
ಎಂ.ಎ ಸಲೀಂ IPS ಬಗ್ಗೆ ಹಿರಿಯ ಪತ್ರಕರ್ತ ಮುಹಮ್ಮದ್ ಆರಿಫ್ ಪಡುಬಿದ್ರಿ
ಎಂ.ಎ ಸಲೀಂ IPS ಬಗ್ಗೆ ಹಿರಿಯ ಪತ್ರಕರ್ತ ಮುಹಮ್ಮದ್ ಆರಿಫ್ ಪಡುಬಿದ್ರಿ
1998ರ ಕೊನೆ ಮತ್ತು 1999ರ ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಕೋಮುಗಲಭೆ ನಡೆದಿತ್ತು. ಎಂಟು ಜನ ಸಾವನ್ನಪ್ಪಿದ್ದರು. ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಹಲವಾರು ಮನೆ, ಅಂಗಡಿಗಳನ್ನು ಧ್ವಂಸ ಮಾಡಲಾಗಿತ್ತು. ಲಕ್ಷಾಂತರ ರೂ. ನಷ್ಟವಾಗಿತ್ತು. ಇದು ಸುರತ್ಕಲ್ ಕೋಮುಗಲಭೆ.
ಕಾಲೇಜು ವಿದ್ಯಾರ್ಥಿನಿಗೆ ಚುಡಾಯಿಸಿದ, ಗುಜರಿ ವ್ಯಾಪಾರಿ ಕಳ್ಳತನ ಮಾಡಿದ ಮತ್ತು ಯಕ್ಷಗಾನದ ಬ್ಯಾನರ್ ಹರಿದ ಮೂರು ಪ್ರತ್ಯೇಕ ಘಟನೆಗಳ ನೆಪದಲ್ಲಿ ಭುಗಿಲೆದ್ದ ಗಲಭೆಯು ಚೊಕ್ಕಬೆಟ್ಟು, ಸುರತ್ಕಲ್, ಹೊಸಬೆಟ್ಟು, ಕೃಷ್ಣಾಪುರ, ಕಾಟಿಪಳ್ಳ, ಬೈಕಂಪಾಡಿ, ಮಂಗಳೂರು ನಗರ, ಬಂಟ್ವಾಳ, ಪುತ್ತೂರು ತನಕವೂ ಹರಡಿತ್ತು. ಕೆಲವು ದಿನ ನಿಷೇಧಾಜ್ಞೆ, ಕರ್ಫ್ಯೂ, ಗೋಲಿಬಾರ್ನಿಂದ ತುತ್ತು ಆಹಾರಕ್ಕೂ ಹಾಹಾಕಾರ ಸೃಷ್ಟಿಯಾಗಿತ್ತು.
ಆದರೆ, ಪಕ್ಕದ ಉಡುಪಿ ಜಿಲ್ಲೆಯಲ್ಲಿ ಒಂದು ಸಣ್ಣ ಘಟನೆಯೂ ನಡೆಯದೆ, ಜನಜೀವನ ಯಥಾಪ್ರಕಾರ ಸಹಜವಾಗಿತ್ತು. ಕುಂದಾಪುರ, ಉಡುಪಿಯಿಂದ ಬರುವ ಬಸ್ಗಳು ಪಡುಬಿದ್ರಿಯಿಂದ ಮರಳಿ ಹಿಂದೆ ಹೋಗುತ್ತಿದ್ದವು.
ನಾನು ಆಗ ಕರಾವಳಿ ಅಲೆ, ಕನ್ನಡ ಜನಾಂತರಂಗ ಪತ್ರಿಕೆಯ ಉಡುಪಿಯ ವರದಿಗಾರ. ಆಗ ಮೊಬೈಲ್, ವಾಟ್ಸ್ಆ್ಯಪ್ ಇರಲಿಲ್ಲ. ಗಾಳಿ ಸುದ್ದಿ, ವದಂತಿಗಳು ಮಾತ್ರ ಹರಡುತ್ತಿತ್ತು. ಅದು ರಮ್ಜಾನ್ ತಿಂಗಳು. ನಾವು ಉಡುಪಿ ಜಾಮಿಯಾ ಮಸೀದಿಯಲ್ಲಿ ನಮಾಝ್ಗೆ ಹೋಗಿದ್ದೆವು. ಆಗ ಯಾರೋ ಸುರತ್ಕಲ್ ಗಲಭೆ ನಡೆದು, ಇಬ್ಬರನ್ನು ಕೊಚ್ವಿ ಹಾಕಿದ್ದು, ಮಣಿಪಾಲ ಆಸ್ಪತ್ರೆಗೆ ತರಲಾಗಿದೆ ಎಂದರು. ನಾವೆಲ್ಲ ಬೈಕ್, ಸ್ಕೂಟರ್, ಕಾರುಗಳಲ್ಲಿ ಸೀದಾ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೋಗಿ ನೋಡಿದಾಗ, ಇಬ್ಬರ ಬೆನ್ನಿನಲ್ಲೂ ತಲವಾರಿನಿಂದ ಕತ್ತರಿಸಿ ಹಾಕಿದ ಗಾಯ. ಅವರು ನೋವಿನಿಂದ ಒದ್ದಾಡುತ್ತಿದ್ದರು. ರಕ್ತ ಹರಿದು ಹೋಗಿ ಬಿಳಿಯಾಗಿತ್ತು. ವೈದ್ಯರು ಇನ್ನೂ ಚಿಕಿತ್ಸೆ ಆರಂಭಿಸಿರಲಿಲ್ಲ. ನಾವು ನೋಡಿ ಮರಳಿದ್ದೆವು.
ನಾನು ಸಂಜೆ ಕೆಲಸ ಮುಗಿಸಿ, ಉಪವಾಸ ಬಿಟ್ಟು ರಾತ್ರಿ ತರಾವೀಹ್ ನಮಾಝ್ಗೆ ಪಡುಬಿದ್ರಿ ಪೇಟೆಯ ಮಸೀದಿಗೆ ಬರುತ್ತಿದ್ದೆ. ಅಲ್ಲಿ ನನ್ನ ಅಣ್ಣ, ಮಾವ, ಮಾವನ ಮಕ್ಕಳು ಸಿಗುತ್ತಿದ್ದರು. ನಮಾಝ್ ಮುಗಿದ ಬಳಿಕ ಸುಮಾರು ಒಂದೂವರೆ ಕಿಮೀ ದೂರದ ಮನೆಗೆ ನಡೆದುಕೊಂಡೇ ಹೋಗುತ್ತಿದ್ದೆವು.
ಒಂದು ದಿನ ಪಡುಬಿದ್ರಿ ಕಾರ್ಕಳ ರಸ್ತೆಯ ತಿರುವಿನಲ್ಲಿ ಕೈನೆಟಿಕ್ ಹೋಂಡಾದಲ್ಲಿ ಒಬ್ಬರು ಮುಖ ಕೆಳಗೆ ಹಾಕಿ ಕುಳಿತಿದ್ದರು. ನಾವೆಲ್ಲ ಗಮನಿಸದೆ ಮುಂದೆ ಹೋಗಿದ್ದೆವು. ಅವರು ನನ್ನನ್ನು ಗುರುತಿಸಿ, ನನ್ನ ಹೆಸರು ಕೂಗಿ ಎಂದು ಕರೆದರು. ರಾತ್ರಿ ಹೊತ್ತು ಹೋಗಲು ಭಯ. ಇನ್ನೊಮ್ಮೆ ಕರೆದಾಗ ಹೋದೆ. ನನ್ನ ಅಣ್ಣನೂ ಯಾರೆಂದು ಕೇಳಲು ಬಂದಾಗ, ಅಲ್ಲಿ ಕುಳಿತಿದ್ದದ್ದು ಆಗಿನ ಉಡುಪಿ ಎಸ್ಪಿ ಎಂ.ಎ.ಸಲೀಮ್!
ಟೀ ಶರ್ಟ್ ಹಾಕಿಕೊಂಡು ಸಾಮಾನ್ಯ ವ್ಯಕ್ತಿಯಂತೆ ಕುಳಿತಿದ್ದರು. ಜಿಲ್ಲೆಯ ಗಡಿ ಭಾಗ ಹೆಜಮಾಡಿ, ಪಡುಬಿದ್ರಿಯ ಪರಿಸ್ಥಿತಿ ಹೇಗಿದೆ ಎಂದು ವಿಚಾರಿಸಿದರು. ಇಲ್ಲಿ ಎಲ್ಲ ಶಾಂತವಾಗಿದೆ ಎಂದಾಗ, ಗಲಭೆಗೆ ಕುಮ್ಮಕ್ಕು ತರುವ ವ್ಯಕ್ತಿಗಳು ಇದ್ದಾರಾ ಎಂದು ಕೇಳಿದರು. ಇಲ್ಲಿ ಗಲಭೆ ಆಗದಂತೆ ನೋಡುವವರೇ ಹೆಚ್ಚಿದ್ದಾರೆ ಅಂದಾಗ, ಅಂಥವರು ಯಾರಪ್ಪ ಎಂದು ಪ್ರಶ್ನಿಸಿದರು. ಅದೇ ವಿಜಯ ಭವನ ಹೋಟೆಲ್ನ ಮಾಲೀಕ ವಿಜಯಣ್ಣ. ಅವರು ಇರುವ ತನಕ ಇಲ್ಲಿ ಯಾವುದೇ ಗಲಭೆ ನಡೆಯುವುದಿಲ್ಲ. ನಿನ್ನೆ ಕೆಲವರು ಬಂದ್ ಮಾಡಿಸಲು ಬಂದವರನ್ನೂ ಅವರು ಹಿಂದಕ್ಕೆ ಕಳಿಸಿದ್ದಾರಂತೆ ಎಂದಾಗ, ಹಾಗಾದರೆ ಅವರನ್ನು ಭೇಟಿಯಾಗಬೇಕು ಅಂದರು. ಮಾತು ಮುಗಿದು ನಾವು ಅಲ್ಲಿಂದ ಹೊರಟೆವು.
ಇದು ಅಂದಿನ ಎಸ್ಪಿ, ಇಂದಿನ ರಾಜ್ಯದ ಪೊಲಿಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರ ಕಾರ್ಯವೈಖರಿ ಸಣ್ಣ ಉದಾಹರಣೆ. ಪಕ್ಕದ ಜಿಲ್ಲೆ ಹೊತ್ತಿ ಉರಿಯುತ್ತಿದ್ದರೂ, ಅಲ್ಲಿಂದಲೇ ಒಂದು ವರ್ಷದ ಹಿಂದೆಯಷ್ಟೇ ವಿಭಜನೆಗೊಂಡು ಬಂದಿದ್ದ ಉಡುಪಿ ಜಿಲ್ಲೆಯಲ್ಲಿ ಸಣ್ಣ ಕಿಡಿಯೂ ಹಾರದಂತೆ ಎಚ್ಚರ ವಹಿಸಿದವರಲ್ಲಿ ಸಲೀಂ ಅವರ ಪಾತ್ರ ಮಹತ್ವದ್ದಾಗಿತ್ತು.
ಆಗಷ್ಟೇ ಉದ್ಘಾಟನೆಗೊಂಡಿದ್ದ ಉದ್ಯಾವರ ಹಲೀಮಾ ಸಾಬ್ಜು ಸಭಾಂಗಣದಲ್ಲಿ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಉಡುಪಿಯ ಮದರ್ ಆಫ್ ಸಾರೊವ್ ಚರ್ಚ್ ಧರ್ಮ ಗುರು ಫಾದರ್ ಆ್ಯಂಟನಿ ಸೆರಾವೊ, ಉದ್ಯಾವರ ಜಾಮಿಯಾ ಮಸೀದಿ ಇಮಾಮ್ ಮೌಲಾನ ಅಬ್ದುಲ್ ರಶೀದ್ ರಹ್ಮಾನಿ ಭಾಗವಹಿಸಿ, ಭಾಷಣಗಳ ಮೂಲಕ ಜಿಲ್ಲೆಯ ಸಹೋದರತ್ವ ಗಟ್ಟಿಗೊಳಿಸಿದ್ದರು.
ಅಂದಿನ ಶಾಸಕ ಯು.ಆರ್.ಸಭಾಪತಿ, ಹಲೀಮಾ ಸಾಬ್ಜು ಆಡಿಟೋರಿಯಂ ಮಾಲೀಕ ಅಬ್ದುಲ್ ಜಲೀಲ್, ಯಾಸೀನ್ ಮಲ್ಪೆ ಮೊದಲಾದವರೆಲ್ಲ ಸೇರಿ ಇಡೀ ಜಿಲ್ಲೆಗೊಂದು ಸಂದೇಶ ಕೊಟ್ಟಿದ್ದರು. ಅದರ ಹಿಂದೆಯೂ ಆಗಿನ ಡಿಸಿ, ಎಸ್ಪಿ ಕೆಲಸ ಮಾಡಿದ್ದರು.
1997ರಲ್ಲಿ ಉಡುಪಿ ಜಿಲ್ಲೆ ಉದಯವಾದಾಗ ಪ್ರಥಮ ಎಸ್ಪಿಯಾಗಿ ಬಂದವರು ಸವಿತಾ ಹಂಡೆ. ಅವರು ಕೂಡಾ ಕಾನೂನು ಸುವ್ಯವಸ್ಥೆ ಕಾಪಾಡಲು ದೊಡ್ಡ ಕೊಡುಗೆ ನೀಡಿದವರು. ಪುತ್ತೂರಿನಲ್ಲಿ ಮಿಲಿಟ್ರಿ ಅಶ್ರಫ್ನಿಂದ ಸೌಮ್ಯಾ ಕೊಲೆಯಾದಾಗ ಇಡೀ ಊರಿಗೆ ಊರೇ ಹೊತ್ತಿ ಉರಿದರೂ, ಅದರ ಕೆಲವೇ ಸಮಯದ ಅಂತರದಲ್ಲಿ ಪಡುಬಿದ್ರಿಯಲ್ಲಿ ಯಶವಂತನಿಂದ ತಾಜ್ ಬೇಗಂ ಎಂಬ ಹುಡುಗಿ ಹತ್ಯೆಯಾದಾಗ ಸಂಪೂರ್ಣ ಬಂದೋಬಸ್ತ್, ರಾತೋರಾತ್ರಿ ಪಿಎಸ್ಐ ಬದಲಾವಣೆ, ಮುಖಂಡರ ಸಭೆ ನಡೆಸಿ, ಒಂದು ಕಿಡಿಯೂ ಹೊತ್ತದಂತೆ ಕ್ರಮ ಕೈಗೊಂಡವರು ಸವಿತಾ ಹಂಡೆ. ಆಗ ಊರ ಜನರೂ ಅವರಿಗೆ ಒಳ್ಳೆಯ ಸಾಥ್ ನೀಡಿ, ಸೌಹಾರ್ದತೆಗೆ ಮಾದರಿಯಾಗಿದ್ದರು.
ಎರಡನೇ ಎಸ್ಪಿಯಾಗಿ ಬಂದವರು ದುಂಡು ಮುಖದ ಸ್ಫುರದ್ರೂಪಿ ಯುವ ಕನ್ನಡಿಗ ಐಪಿಎಸ್ ಅಧಿಕಾರಿ ಎಂ.ಎ. ಸಲೀಂ. ಬಂದ ಆರಂಭದಲ್ಲೇ ಪ್ರತಿಯೊಂದು ಪೇಟೆಯಲ್ಲೂ, ಅದರಲ್ಲೂ ದೇವಸ್ಥಾನಗಳ ಸಭಾಂಗಣಗಳಲ್ಲಿ ಪೊಲೀಸ್ ಜನಸಂಪರ್ಕ ಸಭೆ ಏರ್ಪಡಿಸಿ, ಜನಸ್ನೇಹಿ ವ್ಯವಸ್ಥೆ ಜಾರಿಗೆ ತಂದಿದ್ದರು. ಅತ್ತ ಶೀರೂರಿನಿಂದ ಇತ್ತ ಹೆಜಮಾಡಿ ತನಕ, ಕಾರ್ಕಳ, ಶಿರ್ವ, ಬೆಳ್ಮಣ್ಣು ಎಲ್ಲ ಕಡೆಯೂ ಎಸ್ಪಿಯೇ ಖುದ್ದು ಭೇಟಿ ನೀಡಿ ಸಭೆಗಳನ್ನು ಮಾಡುತ್ತಿದ್ದರು.
ಕೆಲವು ಯುವ ಪೊಲೀಸರನ್ನೊಳಗೊಂಡ ಸ್ಪೆಷಲ್ ಆ್ಯಕ್ಷನ್ ಫೋರ್ಸ್(ಎಸ್ಎಎಫ್) ಎಂಬ ತಂಡ, ಅದಕ್ಕೊಂದು ಮಿಲಿಟರಿಯಂಥ ಯೂನಿಫಾರ್ಮ್ ಮಾಡಿದ್ದರು. ಎಲ್ಲೇ ಸಣ್ಣ ಘಟನೆ ನಡೆದರೂ, ತಕ್ಷಣ ಈ ತಂಡ ಧಾವಿಸಿ ಬಂದು ರೂಟ್ ಮಾರ್ಚ್ ಮಾಡಿ, ಜನರಿಗೆ ಧೈರ್ಯ, ಸಮಾಜಘಾತಕರಿಗೆ ಎಚ್ಚರಿಕೆಯ ಸಂದೇಶ ಕೊಟ್ಟು ಹೋಗುತ್ತಿತ್ತು. ಜನ ಇದನ್ನು ಸಲೀಂ ಆ್ಯಕ್ಷನ್ ಫೋರ್ಸ್ ಎಂದೇ ಕರೆಯುತ್ತಿದ್ದರು.
ಒಂದು ದಿನ ಕಣ್ಣಂಗಾರಿನಲ್ಲಿ ಒಬ್ಬ ಯುವಕ ಬೇರೆ ಧರ್ಮದ ಯುವತಿಗೆ ಕಿರುಕುಳ ನೀಡಿದ್ದಾನೆ. ಆಕೆ ಕಿರುಚಿದ್ದಾಳೆ. ಅಲ್ಲಿದ್ದವರು ಆತನನ್ನು ಬೆನ್ನಟ್ಟಿದ್ದಾರೆ. ಆತ ಮಸೀದಿಯೊಳಗೆ ಓಡಿದ್ದಾನೆ. ಹಿಂಬಾಲಿಸಿದವರೂ ಒಳಗೆ ಓಡಿದ್ದಾರೆ. ಮಸೀದಿಯೊಳಗೆ ಹಿಂದುಗಳು ಚಪ್ಪಲಿ ಹಾಕಿ ಹೋಗಿದ್ದಾರೆ ಎಂಬ ವಿಷಯವೇ ದೊಡ್ಡದಾಗಿ ಜನ ಜಮಾಯಿಸಿದ್ದಾರೆ. ಕೆಲವೇ ಸಮಯದಲ್ಲಿ ಅಲ್ಲಿಗೆ ಎಸ್ಎಎಫ್ ಬರುತ್ತದೆ. ಅವರು ಗಾಡಿಯಿಂದ ಇಳಿಯುವ ಸ್ಟೈಲ್, ಬೂಟಿನ ಶಬ್ದ, ಗ್ಲಾಸ್ ಸ್ಟಿಕ್ ನೋಡಿದ ತಕ್ಷಣ ಒಬ್ಬರೂ ಅಲ್ಲಿರುವುದಿಲ್ಲ. ನಂತರ ಇನ್ಸ್ಪೆಕ್ಟರ್ ಬಂದು ಶಾಂತಿ ಸಭೆ ನಡೆಸುತ್ತಾರೆ.
ಒಮ್ಮೆ ನಾನು ಮತ್ತು ದಿನೇಶ್ ಕಿಣಿ ಮಣಿಪಾಲಕ್ಕೆ ಹೋಗಿ ಹಿಂದೆ ಉಡುಪಿಗೆ ಬರುವಾಗ ಮಣಿಪಾಲ ಪೋಸ್ಟ್ ಆಫಿಸ್ ಬಳಿ ಪೊಲೀಸ್ ಜೀಪ್ಗಳು ನಿಂತಿದ್ದವು. ಏನೆಂದು ಹೋಗಿ ನೋಡುವಾಗ, ಅಲ್ಲೊಂದು ಭೂಮಿಪೂಜೆ ನಡೆಯುತ್ತಿತ್ತು. ಮೈ ಬಿಟ್ಟು ರೇಷ್ಮೆ ಕಚ್ಚೆ, ಶಲ್ಯ ಉಟ್ಟುಕೊಂಡು ಪೂಜೆಗೆ ಕೂತಿದ್ದವರು ಎಸ್ಪಿ ಎಂ.ಎ.ಸಲೀಂ.
ಏನೆಂದು ಕೇಳಿದರೆ, ಇಲ್ಲಿ ಇನ್ನು ಮಣಿಪಾಲ ಪೊಲೀಸ್ ಠಾಣೆ ನಿರ್ಮಾಣವಾಗಲಿದೆ ಎಂದರು. ಇಷ್ಟು ದೊಡ್ಡ ಮಣಿಪಾಲಕ್ಕೆ ಆ ಠಾಣೆ(ಟೈಗರ್ ಸರ್ಕಲ್ನ ವಾಣಿಜ್ಯ ಸಂಕೀರ್ಣದ ಮೇಲಿದ್ದ) ಶೋಭೆಯಾ? ಅದು .... ನಂತಿದೆ ಅಂದರು. ಇಂಗ್ಲಿಷ್ನ ಆ ಡ್ಯಾಶ್ ಶಬ್ದದ ಅರ್ಥ ನನಗೆ ಗೊತ್ತಾಗಲಿಲ್ಲ. ಮತ್ತೆ ದಿನೇಶ್ ನನಗೆ ಅದರ ಅರ್ಥ ಹೇಳಿದರು.
ಉಡುಪಿ ಬನ್ನಂಜೆಯಲ್ಲಿ ಹೊಸ ಎಸ್ಪಿ ಕಚೇರಿ ನಿರ್ಮಾಣವಾಗಿತ್ತು. ಅದರ ಪಕ್ಕದ ಕಟ್ಟಡವನ್ನು ಡಿಎಆರ್ ಪೊಲೀಸ್ ಸಿಬ್ಬಂದಿ ಮೂಲಕ ಸ್ವತಃ ಎಸ್ಪಿ ಸಲೀಂ ನಿಂತು ಕಟ್ಟಿಸಿದ್ದರು. ಉಡುಪಿಯ ಚಂದು ಮೈದಾನವನ್ನು ಪೊಲೀಸ್ ಮೈದಾನವನ್ನಾಗಿ ಇಲಾಖೆಯ ಸುಪರ್ದಿಗೆ ಪಡೆದವರೂ ಸಲೀಂ. ಹಲವು ಠಾಣೆಗಳ ಅಭಿವೃದ್ಧಿಗೆ ರೂಪರೇಷೆ ಸಿದ್ಧಪಡಿಸಿದ್ದರು.
ಮಣಿಪಾಲದಲ್ಲಿ ಪ್ರಸನ್ನ ವಿ.ರಾಜು, ಶಿರ್ವದಲ್ಲಿ ರಾಜಾ ಇಮಾಮ್ ಕಾಸಿಂ, ಮಲ್ಪೆಯಲ್ಲಿ ದಿನೇಶ್ ಕುಮಾರ್ ಮೊದಲಾದ ಯುವ, ದಕ್ಷ ಎಸ್ಐ ಹಾಗೂ ಸಿಬ್ಬಂದಿಗಳನ್ನಿಟ್ಟು ಅವರ ಜತೆ ನೇರ ಸಂಪರ್ಕದಲ್ಲಿದ್ದರು. ಕಾನೂನು ಸುವ್ಯವಸ್ಥೆ ಜತೆಗೆ ಸಂಚಾರದ ವಿಷಯದಲ್ಲೂ ಪೊಲೀಸ್ ಸಿಬ್ಬಂದಿಗೆ ಸದಾ ಮಾರ್ಗದರ್ಶನ ನೀಡುತ್ತಿದ್ದರು. ಆಗ ಉಡುಪಿ- ಮಂಗಳೂರು ಮಧ್ಯೆ ಹೊಂಡ ಗುಂಡಿಗಳ ದ್ವಿಪಥ ರಸ್ತೆ.
ಯಾವಾಗಲೂ ಖಾಸಗಿ ಬಸ್ಗಳ ಅಪಘಾತ. ಸಾವು ನೋವು. ಬಸ್ಗಳಲ್ಲಿ ಕರ್ಕಶ ಹಾರ್ನ್, ಟೇಪ್ ರೆಕಾರ್ಡರ್ ಹಾವಳಿ. ಈ ಸಂದರ್ಭದಲ್ಲಿ ಎಸ್ಪಿ ಸಲೀಂ ಮಫ್ತಿಯಲ್ಲಿ ಬಸ್ಗಳಲ್ಲಿ ಸಂಚರಿಸಿ, ಬಂದು ನಂತರ ಕೇಸು ದಾಖಲಿಸಲು ಹೇಳುತ್ತಿದ್ದರು.
ಅಂಡರ್ ವರ್ಲ್ಡ್ ದೊರೆ ಸಾಧು ಶೆಟ್ಟಿ ಊರಿಗೆ ಬಂದು ಪಣಿಯೂರಿನಲ್ಲಿ ಏಳು ಸುತ್ತಿನ ಕೋಟೆ ನಿರ್ಮಿಸಿ, ಅದರಲ್ಲಿ ರಾಜಿ ಪಂಚಾತಿಗೆ ನಡೆಸುವ ಬಗ್ಗೆ ಎಸ್ಪಿ ಸಲೀಂ ಮಾಹಿತಿ ಪಡೆದಿದ್ದರು. ಒಂದು ದಿನ ಸಾಧು ಶೆಟ್ಟಿಯನ್ನು ಕರೆಸಿ, ವಿಚಾರಿಸಿದ್ದರು. ಎಲ್ಲ ಧಂದೆ ಇಂದೇ ನಿಲ್ಲಿಸಬೇಕು ಎಂದು ತಾಕೀತು ಮಾಡಿದ್ದರು. ತಾನು ಮುಂದೆ ಇಂಥ ಯಾವುದೇ ಚಟುವಟಿಕೆಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದು, ಅದನ್ನು ಆ ಕಾಲದ ಪುಟ್ಟ ಟೇಪ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು.
ತನ್ನ ಕೈ ಕೆಳಗಿನ ಪೊಲೀಸರ ಜತೆ ಉತ್ತಮ ಸಂಪರ್ಕ, ಬಾಂಧವ್ಯ ಇಟ್ಟುಕೊಂಡಿದ್ದರು. ತಪ್ಪು ಮಾಡಿದವರ ಜತೆ ಅಷ್ಟೇ ಕಠೋರವಾಗಿದ್ದರು. ಪಡುಬಿದ್ರಿಯ ಎಎಸ್ಐ ಒಬ್ಬರನ್ನು ನೀರಿಲ್ಲದ ಕಡೆಗೆ ಕಳುಹಿಸುತ್ತೇನೆ ಎಂದು ಗದರಿಸುತ್ತಿದ್ದರು.
ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅವರ ಸಮಸ್ಯೆಗಳನ್ನು ಕೇಳಲು ಪ್ರತ್ಯೇಕ ಫೋನ್ ನಂಬರ್ ಕೊಟ್ಟಿದ್ದರು. ಕೆಲವು ಸಮಸ್ಯೆಗಳ ಪರಿಹಾರಕ್ಕಾಗಿ ಕೌನ್ಸಿಲಿಂಗ್ ವ್ಯವಸ್ಥೆಯನ್ನೂ ಮಾಡಿದ್ದರು. ಸ್ಪಂದನಾ, ಆಶಾ, ಹೌಸ್ ಬೀಟ್, ಮನೆಗಳಲ್ಲಿ ಚಾಕ್ ಪೀಸ್ ಗುರುತು ಅವರ ಕಾರ್ಯಕ್ರಮಗಳಾಗಿದ್ದವು.
ನಾನು 1999ರ ಡಿಸೆಂಬರ್ನಲ್ಲಿ ಉಡುಪಿ ಬಿಟ್ಟು, ಬೆಂಗಳೂರಿಗೆ ಹೋಗಿದ್ದೆ. ನಂತರ ಉಡುಪಿಗೆ ಬಂದಾಗ, 1-2 ಬಾರಿ ಸಿಕ್ಕಿದ್ದರು.
1993ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಡಾ.ಎಂ.ಎ. ಸಲೀಂ, ಕುಶಾಲನಗರ, ಸಾಗರ ಎಎಸ್ಪಿ, ಮೈಸೂರು ಡಿಸಿಪಿ ಬಳಿಕ ಉಡುಪಿಗೆ ಬಂದು, ಇಲ್ಲಿಂದ ವರ್ಗಾವಣೆಗೊಂಡು, ಹಾಸನ, ಅಲ್ಲಿಂದ ಪೂರ್ವ ವಲಯ ಐಜಿಪಿ, ಮೈಸೂರು ಕಮೀಷನರ್, ಬೆಂಗಳೂರು ಸ್ಪೆಷಲ್ ಕಮೀಷನರ್, ಎಸಿಬಿ ಮುಖ್ಯಸ್ಥ, ಸಿಐಡಿ ಡಿಜಿಪಿ, ಆರು ಎಸ್ಐಟಿಗಳ ಮುಖ್ಯಸ್ಥ, ಹಲವು ಆಡಳಿತ ಸೇವೆ ಸಹಿತ 26ಕ್ಕೂ ಹೆಚ್ಚು ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಇದೀಗ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕರಾಗಿ ನಿಯುಕ್ತಿಗೊಂಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ.
ಕೃಪೆ: ಆರಿಫ್ ಪಡುಬಿದ್ರಿ ಅವರ ಅಧಿಕೃತ ಫೇಸ್ಬುಕ್