![ಮಿಯ್ಯಾರು : ಮನೆಯ ಬಾಗಿಲು ಒಡೆದು ದರೋಡೆ ಮಿಯ್ಯಾರು : ಮನೆಯ ಬಾಗಿಲು ಒಡೆದು ದರೋಡೆ](https://lh3.googleusercontent.com/-ia6Wiz_iqQE/Y7gNEqD48pI/AAAAAAAAABY/Z0c0DRiIJSIcJI0F5_gRlnxhoemuX2btwCNcBGAsYHQ/s1600/1673006351267952-0.png)
ಮಿಯ್ಯಾರು : ಮನೆಯ ಬಾಗಿಲು ಒಡೆದು ದರೋಡೆ
Friday, January 6, 2023
ಕಾರ್ಕಳ: ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಜೋಡುಕಟ್ಟೆ ಎಂಬಲ್ಲಿ ಯಾರೂ ವಾಸವಿಲ್ಲದ ಮನೆಯ ಬಾಗಿಲು ಒಡೆದು ದರೋಡೆಗೈದಿರುವ ಘಟನೆ ನಡೆದಿದೆ.
ಮಿಯ್ಯಾರಿನ ಹರೀಶ್ ಕರ್ಕೇರ ಎಂಬವರ ಮನೆಯ ಸಮೀಪವೇ ಅವರ ದೊಡ್ಡಮ್ಮ ರಮಣಿ ಎಂಬವರ ಮನೆಯಿದ್ದು ರಮಣಿಯವರ ಮನೆಯವರು ಅಮೆರಿಕದಲ್ಲಿ ವಾಸವಾಗಿದ್ದಾರೆ. ರಮಣಿ ಅವರ ಮನೆಯ ಮೇಲುಸ್ತುವಾರಿಯನ್ನು ಹರೀಶ್ ಅವರು ನೋಡಿಕೊಳ್ಳುತ್ತಿದ್ದು ಜ. 3ರಂದು ಹರೀಶ್ ರವರ ಸಹೋದರ ಪ್ರಕಾಶ್ ರಮಣಿಯವರ ಮನೆಗೆ ಹೋಗಿ ಬಂದಿದ್ದರು. ಆದರೆ ನಿನ್ನೆ (ಗುರುವಾರ) ಮಧ್ಯಾಹ್ನ 1 ಗಂಟೆಯ ವೇಳೆಗೆ ತೋಟದ ಕೆಲಸಕ್ಕೆ ಹೋಗಿದ್ದ ರಾಘು ಎಂಬವರು ಮನೆಯ ಬಾಗಿಲು ಒಡೆದಿರುವುದಾಗಿ ಹರೀಶ್ ರವರಿಗೆ ಮಾಹಿತಿ ನೀಡಿದ್ದು ಹರೀಶ್ ಅಲ್ಲಿಗೆ ಹೋಗಿ ಪರಿಶೀಲಿಸಿದಾಗ ಕಳ್ಳರು ಬಾಗಿಲು ಒಡೆದು ಮನೆಯನ್ನು ಜಾಲಾಡಿರುವುದು ಬೆಳಕಿಗೆ ಬಂದಿದೆ.
ಈ ವಿಚಾರವನ್ನು ದೊಡ್ಡಮ್ಮ ರಮಣಿಯವರಿಗೆ ತಿಳಿಸಿದಾಗ ಮನೆಯಲ್ಲಿರುವ ಕಳವಾಗಿರುವ ವಸ್ತುಗಳ ಬಗ್ಗೆ ತಾನು ಬಂದು ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂಬುದಾಗಿ ಹರೀಶ್ ಕರ್ಕೇರ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.