
ಭೀಕರ ದುರಂತದಲ್ಲಿ ಕಿಡಿಗೇಡಿಗಳ ಅಟ್ಟಹಾಸ - ಭೂಕಂಪ ಸಂತ್ರಸ್ತರ ಲೂಟಿ
ಇಸ್ಲಾಂಬುಲ್ : ಟರ್ಕಿ ಮತ್ತು ಸಿರಿಯಾ ಭೂಕಂಪಗಳಲ್ಲಿ ಸಾವಿನ ಸಂಖ್ಯೆ ನಿರೀಕ್ಷೆ ಮೀರಿ ಹೆಚ್ಚುತ್ತಿದ್ದು, ಈಗಾಗಲೇ 28 ಸಾವಿರಕ್ಕೂ ಹೆಚ್ಚು ಮಂದಿ ಸತ್ತಿರುವುದು ದೃಢಪಟ್ಟಿದೆ. ಇನ್ನೂ, ಕೂಡ ಬಹಳಷ್ಟು ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಬಾಕಿ ಇದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಅಲ್ಲದೇ ಗಾಯಾಳುಗಳ ಸಂಖ್ಯೆಯೂ ಹೆಚ್ಚಿದ್ದು, ಸಾವಿನ ಸಂಖ್ಯೆ ಉಬ್ಬರಕ್ಕೆ ಕಾರಣವಾಗಬಹುದು.
ಅಲ್ಲಲ್ಲಿ ಪವಾಡ ಸದೃಶರಂತೆ ಕಟ್ಟಡಗಳ ಅವಶೇಷಗಳಡಿ ಜನರು ಜೀವಂತವಾಗಿ ಸಿಕ್ಕಿರುವ ಘಟನೆಗಳು ನಡೆದಿವೆ. ಹಾಗೆಯೇ, ಕೆಲ ಕಡೆ ಕಿಡಿಗೇಡಿಗಳು ಲೂಟಿಯಲ್ಲಿ ತೊಡಗಿರುವುದು ವರದಿಯಾಗುತ್ತಿದೆ. ಭೂಕಂಪ ಸಂತ್ರಸ್ತರಿಂದಲೂ ಇವರು ಲೂಟಿ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಟರ್ಕಿ ಪೊಲೀಸರು ಇಂಥ 48 ಮಂದಿ ವಂಚಕರನ್ನು ಬಂಧಿಸಿರುವುದು ತಿಳಿದುಬಂದಿದೆ. ಯಾರಾದರೂ ಕಾನೂನು ಮುರಿಯಲು ಪ್ರಯತ್ನಿಸಿದರೆ ತುರ್ತು ಸಂದರ್ಭದ ಅಧಿಕಾರ ಬಳಸಿ ಕಠಿಣ ಶಿಕ್ಷೆ ವಿಧಿಸುವುದಾಗಿ ಟರ್ಕಿ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.
ದೇಶದ ಜನರು ಮತ್ತು ಆಡಳಿತ ಭೂಕಂಪದಿಂದ ಕಂಗೆಟ್ಟಿರುವ ಸಂದರ್ಭದಲ್ಲೂ ಕೆಲ ಗುಂಪುಗಳು ಜಗಳದಲ್ಲಿ ತೊಡಗಿವೆ. ಹಟಾಯ್ ಪ್ರಾಂತ್ಯದಲ್ಲಿ ವಿವಿಧ ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಪರಿಣಾಮವಾಗಿ ಅಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಆಸ್ಟ್ರಿಯಾ ದೇಶದ ತಂಡವು ಹೆದರಿಕೆಯಿಂದ ಬೇಸ್ ಕ್ಯಾಂಪ್ನಲ್ಲಿ ಆಶ್ರಯ ಪಡೆಯಬೇಕಾದ ಘಟನೆ ನಡೆದಿದೆ.