
ಮೇಕೆದಾಟು ಪಾದಯಾತ್ರೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ- ಸಚಿವ ಕೋಟ ಶ್ರೀನಿವಾಸ ಪೂಜಾರಿ !
Wednesday, March 2, 2022
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಕೇವಲ ರಾಜಕೀಯ ಪಾದಯಾತ್ರೆ ಆಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯ ಮಾಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "2013 ರಲ್ಲಿ ಕಾಂಗ್ರೆಸ್ ನಮ್ಮ ನಡಿಗೆ ಕೃಷ್ಣೆಯೆಡೆಗೆ ಎಂಬ ಪಾದಯಾತ್ರೆ ನಡೆಸಿತ್ತು. ಅಧಿಕಾರಕ್ಕೆ ಬಂದರೆ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಪ್ರತಿ ವರ್ಷ ಬಜೆಟ್ ನಲ್ಲಿ 10 ಸಾವಿರ ಕೊಟಿ ರುಪಾಯಿಯಂತೆ ಮೀಸಲಿಡುತ್ತೇವೆ ಎಂದಿತ್ತು, ಆದರೆ ಅಧಿಕಾರಕ್ಕೆ ಬಂದ ಮೇಲೆ ಯೋಜನೆ ಪೂರ್ತಿ ಮಾಡಲೇ ಇಲ್ಲ. ಮೇಕೆದಾಟು ಪಾದಯಾತ್ರೆಯ ಮೊದಲ ಹಂತದಲ್ಲಿ ಕಾಂಗ್ರೆಸ್ ಕೊರೊನಾ ಹಬ್ಬಿಸುವಲ್ಲಿ ಯಶಸ್ವಿಯಾಗಿದೆ. ಎರಡನೇ ಹಂತದಲ್ಲಿ ಇದೀಗ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಪಾದಯಾತ್ರೆ ಕಾರಣವಾಗಿದೆ. ಮೇಕೆದಾಟು ವಿಚಾರ ಸುಪ್ರಿಂ ಕೋರ್ಟ್ ನಲ್ಲಿ ಇದೆ. ಕಾಂಗ್ರೆಸ್ ಸದನಕ್ಕೆ ಬಂದು ಈ ಯೋಜನೆಯ ಕುರಿತಾಗಿ ಚರ್ಚೆ ನಡೆಸಲಿ. ಸದನವನ್ನು ಬಹಿಷ್ಕರಿಸಿ ಕಾಂಗ್ರೆಸ್ ಏನನ್ನೂ ಸಾಧಿಸಿಲ್ಲ" ಅಂತ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.