ಉಡುಪಿಯ ಕಟಪಾಡಿ- ಶಿರ್ವ ಮುಖ್ಯರಸ್ತೆಯ ಪಂಜಿಮಾರು ಫಲ್ಕೆ ಶ್ರೀ ವ್ಯಾಘ್ರ ಚಾಮುಂಡಿ ಸನ್ನಿಧಾನದ ಕಾಣಿಕೆ ಡಬ್ಬಿ ಕಳವು ಮಾಡಿದ ಇಬ್ಬರು ಯುವಕರನ್ನು ಪಂಜಿಮಾರಿನ ಯುವಕರ ತಂಡ ಹಿಡಿದು ಶಿರ್ವ ಪೊಲೀಸರಿಗೊಪ್ಪಿಸಿದ್ದಾರೆ.
ಅಪರಿಚಿತ ಯುವಕರಿಬ್ಬರು ಕಾಣಿಕೆ ಡಬ್ಬಿಯನ್ನು ಕಳವು ಮಾಡಿ ಸಮೀಪದ ಕಾಡಿನಲ್ಲಿ ಡಬ್ಬಿ ಒಡೆಯಲು ಪ್ರಯತ್ನಿಸಿದ್ದರು. ಶಬ್ದ ಕೇಳಿದ ಪರಿಸರದ ನಾಗರಿಕರು ಪಂಜಿಮಾರಿನ ಯುವಕರಿಗೆ ಮಾಹಿತಿ ನೀಡಿದ್ದರು. ಯುವಕರ ತಂಡ ಬಂದೊಡನೆ ಓರ್ವ ಬಸ್ಸಿನಲ್ಲಿ ಪರಾರಿಯಾಗಿದ್ದು, ಬೆನ್ನಟ್ಟಿದ ಯುವಕರು ಆತನನ್ನು ಬಂಟಕಲ್ಲಿನಲ್ಲಿ ಇಳಿಸಿ ಕರೆತಂದಿದ್ದಾರೆ. ಮತ್ತೋರ್ವ ಕಾಡಿನಲ್ಲಿ ಅವಿತುಕೊಂಡಿದ್ದು ತಂಡ ಪತ್ತೆ ಹಚ್ಚಿ ಶಿರ್ವ ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.