ಅಜ್ಜಿ ಆರೈಕೆಗೆ ಬಂದ ಕೆಲಸದಾಕೆ ಅಜ್ಜಿಯ ಚಿನ್ನ ಹಾಗೂ ಎಟಿಎಂ ಕಾರ್ಡ್ ಕಳವುಗೈದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ. ಹೆಸ್ಕತ್ತೂರು ಹಾರ್ಯಾಡಿ, ಕೆರೆಮನೆಯ ಜಲಜಮ್ಮ ಶೆಡ್ತಿ ಎಂಬುವರೇ ಚಿನ್ನ ಹಾಗೂ ಎಟಿಎಂ ಕಾರ್ಡ್ ಕಳೆದುಕೊಂಡವರು. ಮನೆಯಲ್ಲಿ ಜಲಜಮ್ಮ ಶೆಡ್ತಿ ಒಬ್ಬರೇ ಇದ್ದು, ಮನೆಯವರು ವಿದೇಶದಲ್ಲಿ ಇದ್ದರು.
ಆರೈಕೆಗಾಗಿ ಮಂಗಳೂರಿನ ಖಾಸಗಿ ಏಜೆನ್ಸಿ ಮೂಲಕ ಮೇ ತಿಂಗಳ 23 ರಿಂದ ಸುಮಿತ್ರಾ ಎಂಬಾಕೆಯನ್ನು ಮನೆಯಲ್ಲಿರಿಸಿಕೊಂಡಿದ್ದರು. ಆಕೆ ಆಗಸ್ಟ್ 1 ರಂದು ವಾಪಾಸು ಹೋಗಿದ್ದು, ಸುಶ್ಮಿತಾ ಎಂಬುವಳನ್ನು ಏಜೆನ್ಸಿ ನೇಮಿಸಿತ್ತು. ಸುಶ್ಮಿತಾ ಆಗಸ್ಟ್ 8ರಂದು ವಾಪಾಸ್ಸು ಹೋದ ಬಳಿಕ ಮೊದಲಿದ್ದ ಸುಮಿತ್ರಾ ಅಜ್ಜಿ ಆರೈಕೆಗೆ ಬಂದಿದ್ದಳು. ಆಗಸ್ಟ್ 30ರಂದು ಗೌರಿ ಪೂಜೆ ಇದ್ದುದರಿಂದ ಸಂಬಂಧಿಕ ನವೀನ್ ಶೆಟ್ಟಿ ಮತ್ತು ವೃದ್ಧೆ ಜಲಜಮ್ಮ ಶೆಡ್ತಿಯವರ ಚಿನ್ನವನ್ನು ಪೂಜೆಗೆ ಇಡಲೆಂದು ನವೀನ್ ಶೆಟ್ಟಿಯವರು ಜಲಜಮ್ಮ ಶೆಡ್ತಿ ಮನೆಗೆ ಹೋಗಿ ಚಿನ್ನ ಕೇಳಿದ್ದು, ಅಜ್ಜಿ ಚಿನ್ನ ತರಲು ಕಪಾಟಿನ ಬಾಗಿಲು ತೆರೆದಾಗ ಚಿನ್ನ ಹಾಗೂ ಎಟಿಎಂ ಕಾರ್ಡ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಒಂದು ವಾರ ಕೆಲಸಕ್ಕೆ ಬಂದಿದ್ದ ಸುಶ್ಮಿತಾಳಿಗೆ ಕರೆ ಮಾಡಿದಾಗ ಆಕೆ ಪೋನ್ ರಿಸೀವ್ ಮಾಡಿಲ್ಲ. ಮಂಗಳೂರಿನ ದಾಸ್ ಏಜೆನ್ಸಿಗೆ ತಿಳಿಸಿದರೂ ಸ್ಪಂದನೆ ದೊರಕಿಲ್ಲ ಎಂಬುದಾಗಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.