ಮಹಿಳೆ ಮನೆಬಿಟ್ಟು ಹೋಗಲು ಕಾರಣ ಎಂದು ಆರೋಪಿಸಿ ಯುವಕನಿಗೆ ಠಾಣೆಯಲ್ಲಿ ಮೂತ್ರ ಕುಡಿಸಿದ ಎಸ್ಸೈ!

ಚಿಕ್ಕಮಗಳೂರು: ಕೌಟುಂಬಿಕ ಕಲಹದಿಂದಾಗಿ ಮನೆ ಬಿಟ್ಟು ಹೋದ ಮಹಿಳೆಯ ವಿಚಾರಕ್ಕೆ‌ ಸಂಬಂಧಪಟ್ಟಂತೆ ಆ ಮಹಿಳೆಯ ಜೊತೆ 6 ತಿಂಗಳ ಹಿಂದೆ ಸಂಪರ್ಕದಲ್ಲಿ ಇದ್ದ ಯುವಕನನ್ನು ಪೊಲೀಸರು ಠಾಣೆಗೆ ಕರೆಸಿ ಅಲ್ಲಿ ಆತನಿಗೆ ಮೂತ್ರ ಕುಡಿಸಲಾಗಿದೆ ಎಂದು ಆರೋಪ ಕೇಳಿಬಂದಿದೆ.


ಮೂಡಿಗೆರೆ ತಾಲೂಕಿನ ಕಿರುಗುಂದದ ಪುನೀತ್ ಎಂಬ ಯುವಕ ಅದೇ ಗ್ರಾಮದ ವಿವಾಹಿತ ಮಹಿಳೆಯ ಜೊತೆ ಫೋನ್ ಮೂಲಕ ಸಂಪರ್ಕ ದಲ್ಲಿದ್ದ. 6 ತಿಂಗಳ ಹಿಂದೆ ಈ ವಿಚಾರವಾಗಿ ಮಹಿಳೆಯ ಮನೆಯವರು ಆತನನ್ನು ಕರೆಸಿ ಬುದ್ದಿ ಹೇಳಿ ಕಳಿಸಿದ್ದರು. ಇದೀಗ ಮಹಿಳೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೋಗಿದ್ದು, ಇದಕ್ಕೆ ಪುನೀತ್ ಕಾರಣವಿರಬಹುದೆಂದು ಮಹಿಳೆಯ ಮನೆಯವರು ಮತ್ತು ಕೆಲವರು ಆರೋಪಿಸಿದ್ದರು.
ಅಲ್ಲದೇ ಈ ವಿಚಾರವಾಗಿ ಪುನೀತ್‌ನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಸಬ್‌ ಇನ್ಸ್‌ಪೆಕ್ಟರ್ ಪುನೀತ್‌‌ನ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಆತ ನೀರು ಕೇಳಿದಾಗ ಕಳ್ಳತನ ಆರೋಪದಲ್ಲಿ ಠಾಣೆಯಲ್ಲಿ ಇದ್ದ ಆರೋಪಿಯಿಂದ ಪುನೀತ್ ಬಾಯಿಗೆ ಮೂತ್ರ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದೀಗ ಪಿಎಸ್ಐ ಮತ್ತು ಇತರ ಸಿಬ್ಬಂದಿ ಗಳ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ