RRR ತೆರೆಗೆ: ಆಂದ್ರ ಪ್ರದೇಶದ ಈ ಚಿತ್ರಮಂದಿರದ 'ಪರದೆ'ಗೇ ಹಾಕಿದ್ದಾರೆ ತಂತಿ ಬೇಲಿ

ಆಂದ್ರಪ್ರದೇಶ: ರಾಜಮೌಳಿ ನಿರ್ದೇಶನದ “ಆರ್‌ಆರ್‌ಆರ್‌’ ಸಿನಿಮಾ ಶುಕ್ರವಾರ ದೇಶದಾದ್ಯಂತ ಸಾವಿರಾರು ಥಿಯೇಟರ್‌ಗಳಲ್ಲಿ ತೆರೆ ಕಂಡಿದೆ. ಆದರೆ ಈ ಚಿತ್ರ ತೆರೆಕಂಡಿರುವ  ಆಂಧ್ರಪ್ರದೇಶದ ಶ್ರೀಕಾಕುಲಂನ ಥಿಯೇಟರ್‌ ಒಂದರಲ್ಲಿ ತೆರೆಗೇ ತಂತಿ ಬೇಲಿ ಹಾಕಲಾಗಿದೆ.
ಶ್ರೀಕಾಕುಲಂನ ಥಿಯೇಟರ್‌ನಲ್ಲಿ ಅಲ್ಲು ಅರ್ಜುನ್‌ ನಟನೆಯ “ಪುಷ್ಪಾ’ ಸಿನಿಮಾ ಬಿಡುಗಡೆಯಾದಾಗ, ಸಿನಿ ಪ್ರಿಯರು ಸೀಟಿನಿಂದ ಎದ್ದು, ತೆರೆ ಮುಂದೆ ನೃತ್ಯ ಮಾಡಿದ್ದರು. ಅದರಿಂದಾಗಿ ತೆರೆಯೇ ಹರಿದುಹೋಗಿತ್ತು.

ಈಗ ದಕ್ಷಿಣ ಭಾರತ ಖ್ಯಾತ ನಟರಾದ ಜೂ. ಎನ್‌ಟಿಆರ್‌ ಮತ್ತು ರಾಮ್‌ಚರಣ್‌ ಇಬ್ಬರೂ “ಆರ್‌ಆರ್‌ಆರ್‌’ ಮೂಲಕ ಒಂದೇ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದು, ಅವರಿಬ್ಬರ ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ. ಇದೀಗ ತೆರೆ ಮತ್ತೆ ಹರಿಯುವ ಎಲ್ಲಾ ಸಾಧ್ಯತೆಯೂ ಇದೆ ಎಂದು, ತೆರೆ ಹಾಳಾಗದಂತೆ ಕಾಪಾಡುವ ನಿಟ್ಟಿನಲ್ಲಿ ತೆರೆಗೆ ಬೇಲಿ ಹಾಕಲಾಗಿದೆ ಎಂದು  ಥಿಯೇಟರ್‌ನ ಮಾಲಕ  ತಿಳಿಸಿದ್ದಾರೆ.