೆತ ಪ್ರತಿಫಲ ವೆಂದರೆ ಸಂಘದ ವಿರುದ್ಧ ಹೂಡಲಾದ ಎಂಟು ಕೇಸುಗಳನ್ನು ಎದುರಿಸುವಂತಾದದ್ದು. ಆದರೆ ವಿಶೇಷವೇನೆಂದರೆ ಪ್ರಕಾಶ್ ನಾಯಕ್ ಅವರು ಎಲ್ಲ ಪ್ರಕರಣಗಳನ್ನು ಅತ್ಯಂತ ಸಮರ್ಥವಾಗಿ ಎದುರಿಸಿದ್ದಾರೆ.


ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಂದ ನೆಲಸಮ ಆದೇಶ


ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಜಾರ್ಜ್ ಪಿಂಟೋ ತಳಮಡಿಯಲ್ಲಿ ಸಂಘದ ಕಚೇರಿ ಸಹಿತ ಅಂಗಡಿ ಮಳಿಗೆ ಅಕ್ರಮವಾಗಿ ನಿರ್ಮಿಸಿದ್ದಾರೆ‌. ಕೂಡಲೇ ನೆಲಸಮ ಮಾಡಿ ಎಂಬುದಾಗಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ದೂರು ನೀಡಿ ತಾತ್ಕಾಲಿಕ ನೆಲಸಮ ಆದೇಶ ಕೂಡ ಜಾರಿಯಾಗಿತ್ತು.

ಪ್ರಕಾಶ್ ನಾಯಕ್ ಈ ಸಮಸ್ಯೆಯನ್ನು ಬಹಳಷ್ಟು ಜಾಣ್ಮೆಯಿಂದ ಪರಿಹರಿಸಿರುತ್ತಾರೆ. ಅವರ ಅವಧಿಯಲ್ಲಿ ಅಕ್ರಮ ನಿರ್ಮಾಣ ಸಕ್ರಮಗೊಳ್ಳುವ ಪ್ರಕ್ರಿಯೆ ಪ್ರಾರಂಭಗೊಂಡಿತು. ಪರಿಷ್ಕೃತ ನಕ್ಷೆ ಕೂಡ ಮಂಜೂರು ಆಗಿತ್ತು. ಈ ಹಂತದಲ್ಲಿ ದುರದೃಷ್ಟವಶಾತ್ ಚುನಾವಣೆಯಲ್ಲಿ ಪ್ರಕಾಶ್ ನಾಯಕ್ ಅವರನ್ನು ಸ್ಪರ್ಧಿಸದಂತೆ ಮಾಡುವಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಯಶಸ್ವಿಯಾದುದರಿಂದ ಈ ಪ್ರಯತ್ನ ಕೈಗೂಡಲಿಲ್ಲ.

ಮುಂದಿನ ದಿನಗಳಲ್ಲಿ ಅಧಿಕಾರ ವಹಿಸಿಕೊಂಡ ನೂತನ ಆಡಳಿತ ಮಂಡಳಿಯು ಈ ಸಮಸ್ಯೆಯನ್ನು ನಿವಾರಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು ಇದೀಗ ತಳಮಹಡಿಯಲ್ಲಿರುವ ಅಂಗಡಿ ಮಳಿಗೆ, ಕಚೇರಿ ಸಹಿತ ಎಲ್ಲಾ ನಿರ್ಮಾಣ ನೆಲಸಮ ಮಾಡಲು ಆದೇಶ ಹೊರಡಿಸಲಾಗಿದೆ.


ನೌಕರರಿಗೆ 20 ಶೇಕಡ "ಮನೆ ಬಾಡಿಗೆ"


ಪ್ರಕಾಶ್ ನಾಯಕ್ ಅವರ ಅಧಿಕಾರಾವಧಿಯಲ್ಲಿ ಸರ್ಕಾರಿ ನೌಕರರಿಗೆ ಇಪ್ಪತ್ತು ಶೇ ಮನೆ ಬಾಡಿಗೆ ದೊರೆಯುವಂತಾಯಿತು. ಮಂಗಳೂರು ನಗರವನ್ನು ಬಿ ವರ್ಗದ ನಗರವನ್ನಾಗಿ ಘೋಷಿಸಬೇಕೆಂಬ ಬೇಡಿಕೆಗೆ ಎರಡು ದಶಕಗಳು ಇತಿಹಾಸವಿದೆ.

ಪ್ರಕಾಶ್ ನಾಯಕ್ ಅವರು ಅಧಿಕಾರ ಸ್ವೀಕರಿಸಿದ ಕೂಡಲೇ ಸ್ಥಳೀಯ ಶಾಸಕರ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಂಗಳೂರು ನಗರವನ್ನು ಬಿ ದರ್ಜೆ ನಗರವನ್ನಾಗಿ ಘೋಷಿಸಿ ಸರಕಾರಿ ನೌಕರರಿಗೆ ಶೇಕಡ 20 ಮನೆ ಬಾಡಿಗೆ ಸಿಗುವಂತಾಗಲು ಕಾರಣಕರ್ತರಾಗಿದ್ದಾರೆ.


ವೇತನ ಪರಿಷ್ಕರಣೆಯಾಯಿತು !


5 ವರ್ಷ ಪೂರ್ಣಗೊಂಡ ಕೂಡಲೇ ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆಗೊಂಡಿರುವುದು ಮಹತ್ವದ ವಿಷಯವೇ ಆಗಿದೆ. ಇದಕ್ಕೆ ಮೂಲ ಕಾರಣ ಜಿಲ್ಲಾ ಸಂಘದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಪ್ರಕಾಶ್ ನಾಯಕ್ ಅವರು ಜರುಗಿಸಿದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ಹಾಗೂ ರಾಜ್ಯ ಪರಿಷತ್ ಸಭೆಗಳು ಎಂಬುದನ್ನು ಮರೆಯುವಂತಿಲ್ಲ.

ಮಂಗಳೂರು ಅಧಿವೇಶನದಲ್ಲಿ ಕೈಗೊಂಡ ಐತಿಹಾಸಿಕ ನಿರ್ಣಯ ಪ್ರಕಾರ ದಿನಾಂಕ 2.6.2016ರಂದು ರಾಜ್ಯವ್ಯಾಪಿ ಸರಕಾರಿ ನೌಕರರು ನಡೆಸಿದ ಮುಷ್ಕರ ಅಭೂತಪೂರ್ವ ಯಶಸ್ಸನ್ನು ಕಂಡಿತು. ತತ್ಪರಿಣಾಮವಾಗಿ ವೇತನ ಆಯೋಗದ ರಚನೆಯಾಯಿತು ವೇತನ ಪರಿಷ್ಕರಣೆ ಆಯಿತು.


ರಾಜ್ಯದಲ್ಲಿ ಸಂಪತ್ ಭರಿತ ಜಿಲ್ಲಾ ಸಂಘವೆಂಬ ಕೀರ್ತಿ


ಇಡೀ ರಾಜ್ಯದಲ್ಲಿ ನಮ್ಮ ಜಿಲ್ಲಾ ಸಂಘವನ್ನು ಅತ್ಯಂತ ಶ್ರೀಮಂತ ಸಂಪದ್ಭರಿತ ಸಂಘವನ್ನಾಗಿ ಮಾಡಿದ ಕೀರ್ತಿ ಪ್ರಕಾಶ್ ನಾಯಕರಿಗೆ ಸಲ್ಲುತ್ತದೆ. ವಾರ್ಷಿಕವಾಗಿ ಸುಮಾರು ಅರ್ಧ ಕೋಟಿ ಹೆಚ್ಚಿನ ಸಂಪನ್ಮೂಲವನ್ನು ಪಡೆಯುವಂತಾಗಲು ಪ್ರಕಾಶ್ ನಾಯಕ್ ಅವರೇ ಕಾರಣಕರ್ತರಾಗಿದ್ದಾರೆ.


ಜಿಲ್ಲಾಧ್ಯಕ್ಷ ಸ್ಥಾನದಿಂದ ಪ್ರಕಾಶ್ ನಾಯಕ್ ನಿರ್ಗಮನ ಸಂಘಕ್ಕೆ ದೊಡ್ಡ ನಷ್ಟ!


ಯಾವ ಸಂಘಕ್ಕೂ ಸಂಸ್ಥೆಗೂ ಯಾರುಾ ಕೂಡ ಅನಿವಾರ್ಯರಲ್ಲ. ಆದರೆ ವ್ಯವಸ್ಥಿತವಾಗಿ ಸಂಘದ ಕಾರ್ಯ ಚಟುವಟಿಕೆಗಳು ನಡೆಯಲು ತೊಡಕುಂಟಾಗುತ್ತದೆ. ಪ್ರಕಾಶ್ ನಾಯಕ್ ಅವರ ಬಳಿಕ ಅಧಿಕಾರ ಸ್ವೀಕರಿಸಿದ ನೂತನ ಆಡಳಿತ ಮಂಡಳಿಯ ಕಾರ್ಯ ವೈಖರಿಯನ್ನು ಗಮನಿಸಿದಾಗ ಅಸಮರ್ಥ ಆಡಳಿತದಿಂದ ಸಂಘಕ್ಕೆ ಎಷ್ಟು ನಷ್ಟ ಉಂಟಾಗಿದೆ ಎಂಬುದು ತಿಳಿಯುತ್ತದೆ.


ಈಗ ಸಂಘಕ್ಕೆ ನೆಲೆಯೂ ಇಲ್ಲ, ಬೆಲೆಯೂ ಇಲ್ಲ


ಸಂಘದ ಮಾಜಿ ಪದಾಧಿಕಾರಿಗಳಾದ ಕಂದಾಯ ಇಲಾಖೆಯ ಶ್ರೀ ಪ್ರಕಾಶ್ ಚಂದ್ರ, ಕೆ ಆರ್ ನಾಥ್, ಸಂಜೀವ ಮುಂತಾದವರು ಸಂಘವು ಹೊಂದಿರುವ ಜಮೀನಿನ ಒಡೆತನ ಸರಕಾರಕ್ಕೆ ಸೇರಿದೆ ಎಂಬುದಾಗಿ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕಾಶ್ ನಾಯಕ್ ಅವರ ಅವಧಿಯಲ್ಲಿ ಸದರಿ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದ್ದರು.

ಅವರ ಅಧಿಕಾರಾವಧಿಯ ನಂತರ ಆಡಳಿತ ಮಂಡಳಿಯು ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲು ವಿಫಲವಾದ ದರಿಂದ ಸಂಘದ ಒಡೆತನದಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ 33 ಸೆನ್ಸ್ ಜಮೀನು ಸರಕಾರದ ಪಾಲಾಗಿದೆ.

ಈಗ ನಮ್ಮ ಜಿಲ್ಲಾ ಸಂಘಕ್ಕೆ ನೆಲೆಯೂ ಇಲ್ಲ ಬೆಲೆಯೂ ಇಲ್ಲದಂತಾಗಿದೆ.


30 ಲಕ್ಷ GST ಪಾವತಿ


ಜಿಲ್ಲಾ ಸಂಘವು ಕಳೆದ ಐದು ವರ್ಷಗಳಿಂದ ಸೇವಾ ತೆರಿಗೆ ಪಾವತಿಸಿಲ್ಲವೆಂದು ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಜಾರ್ಜ್ ಪಿಂಟೋ ಅವರು ಕೇಂದ್ರೀಯ ಅಬಕಾರಿ ಇಲಾಖೆಗೆ ದೂರು ನೀಡಿದ್ದರು. ಕೂಡಲೇ ಆ ಇಲಾಖೆಯ ಅಧಿಕಾರಿಯ ಸಂಘಕ್ಕೆ ನೋಟಿಸ್ ಜಾರಿ ಮಾಡಿ ಅಧ್ಯಕ್ಷರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ನೀವು ಮೂವತ್ತು ಲಕ್ಷಗಳಷ್ಟು ಸೇವಾ ತೆರಿಗೆಯನ್ನು ಬಾಕಿ ಮಾಡಿದ್ದೀರಿ. ಇದು ವಂಚನೆಯಾಗಿದೆ ಹಾಗೂ ಭಾರತೀಯ ದಂಡ ಸಂಹಿತೆಯಡಿ ಶಿಕ್ಷಾರ್ಹ ಅಪರಾಧವಾಗಿದೆ. ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಹೆದರಿಸುತ್ತಿದ್ದರು.

ಪ್ರಕಾಶ್ ನಾಯಕರು ಕೂಡಲೇ ಹೇಳಿದರು ನನ್ನನ್ನು ಬಂಧಿಸಿ ಯಾವ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೀರಿ? ಅಧಿಕಾರಿ ಹೇಳಿದರು ಮಂಗಳೂರಿನ ಸಿಜೆಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ನಾನು ಆ ನ್ಯಾಯಾಲಯದ ಮುಖ್ಯ ಲಿಪಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದ ಕೂಡಲೇ ಅಧಿಕಾರಿಯ ಮಾತಿನ ವರಸೆ ಬದಲಾಗಿ ಸಾರ್ ನಾನು ತಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲಿದ್ದೇನೆ ಎಂದು ನುಡಿದರು.

ಜಿಎಸ್ಟಿ ನೋಟಿಸ್ ಬಂದಾಗ ಸಂಘದ ಖಾತೆಯಲ್ಲಿ ಶೂನ್ಯ ಶಿಲ್ಕು ಇತ್ತು ಆದರೂ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿರ್ವಹಿಸಿದ ಕೀರ್ತಿ ಪ್ರಕಾಶ್ ನಾಯಕರಿಗೆ ಸಲ್ಲುತ್ತದೆ.


ಲೋಕಾಯುಕ್ತ ಇಲಾಖೆಗೆ ದೂರು


ಸಂಘದ ವಿರುದ್ಧ ಮಹನೀಯರೊಬ್ಬರು ಲೋಕಾಯುಕ್ತ ಇಲಾಖೆಗೆ ನೀಡಿದ ದೂರಿನನ್ವಯ ವಿಚಾರಣೆಗೆ ಬಂದ ಪೊಲೀಸ್ ಪೇದೆಯೊಬ್ಬ ಏರು ಧ್ವನಿಯಲ್ಲಿ ಮಾತನಾಡುತ್ತ ಸಂಘದ ಅಟೆಂಡರ್‌ನನ್ನು ಹೆದರಿಸುತ್ತಿದ್ದ. ಈ ವಿಚಾರವನ್ನು ಲೋಕಾಯುಕ್ತ ನಿರೀಕ್ಷಕರಿಗೆ ಸಂಘದ ಅಧ್ಯಕ್ಷರು ತಿಳಿಸಿದ ಕೂಡಲೇ ಆರಕ್ಷಕ ನಿರೀಕ್ಷಕರು ಸಂಘದ ಅಧ್ಯಕ್ಷರಾದ ಪ್ರಕಾಶ್ ನಾಯಕ್ ಅವರನ್ನು ತಾವೇ ವೈಯಕ್ತಿಕವಾಗಿ ಭೇಟಿ ಮಾಡಿ ವಿಚಾರ ತಿಳಿದುಕೊಂಡರು.


ಮೆಸ್ಕಾಂನಲ್ಲಿ ದೂರು


ತಳಮಹಡಿಯಲ್ಲಿ ನಿರ್ಮಿಸಿದ್ದ ಕಚೇರಿ ಹಾಗೂ ಅಂಗಡಿ ಕೋಣೆಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಆರೋಪಿಸಿ ಮೆಸ್ಕಾಂ ಇಲಾಖೆಯವರು ವಿದ್ಯುತ್ ನಿಲುಗಡೆಗೆ ಬಂದಾಗ ಇಲಾಖೆಯ ವರಿಷ್ಠ ಅಧಿಕಾರಿಯನ್ನು ಸಂಪರ್ಕಿಸಿ ವಿದ್ಯುತ್ ನಿಲುಗಡೆಯಾಗದಂತೆ ಸಂಘದ ಅಧ್ಯಕ್ಷರು ನೋಡಿಕೊಂಡರು.


ಜಿಲ್ಲಾ ಸಂಘವು ಕ್ರಿಯಾಶೀಲವಾಗಿತ್ತು


ಪ್ರಕಾಶ್ ನಾಯಕ್ ಅವರ ಆಡಳಿತ ಅವಧಿಯಲ್ಲಿ ಜಿಲ್ಲಾ ಸಂಘವು ನೌಕರರಿಗೆ ಉಪಯುಕ್ತವಾಗಿರುವ ಹತ್ತು ಹಲವು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತಿತ್ತು. ಕಡ್ಡಾಯ ಕಾರ್ಯಕ್ರಮಗಳಾದ ವಾರ್ಷಿಕ ಮಹಾಸಭೆ, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಮುಂತಾದವುಗಳನ್ನು ಪ್ರತಿ ವರ್ಷ ನಡೆಸಲಾಗಿದೆ. ಜೊತೆಗೆ ನೌಕರರಿಗೆ ಇಲಾಖೆ ಪರೀಕ್ಷೆಗಳಿಗೆ ತರಬೇತಿ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ತರಬೇತಿ, ಯೋಗ ಕಾರ್ಯಕ್ರಮ ಮುಂತಾದವುಗಳನ್ನು ಅತ್ಯಂತ ಯಶಸ್ವಿಯಾಗಿ ಜರುಗಿಸಲಾಗಿದೆ.


ವಸತಿಗೃಹಗಳ ದುರಸ್ತಿ


ಮಂಗಳೂರು ನಗರದ ಊರ್ವ ಸ್ಟೋರ್, ಬೊಂದೇಲ್ ಮತ್ತು ಕುಂಜತ್ತಬೈಲ್ ನಲ್ಲಿರುವ ಸುಮಾರು 500ಕ್ಕೂ ಅಧಿಕ ವಸತಿ ಗೃಹಗಳು 60 ವರ್ಷಗಳಿಗಿಂತಲೂ ಹಳೆಯದಾಗಿದ್ದು ವಾಸ ಯೋಗ್ಯ ಸ್ಥಿತಿಯಲ್ಲಿರಲಿಲ್ಲ. ಅವುಗಳನ್ನು ದುರಸ್ತಿ ಗೊಳಿಸುವಲ್ಲಿ ಪ್ರಕಾಶ್ ನಾಯಕ್ ಅವರ ಪಾತ್ರ ಮಹತ್ವದ್ದಾಗಿದೆ. ಸ್ಥಳೀಯ ಶಾಸಕರನ್ನು ಭೇಟಿಯಾಗಿ ವಿಧಾನಸಭೆಯಲ್ಲಿ ಪ್ರಸ್ತಾವನೆ ಮಾಡಿಸಿ ಸುಮಾರು 20 ಕೋಟಿ ಮಂಜೂರು ಮಾಡಿಸಿ ವಸತಿ ಗೃಹಗಳ ದುರಸ್ತಿಕಾರ್ಯವನ್ನು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿರುತ್ತಾರೆ.


ಆದಾಯ ತೆರಿಗೆ ಇಲಾಖೆಯಲ್ಲಿ ದೂರು


ಸಂಘವು ವಾಣಿಜ್ಯ ವ್ಯವಹಾರ ನಡೆಸುತ್ತಿದೆ. ಲಕ್ಷಾಂತರ ರೂಪಾಯಿ ತೆರಿಗೆ ಬಾಕಿ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆಯ ಸಮಕ್ಷಮ ನೀಡಿದ ದೂರು ವಿಚಾರಣೆಯಲ್ಲಿ ಬಾಕಿ ಇದೆ.


ಕೆಲವರು ಕೇಳಬಹುದು ಈ ಎಲ್ಲ ಪ್ರಕರಣಗಳನ್ನು ಅಧ್ಯಕ್ಷರೇ ಯಾಕೆ ನಿರ್ವಹಿಸಬೇಕು? ಅದಕ್ಕೆ ವಕೀಲರನ್ನು ನೇಮಕ ಮಾಡಬಹುದಲ್ಲವೇ? ಆದರೆ ಆಶ್ಚರ್ಯಕರ ವಿಷಯವೆಂದರೆ ಈ ಪ್ರಕರಣಗಳಲ್ಲಿ ಆದಾಯ ತೆರಿಗೆ; ಜಿಎಸ್ಟಿ; ಮೆಸ್ಕಾಂ ಕಚೇರಿಗಳಿಗೆ ವಿಚಾರಣೆಗೆ ಹಾಜರಾಗಲು ವಕೀಲರಿಗೆ ಅನುಮತಿಯಿಲ್ಲ. ಸಂಘದ ಅಧ್ಯಕ್ಷರು ವೈಯಕ್ತಿಕವಾಗಿ ತೆರಳಬೇಕು.


ಪ್ರಸ್ತುತ ಸಂಘದ ವಿರುದ್ಧ ಹೂಡಲಾದ ಎಲ್ಲಾ ದಾವೆಗಳ ಬಗ್ಗೆ ಸಂಪೂರ್ಣ ಜ್ಞಾನವಿರುವ ಏಕೈಕ ವ್ಯಕ್ತಿಯೆಂದರೆ ಪ್ರಕಾಶ್ ನಾಯಕ್ ಒಬ್ಬರೇ. ಅವರನ್ನು ದೂರವಿಟ್ಟು ಮೂಲೆಗುಂಪು ಮಾಡಿದ ಪರಿಣಾಮವಾಗಿ ಸಂಘದ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಸೋಲು ಉಂಟಾಗಿ ಸಂಘ ತನ್ನ ನೆಲೆ-ಬೆಲೆಯನ್ನು ಕಳೆದುಕೊಳ್ಳುವಂತಾಗಿದೆ.

ಕೇವಲ ಅಧಿಕಾರದ ಆಸೆಗಾಗಿ ಪ್ರಕಾಶ್ ನಾಯಕರ ಜೊತೆಗಿದ್ದವರೇ ಅವರನ್ನು ಟೀಕಿಸಿ ಆಡಿದ ಮಾತುಗಳು ಎಷ್ಟೊ. ಆದರೂ ಮಾತೃ ಸಂಘದ ಅಧ್ಯಕ್ಷನಿಗೆ ಅನ್ವರ್ಥಕವಾಗಿ ತಾಯಿ ಹೃದಯವನ್ನು ಹೊಂದಿ ಎಲ್ಲವನ್ನು ಸ್ವೀಕರಿಸಿದರು. "ಸಿಹಿಯಾದ ಹಣ್ಣು ಕೊಡುವ ಮರದ ತೊಗಟೆಗಳು ಕಲ್ಲೆಸೆತದಿಂದ ಗಾಯಗೊಂಡರೂ ಕಲ್ಲು ಎಸೆ ದವನಿಗೆ ಅದರಲ್ಲಿನ ಸಿಹಿಯಾದ ಹಣ್ಣು ಸಿಗುತ್ತದೆ" ಹಾಗೆಯೇ ತನ್ನನ್ನು ಮೂಲೆಗುಂಪು ಮಾಡಲು ಯತ್ನಿಸಿದ ತನ್ನ ಬಳಗದವರೇ ಆದ ಎಲ್ಲರಿಗೂ ಶುಭವಾಗಲಿ ಎಂದು ಪ್ರಕಾಶ್ ನಾಯಕ್ ಹಾರೈಸಿದರು.

ಇನ್ನು ಸೇವಾ ಕಾನೂನುಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಪ್ರಕಾಶ್ ನಾಯಕ್ ಅವರು ಸ್ವತಃ ಇಲಾಖಾ ಪರೀಕ್ಷೆಗಳಿಗೆ ತರಬೇತಿ ತರಗತಿಗಳನ್ನು ಉಚಿತವಾಗಿ ನಡೆಸಿಕೊಡುತ್ತಿದ್ದರು.


ಪ್ರಕಾಶ್ ನಾಯಕ್ ಅವರು ಮಾಡಿದ ಸಾಧನೆಗಳ ಬಗ್ಗೆ ಚಕಾರ ಎತ್ತದೇ ಅವರ ವಿರುದ್ಧ ಕಪೋಲಕಲ್ಪಿತ ಸುಳ್ಳು ಆಪಾದನೆಗಳನ್ನು ಮಾಡಿ ವಿಕೃತ ಆನಂದ ಪಡೆಯುವ ಕೆಲವು ಸದಸ್ಯರ ನಡವಳಿಕೆ ತೀರಾ ವಿಷಾದನೀಯ ಹಾಗೂ ವೇದನೆಯ ಸಂಗತಿಯಾಗಿದೆ. ಪ್ರಕಾಶ್ ನಾಯಕ್ ಎಂದುಾ ಕೂಡ ನೌಕರರ ಸಮಷ್ಟಿ ಹಿತ ದೃಷ್ಟಿಗೆ ವಿರುದ್ಧವಾಗಿರುವ ಕಾರ್ಯದಲ್ಲಿ ಕೈಜೋಡಿಸಿಲ್ಲ. ಬದಲಾಗಿ ನೌಕರರನ್ನು ಒಗ್ಗೂಡಿಸುವ ನಾವೆಲ್ಲರೂ ಸರಕಾರಿ ನೌಕರರು ನಮ್ಮ ಯಾವುದೇ ಸಮಸ್ಯೆಗಳನ್ನು ಒಟ್ಟಾಗಿ ಎದುರಿಸೋಣ ಎಂಬ ಸಂದೇಶವನ್ನು ಎಲ್ಲೆಡೆ ಸಾರುತ್ತಾ ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತಿದ್ದರು.


ಪ್ರಕಾಶ್ ನಾಯಕ್ ಅವರು ಯಾರನ್ನೂ ವಿರೋಧಿಸುವ ಅಥವಾ ಪ್ರಚಾರದ ಹುಚ್ಚು; ಅಧಿಕಾರದ ದಾಹ; ಪ್ರತಿಷ್ಠೆ; ಸ್ವಾರ್ಥದ ಹಿನ್ನೆಲೆಯಲ್ಲಿ ನೌಕರರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿಲ್ಲ. ನೌಕರ ಸಂಘದ ಚುನಾವಣೆಯಲ್ಲೂ ಅಷ್ಟೆ ಪ್ರಕಾಶ್ ನಾಯಕ್ ಅವರು ನಿರ್ಲಿಪ್ತರಾಗಿದ್ದರು. ನಿಮ್ಮ ಪ್ರತಿನಿಧಿಗಳನ್ನು ಆರಿಸುವ ಸ್ವಾತಂತ್ರ್ಯ ನಿಮಗಿದೆ. ಚುನಾವಣೆಗೆ ಸ್ಪರ್ಧಿಸುವ ಸ್ವಾತಂತ್ರ್ಯವೂ ಕೂಡ ನಿಮಗಿದೆ. ನೌಕರರ ಹಿತ ಕಾಪಾಡುವವರು ಖಂಡಿತ ಆಯ್ಕೆಯಾಗುತ್ತಾರೆ. ಎಲ್ಲವನ್ನೂ ತಿಳಿದು ವಿಚಾರಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಸ್ವಾತಂತ್ರ್ಯ ನಿಮಗಿದೆ ಎಂದು ಹೇಳುತ್ತಿದ್ದರು.


ನೌಕರರ ಶ್ರೇಯೋಭಿವೃದ್ಧಿಗಾಗಿ ದಶಕಗಳ ಕಾಲದಿಂದ ಪ್ರಾಮಾಣಿಕವಾಗಿ ಹಾಗೂ ನಿಸ್ವಾರ್ಥತೆಯಿಂದ ಅಹರ್ನಿಷಿ ದುಡಿದ ಪ್ರಕಾಶ್ ನಾಯಕ್ ಅವರನ್ನು ಕಡೆಗಣಿಸಿದ ಪರಿಣಾಮ ಸಂಘ ಪ್ರಸ್ತುತ ಯಾವ ಸ್ಥಿತಿಯಲ್ಲಿದೆ ಎಂದು ತಿಳಿಯಬಹುದು.


ಪ್ರಕಾಶ್ ನಾಯಕ್ ಅವರು ಜಿಲ್ಲಾ ಸಂಘದಲ್ಲಿ ಪದಾಧಿಕಾರಿಯಾಗಿ ಇಲ್ಲದಿದ್ದರೂ ಅವರ ಮನ ನೋಯಿಸದೆ ಗೌರವಯುತವಾಗಿ ಅವರ ಅಪಾರ ಅನುಭವವನ್ನು ಸಂಘಕ್ಕೆ ಪಡೆದುಕೊಳ್ಳುವ ಅವಕಾಶವನ್ನು ಈಗಿನ ಆಡಳಿತ ಮಂಡಳಿ ಕಳೆದುಕೊಂಡಿರುವುದು ಸಂಘದ ಪಾಲಿಗೆ ದುರಂತವೇ ಸರಿ.


ಪ್ರಕಾಶ್ ನಾಯಕ್ ಸಂಘದ ಅಧ್ಯಕ್ಷರಾಗಿರಲಿ, ಸದಸ್ಯರೇ ಆಗಿರಲಿ, ಸಂಘದ ಶ್ರೇಯೋಭಿವೃದ್ಧಿಗೆ ಅವರ ಸೇವೆಯ ಅವಶ್ಯಕತೆ ಮತ್ತು ಅನಿವಾರ್ಯತೆ ಇದ್ದೇ ಇದೆ.


ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ ಸಮಸ್ತ ಸದಸ್ಯರಲ್ಲಿ ಈ ಮೂಲಕ ವಿನಂತಿಸಿ ಕೊಳ್ಳುವುದೆಂದರೆ ಪ್ರಕಾಶ್ ನಾಯಕ್ ರವರು ಹೊಂದಿರುವ ಅಪಾರಜ್ಞಾನ ಹಾಗೂ ಅನುಭವವನ್ನು ಸಂಘದ ಒಳಿತಿಗಾಗಿ ಉಪಯೋಗಿಸಿಕೊಳ್ಳಿ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ರಾಜ್ಯ ಸರಕಾರಿ ನೌಕರರ ಶ್ರೇಯೋಭಿಲಾಷಿ ನೌಕರರ ಅಭಿಲಾಷೆ.


ಇದಕ್ಕೆ ಬದಲಾಗಿ, ಸಂಘದ ಶ್ರೇಯೋಭಿವದ್ಧಿಗೆ ಯಾವುದೇ ಕೊಡುಗೆಯನ್ನು ನೀಡದ; ಸಂಘ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಇದೀಗ ಕೇವಲ ಅಧಿಕಾರದ ಆಸೆ ಹಾಗೂ ಸಂಘದ ಸಂಪತ್ತನ್ನು ದೋಚುವ ಉದ್ದೇಶ ಹೊಂದಿರುವ ಯಾವ ಅಭ್ಯರ್ಥಿಗಳನ್ನು ಮುಂದಿನ ದಿನಗಳಲ್ಲಿ ಪದಾಧಿಕಾರಿಯಾಗಿ ಆಯ್ಕೆ ಮಾಡಬೇಡಿ. ಈ ರೀತಿ ಆಯ್ಕೆ ಮಾಡಿದ ಪರಿಣಾಮವನ್ನು ಈಗಾಗಲೇ ತಾವೆಲ್ಲರೂ ಅನುಭವಿಸಿದ್ದೀರಿ. ಒಂದು ವೇಳೆ ನೀವು ಇಂತಹ ವ್ಯಕ್ತಿಗಳನ್ನು ಮತ್ತೆ ಆಯ್ಕೆ ಮಾಡಿದ್ದೇ ಆದಲ್ಲಿ ನೂರು ವರ್ಷಗಳ ಇತಿಹಾಸವುಳ್ಳ ಈ ಸಂಘದ ಉನ್ನತಿಗಾಗಿ ದುಡಿದ ಹಲವಾರು ಮಹನೀಯರ ಆತ್ಮಕ್ಕೆ ಶಾಂತಿ ದೊರಕದೆ ಅವರೆಲ್ಲರ ಶಾಪ ನಿಮ್ಮ ಮೇಲೆ ಬೀಳುವುದು ಖಂಡಿತ. ನಿಮಗೆ ನೆನಪಿರಲಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ರಾಜ್ಯ ಸರಕಾರಿ ನೌಕರರ ಶ್ರೇಯೋಭಿಲಾಷಿ ನೌಕರರು ಒಕ್ಕೊರಲಿನಿಂದ ಕೇಳಿಕೊಳ್ಳುತ್ತಿದ್ದಾರೆ.



Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99