ದೇಶಬಿಟ್ಟು ಭಾರತಕ್ಕೆ ಓಡಿ ಬಂದ ಬಾಂಗ್ಲಾ ಬಾಲಕಿ ಮೇಲೆ 200ಮಂದಿಯಿಂದ ಅತ್ಯಾಚಾರ
ನವದೆಹಲಿ: ಬಾಂಗ್ಲಾದೇಶ ಮೂಲದ ಬಾಲಕಿ ಮೇಲೆ ಭಾರತದಲ್ಲಿ ಮೂರು ತಿಂಗಳಲ್ಲಿ 200 ಮಂದಿ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ. ಮಾನವ ಕಳ್ಳಸಾಗಣೆ ಜಾಲದಲ್ಲಿ ಬಾಲಕಿ ಸಿಕ್ಕಿಬಿದ್ದಿದ್ದಳು. ಆಕೆ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದ ಕಾರಣ ಬೇಸರಗೊಂಡು ಯಾವುದೋ ಮಹಿಳೆಯೊಂದಿಗೆ ದೇಶಬಿಟ್ಟು ಭಾರತಕ್ಕೆ ಯಾರೊಂದಿಗೋ ನುಸುಳಿಕೊಂಡು ಓಡಿಬಂದಿದ್ದಳು.
ಯಾರೋ ಆಕೆಗೆ ಭಾರತದೊಳಗೆ ನುಸುಳಲು ಅವಕಾಶ ಮಾಡಿಕೊಟ್ಟಿದ್ದರು. ಇಲ್ಲಿ ಮಾನವ ಕಳ್ಳಸಾಗಣೆ ಜಾಲದಲ್ಲಿ ಆಕೆಯನ್ನು ತೊಡಗುವಂತೆ ಮಾಡಿದ್ದರು. ಮಹಾರಾಷ್ಟ್ರದ ಪಾಲ್ಗಢದಲ್ಲಿ ಈ ದಂಧೆಯನ್ನು ಭೇದಿಸಿದ ಪೊಲೀಸರು ಜುಲೈ 26ರಂದು ಅಪ್ರಾಪ್ತ ಬಾಲಕಿಯನ್ನು ಹಾಗೂ ಇತರೆ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಈ ದಂಧೆಗೆ ಸಂಬಂಧಿಸಿದಂತೆ ಒಟ್ಟು ಒಂಬತ್ತು ಜನರನ್ನು ಬಂಧಿಸಲಾಗಿದೆ.ಭಾರತಕ್ಕೆ ಕಳ್ಳಸಾಗಣೆ ಮಾಡಿದ ನಂತರ ಅಪ್ರಾಪ್ತ ಬಾಲಕಿಗೆ ನಿದ್ರಾಜನಕ ಪಾನೀಯಗಳು ಹಾಗೂ ಚುಚ್ಚುಮದ್ದುಗಳನ್ನು ನೀಡಿ ಪುರುಷರೊಟ್ಟಿಗೆ ಬಿಡಲಾಗುತ್ತಿತ್ತು.
ಈ ಪ್ರಕರಣದಲ್ಲಿ ಮೀರಾ-ಭಯಂದರ್ ವಸೈ-ವಿರಾರ್ (MBVV) ಪೊಲೀಸರ ಮಾನವ ಕಳ್ಳಸಾಗಣೆ ವಿರೋಧಿ ಘಟಕಕ್ಕೆ ಎನ್ಜಿಒಗಳಾದ ಎಕ್ಸೋಡಸ್ ರೋಡ್ ಇಂಡಿಯಾ ಫೌಂಡೇಶನ್ ಮತ್ತು ಹಾರ್ಮನಿ ಫೌಂಡೇಶನ್ ಸಹಾಯ ಮಾಡಿವೆ.
ರಿಮಾಂಡ್ ಹೋಂನಲ್ಲಿ, 12 ವರ್ಷದ ಬಾಲಕಿ ತನ್ನನ್ನು ಮೊದಲು ಗುಜರಾತ್ನ ನಾಡಿಯಾಡ್ಗೆ ಕರೆದೊಯ್ದು ಮೂರು ತಿಂಗಳ ಅವಧಿಯಲ್ಲಿ 200 ಕ್ಕೂ ಅಧಿಕ ಮಂದಿ ಪುರುಷರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿದ್ದಾಳೆ.
ಆಕೆ ಇನ್ನೂ ಚಿಕ್ಕವಳು, ಹದಿಹರೆಯದ ವಯಸ್ಸನ್ನು ತಲುಪಿಲ್ಲ ಆದರೆ ಈ ರಾಕ್ಷಸರು ಆಕೆಯ ಬಾಲ್ಯವನ್ನು ಕಸಿದಿದ್ದಾರೆಎಂದು ಹಾರ್ಮನಿ ಫೌಂಡೇಶನ್ನ ಸ್ಥಾಪಕ ಅಧ್ಯಕ್ಷ ಅಬ್ರಹಾಂ ಮಥಾಯ್ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಎಲ್ಲಾ 200 ಪುರುಷರನ್ನು ಬಂಧಿಸಬೇಕೆಂದು ಮಥಾಯಿ ಒತ್ತಾಯಿಸಿದ್ದಾರೆ.
ಆ ಬಾಲಕಿ ಶಾಲೆಯಲ್ಲಿ ಕೇವಲ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದಳು, ಪೋಷಕರ ಭಯದಿಂದ ಮನೆಯಿಂದ ಓಡಿ ಹೋಗಲು ನಿರ್ಧರಿಸಿದ್ದಳು. ಪರಿಚಯಸ್ಥ ಮಹಿಳೆಯೊಂದಿಗೆ ದೇಶಬಿಟ್ಟು ಕಳ್ಳದಾರಿ ಮೂಲಕ ಭಾರತ ಪ್ರವೇಶಿಸಿದ್ದಳು. ದೇಶದ ಹಲವೆಡೆ ಹೆಚ್ಚಾಗಿ ಹಳ್ಳಿಗಳಿಂದ ಶಿಶುಗಳಾಗಿದ್ದಾಗ ಕದ್ದು, ನಗರಗಳಿಗೆ ಕರೆತಂದು ಶೋಷಣೆಗೆ ಒಳಪಡಿಸಲಾಗುತ್ತದೆ. ಅವರಿಗೆ ಹಾರ್ಮೋನ್ ಚುಚ್ಚುಮದ್ದನ್ನು ಸಹ ನೀಡಲಾಗುತ್ತದೆ, ಬಳಿಕ ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. ಇದರಿಂದ ಅವರು ಬೇಗನೆ ಪ್ರೌಢಾವಸ್ಥೆಗೆ ಬರುತ್ತಾರೆ ಎಂದು ಹೇಳಿದ್ದಾರೆ.