
ಸಿಡಿಲು ಬಡಿದು ಸೆಲ್ಫಿ ತೆಗೆಯುತ್ತಿದ್ದ 11 ಮಂದಿ ಬಲಿ! (Video)
Monday, July 12, 2021
ಜೈಪುರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಉತ್ತರ ಭಾರತದಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಜೈಪುರದ ಅಮೆರ್ ಪ್ಯಾಲೆಸ್ನ ವಾಚ್ ಟವರ್ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ 11 ಮಂದಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಜೈಪುರ ಸಮೀಪದಲ್ಲಿ 12ನೇ ಶತಮಾನದ ಅಮೆರ್ ಪ್ಯಾಲೆಸ್ ವಾಚ್ ಟವರ್ ಇದೆ. ಇದರ ಮೇಲೆ ನಿಂತುಕೊಂಡು 27 ಮಂದಿ ಮಳೆಯಲ್ಲಿಯೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಭ ಏಕಾಏಕಿ ಭಾರೀ ಸಿಡಿಲು ಬಡಿದಿದೆ. ಇದರ ಪರಿಣಾಮ 11 ಮಂದಿ ಮೃತಪಟ್ಟಿದ್ದರೆ, ಇನ್ನು ಕೆಲವರು ಸಿಡಿಲಿನ ಆರ್ಭಟಕ್ಕೆ ಭಯಭೀತರಾಗಿ ವಾಚ್ ಟವರ್ ಮೇಲಿಂದ ಧುಮುಕಿ ಗಾಯಗೊಂಡಿದ್ದಾರೆ.
ಈ ಘಟನೆಯ ಬಗ್ಗೆ ಸಂತಾಪ ಸೂಚಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮೃತಪಟ್ಟವರ ಕುಟುಂಬಗಳಿಗೆ ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಸುರಿದ ಭಾರೀ ಮಳೆ ಹಾಗೂ ಸಿಡಿಲಿಗೆ 68 ಮಂದಿ ಬಲಿಯಾಗಿದ್ದಾರೆ.
ಇನ್ನು ಉತ್ತರ ಪ್ರದೇಶದ ವಿವಿಧೆಡೆಗಳಲ್ಲಿ ಸಿಡಿಲಿಗೆ 41 ಮಂದಿ ಬಲಿಯಾಗಿದ್ದರೆ, ಮಧ್ಯಪ್ರದೇಶದಲ್ಲಿ ಏಳು ಜನರು, ರಾಜಸ್ಥಾನದಲ್ಲಿ 20 ಮಂದಿ ಮೃತಪಟ್ಟಿದ್ದಾರೆ.