
ಉಡುಪಿ- ಕಸದ ವಿಚಾರದಲ್ಲಿ ಮಾಜಿ ಸಚಿವರ ವಾಗ್ವಾದ ( Video)
ಸಚಿವ ವಿನಯ್ ಕುಮಾರ್ ಸೊರಕೆ ಹಾಗೂ ಸ್ಥಳೀಯ ಗ್ರಾಮಸ್ಥರ ನಡುವೆ ಕಸದ ವಿಚಾರವಾಗಿ ಮಾತಿನ ಚಕಮಕಿಯಾದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎಲ್ಲೂರಿನಲ್ಲಿ ನಡೆದಿದೆ.
ಸುಮಾರು 5 ಕೋಟಿ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣವಾಗಿದೆ. ಕಾಪು ಪುರಸಭೆ ,ಎಲ್ಲೂರು, ಪಡುಬಿದ್ರಿ , ಉಚ್ಚಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಸವಿಲೇವಾರಿಗೆ ಇಲ್ಲಿ ವ್ಯವಸ್ಥೆ ಮಾಡಲಾಗಿತ್ತು ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ವಾದ. ಅದರೆ ಸ್ಥಳೀಯ ಗ್ರಾಮಸ್ಥರು ಪಡುಬಿದ್ರೆ ಮತ್ತು ಉಚ್ಚಿಲ ಗ್ರಾಮದ ಕಸವನ್ನು ಇಲ್ಲಿ ತರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದಿಂದ ತಡೆಯಾಜ್ಞೆ ಯನ್ನು ಕೂಡ ತಂದಿದ್ದರು.
ಹಾಲಿ ಶಾಸಕ ಲಾಲಾಜಿ ಆರ್ ಮೆಂಡನ್ ಅವರ ನೇತೃತ್ವದಲ್ಲಿ ಸಭೆ ನಡೆದು ಕೇವಲ ಕಾಪು ಪುರಸಭೆ ಹಾಗೂ ಎಲ್ಲೂರು ಗ್ರಾಮದ ಕಸವನ್ನು ಈ ಘಟಕದಲ್ಲಿ ವಿಲೇವಾರಿ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಆ ಬಳಿಕ ತಡೆಯಾಜ್ಞೆಯನ್ನು ತೆರವು ಮಾಡಲಾಗಿತ್ತು. ಇದೀಗ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಪಡುಬಿದ್ರೆ ಮತ್ತು ಉಚ್ಚಿಲ ಗ್ರಾಮದ ಕಸವನ್ನು ಕೂಡ ಇಲ್ಲೇ ವಿಲೇವಾರಿ ಮಾಡುವಂತೆ ಆಗ್ರಹಿಸಿದೆ.