![ಪ್ರತಿಕೂಲ ಸಾಕ್ಷಿ ನುಡಿದ ಸಂತ್ರಸ್ತೆ: ಪರಿಹಾರ ಮೊತ್ತ ವಾಪಸ್ ನೀಡಲು ಮಂಗಳೂರು ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶ ಪ್ರತಿಕೂಲ ಸಾಕ್ಷಿ ನುಡಿದ ಸಂತ್ರಸ್ತೆ: ಪರಿಹಾರ ಮೊತ್ತ ವಾಪಸ್ ನೀಡಲು ಮಂಗಳೂರು ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶ](https://i.ytimg.com/vi/10cr-pEEzr4/hqdefault.jpg)
ಪ್ರತಿಕೂಲ ಸಾಕ್ಷಿ ನುಡಿದ ಸಂತ್ರಸ್ತೆ: ಪರಿಹಾರ ಮೊತ್ತ ವಾಪಸ್ ನೀಡಲು ಮಂಗಳೂರು ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶ
ಪ್ರತಿಕೂಲ ಸಾಕ್ಷಿ ನುಡಿದ ಸಂತ್ರಸ್ತೆ: ಪರಿಹಾರ ಮೊತ್ತ ವಾಪಸ್ ನೀಡಲು ಮಂಗಳೂರು ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶ
ದಲಿತ ದೌರ್ಜನ್ಯ ತಡೆ ಕಾಯ್ದೆ ಪ್ರಕರಣದಲ್ಲಿ ಪ್ರತಿಕೂಲ ಸಾಕ್ಷಿ ನುಡಿದ ಸಂತ್ರಸ್ತೆಗೆ ನೀಡಲಾಗಿದ್ದ ಪರಿಹಾರದ ಮೊತ್ತವನ್ನು ತಕ್ಷಣ ಹಿಂತಿರುಗಿಸಬೇಕು ಎಂದು ಮಂಗಳೂರಿನ ಒಂದನೇ ಹೆಚ್ಚುವರಿ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ.
ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಈ ಆದೇಶಹೊರಡಿಸಿದ್ದು, ಪ್ರಕರಣ ದಾಖಲಿಸಿ ಬಳಿಕ ಪ್ರತಿಕೂಲ ಸಾಕ್ಷಿ ನುಡಿಯುವ ಸಂತ್ರಸ್ತರಿಗೆ ಇದು ತಕ್ಕ ಪಾಠ ಕಲಿಸುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ತೀರ್ಪಾಗಿರುತ್ತದೆ.
ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ವಾದ ಮಂಡಿಸಿದ್ದರು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿವರ
ಮಂಜಪ್ಪ ಅಲಿಯಾಸ್ ಮಂಜ (23 ವರ್ಷ ಪ್ರಾಯ) ಮೇಲೆ ಭಾರತೀಯ ದಂಡ ಸಂಹಿತೆ ಕಲಂ. 363, 376 ಹಾಗೂ ಪೊಕ್ಸೋ ಕಾಯ್ದೆ ಕಲಂ 6 ಹಾಗೂ ಪ. ಜಾ. / ಪ ಪಂ. ದೌರ್ಜನ್ಯ ತಡೆ ಕಾಯ್ದೆ ಅಡಿಯ ಕಲಂ 3 (1)(W)(1)(2), 3(2) (va)ಯಂತೆ ಸಮಗ್ರ ತನಿಖೆ ಮಾಡಿ ಅಭಿಯೋಜನೆ ಪರ 39 ಸಾಕ್ಷಿದಾರರನ್ನು ವಿಚಾರಣೆ ಮಾಡಿ ದೋಷಾರೋಪಣಾ ಪಟ್ಟಿಯನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಹಾಗೂ ಜಿಲ್ಲಾ ತ್ವರಿತಗತಿಯ ನ್ಯಾಯಾಲಯ (ಎಫ್ಟಿಎಸ್ಸಿ-೧)ಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ 2023 ಅ. 5ರಂದು ಪ್ರಕರಣದ ವಿಚಾರಣೆ ಆರಂಭಿಸಿದ್ದರು. ನ. 17ರಂದು ವಿಚಾರಣೆ ಪೂರ್ಣಗೊಂಡಿತ್ತು. ಆದರೆ ಪ್ರಕರಣದ ವಿಚಾರಣೆ ವೇಳೆ ಸಂತ್ರಸ್ತೆ ಹಾಗೂ ಸಂತಸ್ತೆಯ ಕಡೆಯವರು ಪ್ರತಿಕೂಲ ಸಾಕ್ಷಿ ನುಡಿದಿದ್ದರು.
ಪ್ರಕರಣದಲ್ಲಿ ಸಂತ್ರಸ್ತರಿಗೆ ಆದ ಅನ್ಯಾಯಕ್ಕೆ ಸರಕಾರದಿಂದ FIR ದಾಖಲಾದಾಗ 1.25 ಲಕ್ಷ ರೂ ಹಾಗೂ ಪ್ರಕರಣದ ದೋಷಾರೋಪಣಾ ಪತ್ರ ಸಲ್ಲಿಸಿದಾಗ 2.50 ಲಕ್ಷ ರೂ. ಪರಿಹಾರ ಧನವನ್ನು ಮಂಜೂರು ಮಾಡಲಾಗಿತ್ತು. ಸಂತ್ರಸ್ತೆಯು ಅಪ್ರಾಪ್ತಳಾಗಿದ್ದ ಹಿನ್ನೆಲೆಯಲ್ಲಿ ಚಿಕ್ಕಮ್ಮನ ಖಾತೆಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಈ ಮೊತ್ತವನ್ನು ಜಮಾ ಮಾಡಿದ್ದರು.
ಪ್ರತಿಕೂಲ ಸಾಕ್ಷಿಯ ಹಿನ್ನೆಲೆಯಲ್ಲಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸಂತ್ರಸ್ತೆಗೆ ನೀಡಿದ 3.75 ಲಕ್ಷ ರೂ. ಮೊತ್ತದ ಪರಿಹಾರದ ಆದೇಶ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ವಿಚಾರಣೆ ಮಾಡಿದ ತನಿಖಾಧಿಕಾರಿಯವರ ಸಾಕ್ಷ್ಯವನ್ನು ಆಧರಿಸಿ, ಪರಿಹಾರದ ಮೊತ್ತವನ್ನು ಸರಕಾರಕ್ಕೆ ಹಿಂದಿರುಗಿಸಲು ಆದೇಶಿಸಬೇಕೆಂದು ಮನವಿ ಮಾಡಿದ್ದರು.
ನ್ಯಾಯಾಲಯವು ಪ್ರಕರಣದ ವಿಚಾರವನ್ನು ಪರಿಗಣಿಸಿ, 2023ರ ಡಿ. 26ರಂದು ಸಂತ್ರಸ್ತ ಯುವತಿಗೆ ವಿತರಿಸಲಾಗಿದ್ದ ಪರಿಹಾರದ ಮೊತ್ತವನ್ನು ಉಪನಿರ್ದೇಶಕರು ವಸೂಲಿ ಮಾಡಿ ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡುವಂತೆ ನಿರ್ದೇಶಿಸಲಾಗಿತ್ತು.
ಜ. 4ರಂದು ಇಲಾಖಾ ಉಪನಿರ್ದೇಶಕರು 3.75 ಲಕ್ಷ ರೂ. ವನ್ನು ಸಂತ್ರಸ್ತೆಯ ಚಿಕ್ಕಮ್ಮನಿಂದ ವಸೂಲಾತಿ ಮಾಡಿ, ಜಿಲ್ಲಾಧಿಕಾರಿ ಮತ್ತು ಉಪನಿರ್ದೇಶಕರ ಜಂಟಿ ಖಾತೆಗೆ ಮರು ಜಮೆ ಮಾಡಿದ್ದಾರೆ.
ವರದಿಯಾದ ಪರಿಶಿಷ್ಟ ಜಾತಿ ಹಾಗೂ ಪಂಗಡದ ದೌರ್ಜನ್ಯ ತಡೆ ಪ್ರಕರಣಗಳಲ್ಲಿ ಇಂತಹ ಗಂಭೀರವಾದ ಅಪರಾಧಗಳು ಘಟಿಸಿದಾಗ ಪ್ರಕರಣದ ತನಿಖೆಯನ್ನು ಮೇಲ್ದರ್ಜೆಯ ಅಧಿಕಾರಿಗಳಾದ ಸಹಾಯಕ ಪೊಲೀಸ್ ಆಯುಕ್ತರು ಕೈಗೊಂಡು ದೋಷಾರೋಪಣೆ ಪತ್ರ ಸಲ್ಲಿಸುತ್ತಾರೆ.
ಸರಕಾರವೂ ಸಹ ಬೃಹತ್ ಪ್ರಮಾಣದ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುತ್ತದೆ. ಈ ಎರಡೂ ಪ್ರಕ್ರಿಯೆಯ ಮೂಲ ಉದ್ದೇಶ ಪ.ಜಾ./ಪ.ಪಂ ದೌರ್ಜನ್ಯಕ್ಕೆ ಒಳಗಾಗಬಾರದು ಮತ್ತು ಸಂತ್ರಸ್ತರಿಗೆ ಸಮರ್ಪಕ ಆರ್ಥಿಕ ನೆರವು ಲಭಿಸಲಿ ಎಂದಾಗಿದೆ.
ಈ ಕಾರಣಕ್ಕೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಸಾಕಷ್ಟು ನಿಯಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ ನಿರೀಕ್ಷಿಸಿದಂತಹ ಫಲಿತಾಂಶಗಳು ದೊರಕುವುದು ಕಷ್ಟವಾಗಿದೆ.