UDUPI- ವಿದ್ಯಾರ್ಥಿಗಳ ಸಂಡೆ ಜಾಲಿ ಟ್ರಿಪ್ - ಬೈಕ್ ಸ್ಕಿಡ್ ಆಗಿ ಇಬ್ಬರು ಸಾವು

ಕುಂದಾಪುರ: ಬೈಕೊಂದು ರಾ.ಹೆದ್ದಾರಿ-66 ರ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈರ್ವರು ಕಾಲೇಜು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡು ಸಾವನ್ನಪ್ಪಿದ ದಾರುಣ ಘಟನೆ ಇಲ್ಲಿನ ಬೈಂದೂರು ಸಮೀಪದ ಕಂಬದಕೋಣೆ ಸೇತುವೆ ಬಳಿ ಸಂಭವಿಸಿದೆ.


ಮೃತ ವಿದ್ಯಾರ್ಥಿಗಳು ಮೂಲತಃ ಆಂಧ್ರಪ್ರದೇಶದವರಾಗಿದ್ದು, ಪ್ರಸ್ತುತ ಮಣಿಪಾಲ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಕಲ್ಲೂರು ತರುಣ್ ಕುಮಾರ್ ರೆಡ್ಡಿ(19) ಹಾಗೂ ಆದಿತ್ಯ ರೆಡ್ಡಿ (18) ಎಂದು ಗುರುತಿಸಲಾಗಿದೆ‌.


ಭಾನುವಾರ ಕಾಲೇಜಿಗೆ ರಜೆ ಇದ್ದ ಹಿನ್ನೆಲೆ ಜಾಲಿ ಟ್ರಿಪ್‌ಗಾಗಿ ಮಣಿಪಾಲದಿಂದ ಮುರ್ಡೇಶ್ವರಕ್ಕೆ ಬಾಡಿಗೆ ಬೈಕ್ ನಲ್ಲಿ ತೆರಳುತ್ತಿರುವ ವೇಳೆ ಈ ಅವಘಡ ನಡೆದಿದೆ‌. ಬೈಕ್ ಕಂಬದಕೋಣೆ ಸಮೀಪಿಸುತ್ತಿದ್ದಂತೆ ಏಕಾಏಕಿ ಸವಾರನ‌ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಇಬ್ಬರಿಗೂ ಗಂಭೀರ ಗಾಯಗಳಾಗಿತ್ತು. 


ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ ಇನ್ನೋರ್ವನನ್ನು ಗಂಗೊಳ್ಳಿ ಆಪತ್ಭಾಂದವ ಇಬ್ರಾಹಿಂ‌ ಗಂಗೊಳ್ಳಿ ಮತ್ತವರ ತಂಡ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರಾದರೂ ಅಷ್ಟರಲ್ಲಾಗಲೇ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.

 
ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.