
Mangaluru- ನೂರು ವರ್ಷಗಳ ಪುರಾತನ ಬಾವಿ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ ವೇಳೆ ಪತ್ತೆ
Thursday, July 8, 2021
ಮಂಗಳೂರು: ನೂರು ವರ್ಷಗಳ ಪುರಾತನ ಬಾವಿಯೊಂದು ನಗರದ ಡೊಂಗರಕೇರಿ ಅಶ್ವತ್ಥ ಕಟ್ಟೆಯ ಸಮೀಪದಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಈ ಪುರಾತನ ಬಾವಿ ಪತ್ತೆಯಾಗಿದೆ.
ಡೊಂಗರಕೇರಿ ಬಳಿ ಸ್ಮಾರ್ಟ್ ಸಿಟಿ ಕಾಮಗಾರಿ ಯೋಜನೆಯಡಿ ರಸ್ತೆ ಹಾಗೂ ಫುಟ್ ಪಾತ್ ಕಾಮಗಾರಿ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಫುಟ್ ಪಾತ್ ವ್ಯವಸ್ಥೆಗೆಂದು ರಸ್ತೆ ಅಗೆಯುವ ಸಂದರ್ಭದಲ್ಲಿ ಈ ಬಾವಿ ಪತ್ತೆಯಾಗಿದೆ. ಸುಮಾರು 50ಅಡಿ ಆಳ ಇರುವ ಈ ಬಾವಿಯಲ್ಲಿ ಶುದ್ಧ ನೀರಿದೆ. ಬಾವಿಗೆ ಕೆಂಪು ಕಲ್ಲಿನ ಆವರಣವಿದ್ದು, ಬಾವಿ ಇನ್ನೂ ಸುಸ್ಥಿಯಲ್ಲಿದೆ.
ಹಿಂದೆ ಅಲ್ಲಿನ ಸಾಕಷ್ಟು ಮನೆಗಳ ಮಂದಿ ಈ ಬಾವಿ ನೀರನ್ನೇ ಆಶ್ರಯಿಸುತ್ತಿದ್ದರು. ಆದರೆ ಮಂಗಳೂರಿಗೆ ನಳ್ಳಿ ನೀರು ಬಂದ ಬಳಿಕ ಈ ಬಾವಿಯನ್ನು ಬಳಕೆ ಮಾಡುವವರಿರಲಿಲ್ಲ. ಅಲ್ಲದೆ ಒಂದಿಬ್ಬರು ಮಂದಿ ಇದೇ ಬಾವಿಗೆ ಆತ್ಮಹತ್ಯೆ ಮಾಡಿಕೊಂಡದ್ದೂ ಇದೆಯಂತೆ. ಹಾಗಾಗಿ 1969ರಲ್ಲಿ ಬಾವಿಯನ್ನು ಸ್ಲ್ಯಾಬ್ ಹಾಕಿ ಮುಚ್ಚಲಾಗಿತ್ತು. ಇದೀಗ ಈ ಬಾವಿ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ ವೇಳೆ ಪತ್ತೆಯಾಗಿದೆ.