![ಮತ್ತೆ ಸುದ್ದಿಯಾಗಿದೆ ಸ್ಯಾಟಲೈಟ್ ಪೋನ್ ಕರೆ; ದ.ಕ ಜಿಲ್ಲೆಯಲ್ಲಿ ಈ ಕರೆ ಮಾಡುತ್ತಿರುವವರಾರು? ವಿಶೇಷ ಲೇಖನ ಮತ್ತೆ ಸುದ್ದಿಯಾಗಿದೆ ಸ್ಯಾಟಲೈಟ್ ಪೋನ್ ಕರೆ; ದ.ಕ ಜಿಲ್ಲೆಯಲ್ಲಿ ಈ ಕರೆ ಮಾಡುತ್ತಿರುವವರಾರು? ವಿಶೇಷ ಲೇಖನ](https://1.bp.blogspot.com/-g8d2Y1NDNco/XxrBsxUSoFI/AAAAAAAADfA/faY-M9QN9dMy7PhvW8G_f8bKU6WjHNHNgCNcBGAsYHQ/s320/satelite%2Bphone.jpg)
ಮತ್ತೆ ಸುದ್ದಿಯಾಗಿದೆ ಸ್ಯಾಟಲೈಟ್ ಪೋನ್ ಕರೆ; ದ.ಕ ಜಿಲ್ಲೆಯಲ್ಲಿ ಈ ಕರೆ ಮಾಡುತ್ತಿರುವವರಾರು? ವಿಶೇಷ ಲೇಖನ
(ಗಲ್ಫ್ ಕನ್ನಡಿಗ ವಿಶೇಷ) ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಸ್ಯಾಟ್ ಲೈಟ್ ಪೋನ್ ಕರೆಯ ಸುದ್ದಿ ಮುನ್ನಲೆಗೆ ಬಂದಿದೆ.
ರಾಜ್ಯಮಟ್ಟದ ಟಿವಿ ಚಾನೆಲ್ ಗಳು, ಮತ್ತು ಪತ್ರಿಕೆಗಳು ಈ ವಿಚಾರವನ್ನು ಸುದ್ದಿಯಾಗಿ ಪ್ರಕಟಿಸಿದ ಬಳಿಕ ನಿಜಕ್ಕೂ ಜಿಲ್ಲೆಯ ಜನತೆ ಈ ಸುದ್ದಿಯಿಂದ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮದ ವರದಿ ಪ್ರಕಾರ ಬೆಳ್ತಂಗಡಿಯ ಹಳ್ಳಿಯೊಂದರಲ್ಲಿ ಈ ಸ್ಯಾಟ್ ಲೈಟ್ ಪೋನ್ ನ ಲೊಕೇಶನ್ ಸಿಕ್ಕಿದೆ. ಇದು ಎಷ್ಟರಮಟ್ಟಿಗೆ ನಿಜವಾದ ವಿಚಾರ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಮೂಲಗಳು ತಿಳಿಸಿದೆ ಎಂಬ ಅಸ್ತ್ರ ಪ್ರಯೋಗಿಸಿ ಬಚಾವಾಗುವ ಮಾಧ್ಯಮಗಳು ಇಲ್ಲಿಯೂ ಅದೇ ಪದಗಳನ್ನು ಬಳಸಿಕೊಂಡಿದೆ. ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಸುಳ್ಳಿರಲಾರದು. ಆದರೆ ಇಂತಹ ವಿಚಾರದಲ್ಲಿ ಅಧಿಕಾರಿಗಳ ಹೇಳಿಕೆಗಳು ಮುಖ್ಯವಾಗುತ್ತದೆ. ಅದನ್ನು ಓದುಗರಿಗೆ ನೀಡುವ ಪ್ರಯತ್ನಗಳು ಆಗಿಲ್ಲ.
(ಗಲ್ಫ್ ಕನ್ನಡಿಗ ವಿಶೇಷ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಯಾಟ್ ಲೈಟ್ ಪೋನ್ ಕರೆ ಎಂಬುದು ಜನರ ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಭೂಗತ ಚಟುವಟಿಕೆಗಳಷ್ಟೆ ಉಗ್ರ ಚಟುವಟಿಕೆಗಳ ನಡೆದ ಹಿನ್ನೆಲೆ ಇದೆ. ನಕ್ಸಲ್ ಚಟುವಟಿಕೆಗಳು ಜಿಲ್ಲೆಯ ಬೆಳ್ತಂಗಡಿ ಭಾಗದಲ್ಲಿ ಒಂದು ಕಾಲದಲ್ಲಿ ಜೋರಾಗಿಯೆ ಇತ್ತು. ಈ ಕಾರಣದಿಂದ ಜಿಲ್ಲೆಯಲ್ಲಿ ಸ್ಯಾಟಲೈಟ್ ಪೋನ್ ಕರೆಯ ಲೋಕೇಶನ್ ತೋರಿಸಿದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಫ್ ಕನ್ನಡಿಗ ವಿಶೇಷ) ಆದರೆ ಮಾಧ್ಯಮಗಳಲ್ಲಿ ಬರುತ್ತಿರುವ ಸ್ಯಾಟಲೈಟ್ ಪೋನ್ ಕರೆ ಎಂಬ ಸುದ್ದಿಯನ್ನು ಮಾತ್ರ ಜಿಲ್ಲೆಯ ಜನ ಪೂರ್ತಿಯಾಗಿ ನಂಬುವ ಸ್ಥಿತಿಯಲ್ಲಿ ಇಲ್ಲ. ಕಳೆದ ವರ್ಷ ಇದೇ ಮಾಧ್ಯಮಗಳು ಬೆಳ್ತಂಗಡಿ ತಾಲೂಕಿನಲ್ಲಿ ಸ್ಯಾಟ್ ಲೈಟ್ ಪೋನ್ ಕರೆ ಎಂದು ಭಿತ್ತರಿಸಿ ಒಬ್ಬ ಉಗ್ರನನ್ನು ಬಂಧಿಸಲಾಗಿದೆ ಎಂಬ ಸುದ್ದಿಯನ್ನು ಮಾಡಿದ್ದರು. ಮಾಧ್ಯಮಗಳು ಬಂಧನವಾದ ಉಗ್ರ ಎಂದು ತೋರಿಸಲಾದ ಅಮಾಯಕ ವ್ಯಕ್ತಿ ಮರುದಿನ ಪತ್ರಿಕಾಗೋಷ್ಠಿ ಕರೆದು ನನ್ನನ್ನು ಬಂಧಿಸಲಾಗಿಲ್ಲ. ಅಷ್ಟಕ್ಕೂ ಸ್ಯಾಟಲೈಟ್ ಪೋನ್ ಹೇಗಿರುತ್ತದೆ ಎಂಬುದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ಕೊಡಬೇಕಾಯಿತು. ಒಬ್ಬ ಮುಗ್ದ ವ್ಯಕ್ತಿಯನ್ನು ಮಾಧ್ಯಮಗಳು ದೇಶದ್ರೋಹಿ ಪಟ್ಟ ನೀಡಿ ಸುದ್ದಿ ಮಾಡಿದ್ದವು.
(ಗಲ್ಫ್ ಕನ್ನಡಿಗ ವಿಶೇಷ) ಭಾರತದಲ್ಲಿ ಸ್ಯಾಟಲೈಟ್ ಪೋನ್ ಗೆ ನಿಷೇಧವಿದೆ. ದೇಶದ ಕಾನೂನು ಗೌರವಿಸಿ ಸ್ಯಾಟ್ ಲೈಟ್ ಪೋನ್ ಉಪಯೋಗಿಸದಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಆದರೆ ಗುಪ್ತಚರ ಇಲಾಖೆಗೆ ಜಿಲ್ಲೆಯಲ್ಲಿ ಸ್ಯಾಟಲೈಟ್ ಪೋನ್ ಕರೆ ಬಗ್ಗೆ ಮಾಹಿತಿ ಸಿಗುತ್ತದೆ ಎಂದರೆ ಅದು ಗಂಭೀರ ವಿಚಾರ. ದೇಶದ ಕಾನೂನಿಗೆ ವಿರುದ್ದವಾಗಿ ಸ್ಯಾಟ್ ಲೈಟ್ ಪೋನ್ ಉಪಯೋಗಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕು.
(ಗಲ್ಫ್ ಕನ್ನಡಿಗ ವಿಶೇಷ)ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಯಾಟಲೈಟ್ ಪೋನ್ ಕರೆ ಇರುವ ಲೊಕೇಶನ್ ಪದೇ ಪದೇ ಗೋಚರಿಸುತ್ತಿರುವುದರಿಂದ ಇದನ್ನು ಹಲವುಆಯಾಮಗಳಲ್ಲಿ ಚಿಂತಿಸಬಹುದಾಗಿದೆ. ಮೊದಲನೆಯದು ಉಗ್ರ ಚಟುವಟಿಕೆಗಳನ್ನು ನಡೆಸಲು ಪೋನ್ ಬಳಸುವ ಸಾಧ್ಯತೆ ಇರುತ್ತದೆ. ನಕ್ಸಲ್ ಚಟುವಟಿಕೆ ಗಳ ಸಂವಹನಕ್ಕೆ ಬಳಸುವ ಸಾಧ್ಯತೆ ಇರುತ್ತದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಮೀಪ ಹಾದುಹೋಗುವ ಹಡಗುಗಳಲ್ಲಿ ಯಾರಾದರೂ ಸ್ಯಾಟಲೈಟ್ ಪೋನ್ ಬಳಸುವ ಸಾಧ್ಯತೆ ಇರುತ್ತದೆ. ಗಲ್ಫ್ ದೇಶಗಳಲ್ಲಿ ಸ್ಯಾಟಲೈಟ್ ಪೋನ್ ಗೆ ಮಾನ್ಯತೆ ಇರುವುದರಿಂದ ಗಲ್ಫ್ ದೇಶದಿಂದ ಬಂದವರು ಈ ಪೋನ್ ಬಳಕೆ ಮಾಡುವ ಸಾಧ್ಯತೆ ಇರುತ್ತದೆ. ಇದರಲ್ಲಿ ಯಾವುದೇ ಆಯಾಮ ಆದರೂ ಸ್ಯಾಟಲೈಟ್ ಪೋನ್ ಬಳಕೆ ನಮ್ಮ ದೇಶದಲ್ಲಿ ಕಾನೂನು ವಿರೋಧಿ ಕ್ರಮ. ಅಂತಹ ಬಳಕೆದಾರರ ವಿರುದ್ದ ಕ್ರಮ ಕೈಗೊಳ್ಳಬೇಕಾಗಿದೆ.
(ಗಲ್ಫ್ ಕನ್ನಡಿಗ ವಿಶೇಷ) ಮಾಧ್ಯಮಗಳಲ್ಲಿ ಮೂಲಗಳು ತಿಳಿಸಿದೆ ಎಂದು ಬರುತ್ತಿರುವ ಸುದ್ದಿಗಳನ್ನು ಜನರು ನಂಬುವ ಸ್ಥಿತಿಯಲ್ಲಿ ಇಲ್ಲದೆ ಇರುವುದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ರಾಜ್ಯದ ಜನತೆಗೆ ಮಾಹಿತಿ ನೀಡಬೇಕಾಗಿದೆ.
(ಗಲ್ಫ್ ಕನ್ನಡಿಗ ವಿಶೇಷ)