![ಮಂಗಳೂರು: ಪಿಎಫ್ಐ ದಾಳಿ ಮುಸ್ಲಿಂ ಸಮಾಜದ ಮೇಲಿನ ದಾಳಿಯಲ್ಲ; ಯುಟಿ ಖಾದರ್ ಮಂಗಳೂರು: ಪಿಎಫ್ಐ ದಾಳಿ ಮುಸ್ಲಿಂ ಸಮಾಜದ ಮೇಲಿನ ದಾಳಿಯಲ್ಲ; ಯುಟಿ ಖಾದರ್](https://lh3.googleusercontent.com/-fNSofSNj_Wk/YzKpd_yQ84I/AAAAAAAARkE/z_6odmjxTKs-gm4uVqP9v6p7zy04O3n4wCNcBGAsYHQ/s1600/1664264560298090-0.png)
ಮಂಗಳೂರು: ಪಿಎಫ್ಐ ದಾಳಿ ಮುಸ್ಲಿಂ ಸಮಾಜದ ಮೇಲಿನ ದಾಳಿಯಲ್ಲ; ಯುಟಿ ಖಾದರ್
Tuesday, September 27, 2022
ಮಂಗಳೂರು: ರಾಜ್ಯದಲ್ಲಿ ಜಿಲ್ಲೆಗಳಲ್ಲಿ ಸಾಕಷ್ಟು ಧಾರ್ಮಿಕ ಗುರುಗಳು, ಉಲೇಮಾಗಳು, ಸಂಘಟನೆಗಳಿದ್ದು, ಯಾರೂ ಪಿಎಫ್ಐ ಮೇಲಿನ ದಾಳಿಯ ವಿರುದ್ಧ ಅಪಸ್ವರ ಎತ್ತಿಲ್ಲ. ಮುಸ್ಲಿಂ ಧರ್ಮದ ಸಹಿತ ಎಲ್ಲಾ ಧರ್ಮಗಳು ನ್ಯಾಯಯುತ ತನಿಖೆಗೆ ಖಂಡಿತಾ ಬೆಂಬಲ ಕೊಡುತ್ತಾರೆಂದು ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಹೇಳಿದರು.
ಪಿಎಫ್ಐ ಮೇಲಿನ ದಾಳಿ ಇಡೀ ಮುಸ್ಲಿಂ ಸಮುದಾಯದ ಮೇಲಿನ ದಾಳಿಯಾಗಿದೆ ಎಂಬಂತಹ ಮಾತುಗಳು ಕೇಳಿಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಮುಸ್ಲಿಂ ಸಮುದಾಯದ ಮೇಲಿನ ದಾಳಿಯಲ್ಲ. ಅದೇ ರೀತಿ ಯಾವ ಸಂಘಟನೆಗಳನ್ನು ಬ್ಯಾನ್ ಮಾಡಬೇಕು, ಇನ್ನೇನು ಮಾಡಬೇಕೆಂಬುದು ತನಿಖೆಯ ಆಧಾರದಲ್ಲಿ ತಿಳಿಯುತ್ತದೆ. ಸಮಾಜದಲ್ಲಿ ಅಶಾಂತಿ ಹುಟ್ಟುವ, ದ್ವೇಷಾಧಾರಿತ ಕೃತ್ಯ ಮಾಡುತ್ತಿದ್ದರೆ ಎಲ್ಲ ಸಂಘಟನೆಗಳಿಗೂ ಸಮಾನವಾದ ಕಾನೂನು ತನ್ನಿ. ಇದರಿಂದ ದೇಶದಲ್ಲಿ ನ್ಯಾಯ, ತಾರತಮ್ಯ ರಹಿತವಾದ ಸಮಾಜ ಅಥವಾ ಆಡಳಿತಕ್ಕೆ ಎಲ್ಲರೂ ಬೆಂಬಲ ಕೊಡುತ್ತಾರೆ ಎಂದು ಸರಕಾರಕ್ಕೆ ಕಿವಿಮಾತು ಹೇಳಿದರು.
ಸಮಾಜದಲ್ಲಿ ಅಶಾಂತಿ, ದ್ವೇಷದ ವಾತಾವರಣ, ಹಲ್ಲೆ, ಕೊಲೆಯ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೆ ಅಂತಹ ಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಎಲ್ಲರ ಸಹಮತವೂ ಇರುತ್ತದೆ. ಆದರೆ ಶಾಂತಿ, ಸುವ್ಯವಸ್ಥೆಯ ವಾತಾವರಣ ನಿರ್ಮಾಣ ಮಾಡೋದು, ಕಾನೂನು ಕೈಗೆತ್ತಿಕೊಳ್ಳುವವರನ್ನು ಹದ್ದುಬಸ್ತಿನಲ್ಲಿಡೋದು ಸರಕಾರದ ಜವಾಬ್ದಾರಿಯಾಗಿದೆ. ಅಲ್ಲದೆ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಒಂದೇ ರೀತಿಯ ನ್ಯಾಯ ಕೊಡುವ ಕಾರ್ಯ ಸರಕಾರದಿಂದ ಆಗಬೇಕು. ಸರಕಾರದ ಕಾರ್ಯ ರಚನೆಯು ಒಂದೇ ರೀತಿಯಾಗಿದ್ದಲ್ಲಿ ಎಲ್ಲರೂ ಬೆಂಬಲ ಕೊಡುತ್ತಾರೆ. ಯಾರಿಗೂ ಅನ್ಯಾಯವಾಗಬಾರದು. ನೈಜ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಲಿ. ಆದರೆ ನಿರಪರಾಧಿಗಳಿಗೆ ತೊಂದರೆಯಾಗಬಾರದು ಎಂದು ಖಾದರ್ ಹೇಳಿದರು.