ಉಡುಪಿಯ MGM ನಲ್ಲಿ ಹಿಜಾಬ್, ಕೇಸರಿ ಸಂಘರ್ಷ


ಉಡುಪಿ; ಹಿಜಾಬ್ ವಿವಾದ ಉಡುಪಿಯ ಎಂಜಿಎಮ್ ಕಾಲೇಜಿನಲ್ಲಿ ಇಂದು ತೀವ್ರ ಸ್ವರೂಪ ಪಡೆದುಕೊಂಡಿತು. 

ಎಂಜಿಎಂ ಕಾಲೇಜಿನಲ್ಲಿ ನಿನ್ನೆಯಿಂದಲೇ ಗೊಂದಲ ವಾತಾವರಣ ನಿರ್ಮಾಣವಾಗಿದ್ದು, ನಿನ್ನೆ ಎರಡು ಗುಂಪಿನ ವಿದ್ಯಾರ್ಥಿಗಳನ್ನು ಕರೆಸಿ,  ಸಭೆ ನಡೆಸಿದ ಕಾಲೇಜು ಪ್ರಾಂಶುಪಾಲರು, 
ನಾಳಿನಿಂದ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಕಾಲೇಜು ಆವರಣ ಪ್ರವೇಶ ಮಾಡಕೂಡದು ಅಂತ ಸೂಚನೆ ನೀಡಿದ್ದರು. 

ಆದರೆ ಇಂದು ಬೆಳಗ್ಗಿನಿಂದ ಬುರ್ಕಾ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜ್ ಗೆ ಬಂದಿದ್ದು, ಹಿಂದೂ ವಿದ್ಯಾರ್ಥಿಗಳನ್ನು ಕೆರಳಿಸಿತು. ಆರಂಭದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾಲೇಜು ಆವರಣಕ್ಕೆ ಕೇಸರಿ ಶಾಲು ಹಾಗೂ ಪೇಟ ಧರಿಸಿ ಕಾಲೇಜ್‌ಗೆ ಆಗಮಿಸಿದ್ದು, ಈ ವೇಳೆ ಕಾಂಪೌಂಡ್ ಹೊರಗಡೆ ವಿದ್ಯಾರ್ಥಿಗಳನ್ನು ತಡೆಯಲಾಯಿತು. ಬಳಿಕ ಒಳಗಿದ್ದ ವಿದ್ಯಾರ್ಥಿಗಳು ಕೂಡ ಕೇಸರಿ ಶಾಲು ಹಾಗೂ ಆವರಣದ ಒಳಗಡೆ ಘೋಷಣೆ ಕೂಗಿದ್ದರು. 

ಈ ವೇಳೆ ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು, ಹಿಜಾಬ್ ನಮ್ಮ ಹಕ್ಕು ಅಂತ ಪ್ರತಿ ಘೋಷಣೆ ಕೂಗಿದ್ದಾರೆ.  ಈ ವೇಳೆ ಕಾಲೇಜು ಆವರಣ ಗೊಂದಲದ ಗೂಡಾಯಿತು. ಕೊನೆಗೆ ಎರಡು ಗುಂಪುಗಳನ್ನು ಆವರಣದಿಂದ ಹೊರಗೆ ಕಳುಹಿಸಿದ, ಕಾಲೇಜು ಪ್ರಾಂಶುಪಾಲರಾದ ದೇವಿದಾಸ್ ನಾಯಕ್ ಅವರು ಮುಂದಿನ ಆದೇಶ ಬರುವ ವರೆಗೂ ಕಾಲೇಜ್‌ಗೆ ರಜೆ ಘೋಷಣೆ ಮಾಡಿದ್ದರು.