![ಕರಾವಳಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಡ್ರಗ್ಸ್ ದಂಧೆ: ಆಪ್ಗಳ ಮೇಲೆ ಪೊಲೀಸರ ಹದ್ದಿನ ಕಣ್ಣು! ಕರಾವಳಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಡ್ರಗ್ಸ್ ದಂಧೆ: ಆಪ್ಗಳ ಮೇಲೆ ಪೊಲೀಸರ ಹದ್ದಿನ ಕಣ್ಣು!](https://lh3.googleusercontent.com/-l37h8DQf_y4/X1G5IbPme4I/AAAAAAAAGLU/o2_SckvywyUHeOAt83AP6uW-PyZ7z1pUwCNcBGAsYHQ/s1600/1599191325625719-0.png)
ಕರಾವಳಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಡ್ರಗ್ಸ್ ದಂಧೆ: ಆಪ್ಗಳ ಮೇಲೆ ಪೊಲೀಸರ ಹದ್ದಿನ ಕಣ್ಣು!
ಮಂಗಳೂರು: ಕನ್ನಡ ಚಿತ್ರರಂಗದ ಮಾದಕ ಲೋಕದ ನಂಟಿನ ಬಂಧ ಸುದ್ದಿಯಾಗುತ್ತಿದ್ದಂತೆಯೇ ಮಂಗಳೂರಿನಲ್ಲೂ ಡ್ರಗ್ಸ್ ಆಳವಾಗಿ ಬೇರೂರಿದೆ ಎಂಬ ವಿಷಯ ನಿಧಾನವಾಗಿ ಜಗಜ್ಜಾಹೀರಾಗುತ್ತಿದೆ. ಮಂಗಳೂರಿನ ಮಾದಕ ದಂಧೆಯ ನಂಟು ಇಂದು ನಿನ್ನೆಯದಲ್ಲ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅದಕ್ಕೂ ಮಿಗಿಲಾಗಿ, ಈ ಡ್ರಗ್ಸ್ ವ್ಯವಹಾರ ನಡೆಯುತ್ತಿರುವುದು Watsapp ಹಾಗೂ ಇತರ ಆಪ್ ಗಳ ಮೂಲಕ... ಇದು ಪೊಲೀಸರನ್ನು ಚಿಂತಿಗೀಡುವ ಮಾಡಿದೆ.
ಡ್ರಗ್ ಡೀಲರ್ಗಳು ಮತ್ತು ಏಜಂಟರು ವಾಟ್ಸ್ ಆಪ್ ಸಂದೇಶ ಅಥವಾ ಕರೆ ಮಾಡುವ ಮೂಲಕ ವ್ಯವಹಾರ ನಡೆಸುತ್ತಾರೆ ಎನ್ನುತ್ತಾರೆ ಪೊಲೀಸರು. ಕೋವಿಡ್ ಲಾಕ್ಡೌನ್ ಮಧ್ಯೆಯೂ ಈ ವ್ಯವಹಾರ ಅವ್ಯಾಹತವಾಗಿ ನಡೆದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ 11 ಮಾದಕ ಪದಾರ್ಥ ಪ್ರಕರಣಗಳು ದಾಖಲಾಗಿವೆ. ಪೊಲೀಸರು ನಡೆಸಿದ ಕಾರ್ಯಾಚರಣೆಗಳಲ್ಲಿ ಸುಮಾರು 50 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ಮತ್ತು ಇತರ ಸೊತ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಈ ಅಂಕಿ ಅಂಶಗಳು ಕಡಲ ನಗರಿಯ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಮಂಗಳೂರಿನ ಡ್ರಗ್ಸ್ ಪ್ರಕರಣಕ್ಕೆ ದಶಕಗಳ ಇತಿಹಾಸವಿದೆ. ಸುಮಾರು 9 ವರ್ಷಗಳ ಹಿಂದೆ, ಅಂದರೆ 2011ರಲ್ಲಿ ಮಂಗಳೂರಿನ ಕಾಲೇಜೊಂದರಲ್ಲಿ ಕಲಿಯುತ್ತಿರುವ ಡ್ರಗ್ಸ್ ಅಡಿಕ್ಟ್ ಆಗಿದ್ದ ಪಿಯು ವಿದ್ಯಾರ್ಥಿನಿ ಓರ್ವಳನ್ನು ಮುಂಬಯಿಗೆ ಕರೆದೊಯ್ಯುವ ಯತ್ನವನ್ನು ಕೊನೆಯ ಹಂತದಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ತಡೆ ಹಿಡಿಯಲಾಗಿತ್ತು. ಈ ಪ್ರಕರಣ ಆ ಕಾಲಕ್ಕೆ ಭಾರೀ ದೊಡ್ಡ ಸುದ್ದಿಯಾಗಿತ್ತು. ಈ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿ ಸುಮಾರು 6 ತಿಂಗಳು ಜೀವನ್ಮರಣ ಹೋರಾಟ ನಡೆಸಿ ಕೊನೆಗೂ ಚೇತರಿಸಿಕೊಂಡಿದ್ದಳು.
ಗಾಂಜಾ, ಅಫೀಮು ಮೊದಲಾದ ಸರಕುಗಳು ಗೋವಾ, ಆಂಧ್ರ ಹಾಗೂ ಇತರ ರಾಜ್ಯಗಳ ಮೂಲಕ ನಗರಕ್ಕೆ ಎಗ್ಗಿಲ್ಲದೆ ಕಾಲಿಡುತ್ತಿತ್ತು. ಹೀಗೆ ಡ್ರಗ್ಸ್ ಜಾಲ ವ್ಯಾಪಕವಾಗಿದ್ದ ಬಗ್ಗೆ ಮಂಗಳೂರಿನ ಆಗಿನ ಶಾಸಕ ಹಾಗೂ ವಿಧಾನ ಸಭೆ ಸಾರ್ವಜನಿಕ ಅರ್ಜಿಗಳ ಸಮಿತಿ ಅಧ್ಯಕ್ಷರಾಗಿದ್ದ ಎನ್. ಯೋಗೀಶ್ ಭಟ್ ಅವರಿಗೆ ಹಲವಾರು ದೂರು ಅರ್ಜಿಗಳು ಸಲ್ಲಿಕೆಯಾಗಿತ್ತು. ಹಾಗಾಗಿ ಅರ್ಜಿಗಳ ಸಮಿತಿಯು ಡ್ರಗ್ಸ್ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ ಡ್ರಗ್ಸ್ ಹಾವಳಿ ತಡೆಯಲು ಹಲವು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಶಿಫಾರಸು ಮಾಡಿದ್ದರು.
ಆದರೆ, ಬೆಂಗಳೂರಿನ ಡ್ರಗ್ಸ್ ದಂಧೆಗೂ ಮಂಗಳೂರಿನ ಡ್ರಗ್ಸ್ ಜಾಲಕ್ಕೂ ಸಂಬಂಧ ಇನ್ನೂ ದೃಢಪಟ್ಟಿಲ್ಲ ಎಂಬುದಾಗಿ ನಗರದ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಆದರೆ, ಅದೇ ಉಸಿರಿಗೆ, ಮಂಗಳೂರಿನ ಡ್ರಗ್ಸ್ ಜಾಲಕ್ಕೆ ಬೇರೆ ಸಂಪರ್ಕ ಮೂಲಗಳಿವೆ ಎಂಬುದನ್ನೂ ಹೇಳಿದ್ದಾರೆ. ಈ ಮೂಲಕ ಅಪಾಯದ ಸಂಕೇತವನ್ನು ಸಾರಿ ಹೇಳಿದ್ದಾರೆ.
ಮಾತ್ರವಲ್ಲದೆ, ಈ ಡ್ರಗ್ ಮಾಫಿಯಾವನ್ನು ಭೇದಿಸಲು ಕ್ರಮ ಕೈಗೊಳ್ಳಲಾಗಿದೆ. ಮಸ್ಕತ್ನಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಡ್ರಗ್ಸ್ ರವಾನೆ ಆಗುತ್ತಿದ್ದು, ಮುಖ್ಯ ಆರೋಪಿಗಳ ಬಂಧನಕ್ಕೆ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂಬ ವಿಷಯವನ್ನೂ ಅವರು ಸೂಚ್ಯವಾಗಿ ಹೇಳಿದ್ದಾರೆ.