
ರಾಷ್ಟ್ರೀಯ ಮಟ್ಟದ ನಾಲ್ವರು ಈಜುಪಟುಗಳಿಂದ ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳು ಅರೆಸ್ಟ್
Wednesday, March 30, 2022
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಊಟ ಮಾಡುವ ಎಂದು ಮನೆಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪದ ಮೇಲೆ ರಾಷ್ಟ್ರೀಯ ಮಟ್ಟದ ನಾಲ್ವರು ಈಜುಪಟುಗಳನ್ನು ಸಂಜಯ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ದಿಲ್ಲಿ ಮೂಲದ ರಜತ್ (23), ಶಿವರಾಣಾ (22), ದೇವ್ ಸರೋಯಿ (25), ಯೋಗೇಶ್ ಕುಮಾರ್ (26) ಬಂಧಿತ ಆರೋಪಿಗಳು. ಮಾ.24ರಂದು ರಾತ್ರಿ ವೇಳೆ ಪಶ್ಚಿಮ ಬಂಗಾಳ ಮೂಲದ ಈ ಯುವತಿಯನ್ನು ಬೆಂಗಳೂರಿನ ಸಂಜಯನಗರದ ಮನೆಗೆ ಕರೆದೊಯ್ದ ರಜತ್ ಹಾಗೂ ಆತನ ಗೆಳೆಯರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂದು ಯುವತಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ. ಬಂಧಿತ ಆರೋಪಿಗಳು ರಾಷ್ಟ್ರೀಯಮಟ್ಟದ ಈಜು ಸ್ಪರ್ಧೆಗೆ ತರಬೇತಿ ಪಡೆಯಲೆಂದು ಬೆಂಗಳೂರಿಗೆ ಬಂದಿದ್ದರು. ಇವರು ಸಂಜಯನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಬಸವನಗುಡಿಯ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದರು.
ಅತ್ಯಾಚಾರಕ್ಕೊಳಗಾದ ಪಶ್ಚಿಮ ಬಂಗಾಳ ಮೂಲದ ಸಂತ್ರಸ್ತೆ ಎರಡು ವರ್ಷಗಳಿಂದ ಬೆಂಗಳೂರು ವಾಸಿಯಾಗಿದ್ದಾರೆ. ವಸಂತನಗರದಲ್ಲಿರುವ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲೇ ಸಮೀಪದಲ್ಲಿಯೇ ಇರುವ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.
ಈ ಯುವತಿಯು ಡೇಟಿಂಗ್ ಆ್ಯಪ್ನಲ್ಲಿ ತನ್ನ ಪ್ರೊಫೈಲ್ ಹಾಕಿಕೊಂಡಿದ್ದರು. ಆ ಮೂಲಕ ತನ್ನನ್ನು ಸಂಪರ್ಕಿಸುವ ಯುವಕರೊಂದಿಗೆ ಆಕೆ ಡೇಟಿಂಗ್ಗೆ ಹೋಗುತ್ತಿದ್ದಳೆಂದು ತಿಳಿದು ಬಂದಿದೆ. ಇದೀಗ ಅತ್ಯಾಚಾರಗೈದ ಆರೋಪಿಗಳ ಪೈಕಿ ರಜತ್, ಡೇಟಿಂಗ್ ಆ್ಯಪ್ ಮೂಲಕ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಇನ್ಸ್ಟ್ರಾಗ್ರಾಂನಲ್ಲಿ ಇಬ್ಬರು ಚಾಟಿಂಗ್ ಮಾಡಲು ಆರಂಭಿಸಿದ್ದಾರೆ. ಬಳಿಕ ಮೊಬೈಲ್ ಸಂಖ್ಯೆಯನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಮೊಬೈಲ್ ಸಂಪರ್ಕದಿಂದ ಹತ್ತಿರವಾದ ಇಬ್ಬರೂ ಸಲಿಗೆ ಬೆಳೆಸಿಕೊಂಡಿದ್ದರು. ಆತ್ಮೀಯತೆ ಹೆಚ್ಚಾದ ಹಿನ್ನೆಲೆಯಲ್ಲಿ ಮಾ. 24ರಂದು ರಜತ್, ಸಂತ್ರಸ್ತೆಯನ್ನು ಹೋಟೆಲ್ಗೆ ಊಟಕ್ಕೆಂದು ಕರೆಸಿಕೊಂಡಿದ್ದಾನೆ. ಬಳಿಕ ಮನೆಯಲ್ಲಿಯೇ ಊಟ ಮಾಡೋಣವೆಂದು ತನ್ನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆನ್ಲೈನ್ ಮೂಲಕ ಊಟ ಆರ್ಡರ್ ಮಾಡಿದ್ದಾನೆ. ಬಳಿಕ ಯುವತಿ ಸೇರಿದಂತೆ ನಾಲ್ವರು ಆರೋಪಿಗಳು ಜೊತೆಯಾಗಿ ಕುಳಿತು ಮದ್ಯದ ಪಾರ್ಟಿ ಹಾಗೂ ಊಟ ಮಾಡಿದ್ದಾರೆ.
ತಡರಾತ್ರಿಯಾಗಿದ್ದರಿಂದ ಸಂತ್ರಸ್ತೆ ರಜತ್ ರೂಂನಲ್ಲಿಯೇ ಮಲಗಿದ್ದಾರೆ. ಈ ವೇಳೆ ಆರೋಪಿ ರಜತ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ರಜತ್ ಸೂಚನೆ ಮೇರೆಗೆ ಇತರೆ ಮೂವರು ಆರೋಪಿಗಳು ಮದ್ಯದ ಅಮಲಿನಲ್ಲಿ ಆಕೆಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ವಿನಾಯಕ್ ಪಾಟೀಲ್ ಹೇಳಿದರು.