![ನುಡಿ ಪ್ರಚಾರಕರ ಗೌರವ ಸಮ್ಮಾನ ನುಡಿ ಪ್ರಚಾರಕರ ಗೌರವ ಸಮ್ಮಾನ](https://blogger.googleusercontent.com/img/b/R29vZ2xl/AVvXsEib19NewxMbt5mXpGp5jEGlTX1Dk5jkgZWywUVmJ0_bUj6XbaFfybHBN7GCnyTWh0zoaNtKCT0dq2AqbUgjeqZ__8MPbIf-bYw8GO1JW2xHgwA2FiFoCKkBxVX11wzBC-565SAhLqfVcxziWyoBYGU8cTZ4wpStsn0evkDrLoJMbMMYnx9rJ57wB8YUaQ/w400-h180/Polish_20221115_174651403.jpg)
ನುಡಿ ಪ್ರಚಾರಕರ ಗೌರವ ಸಮ್ಮಾನ
ಮೂಡುಬಿದಿರೆ: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ, ಕನ್ನಡ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ ಮನೆಯಂಗಳಲ್ಲಿ ರಾಜ್ಯೋತ್ಸವ ಮತ್ತು ಎಲೆಮರೆ ಕಾಯಿಯಂತಿರುವ ನುಡಿ ಪ್ರಚಾರಕರ ಗೌರವ ಸಮ್ಮಾನ ಮೂಡುಬಿದಿರೆ ಪ್ರಾಂತ್ಯದ ಸಾಹಿತಿ ಕೆ ಬಾಲಕೃಷ್ಣ ನಾಯಕ್ರವರ ಮನೆಯಲ್ಲಿ ಜರುಗಿತು.
ಕ.ಸಾ.ಪ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಕರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕ.ಸಾ.ಪ ಮೂಡುಬಿದಿರೆ ತಾಲೂಕು ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಮಕೃಷ್ಣ ಶಿರೂರು ನುಡಿಗೌರವ ಸಲ್ಲಿಸುತ್ತಾ ಮಾತನಾಡಿ, ಕೆ ಬಾಲಕೃಷ್ಣ ನಾಯಕ್ರು ತಮ್ಮ ಅಶಕ್ತತೆಯ ನಡುವೆಯು ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಪರೋಪಕಾರವನ್ನೆ ತನ್ನ ಉಸಿರನ್ನಾಗಿಸಿಕೊಂಡಂತಹ ನಾಯಕರು, ಅಶಕ್ತರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನವನ್ನು ದೊರಕಿಸಿಕೊಡುವ ಕೆಲಸವನ್ನು ಸದಾ ಮಾಡುತ್ತಿದ್ದರು. ತಾನು ನಾಲ್ಕನೇ ತರಗತಿಯಲ್ಲಿರುವಾಗಲೆ ತುಳುನಾಟಕ ರಚಿಸಿ ಸೈ ಎನಿಸಿಕೊಂಡಿದ್ದರು. ಯಕ್ಷಗಾನ ಕ್ಷೇತ್ರದ ಜೊತೆಗೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು ಎಂದರು.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಕೆ ಬಾಲಕೃಷ್ಣ ನಾಯಕ್, ತನ್ನೆಲ್ಲಾ ಸಾಧನೆಗೆ ಮಾಜಿ ಸಚಿವ ಅಮರನಾಥ ಶೆಟ್ಟಿ ಹಾಗೂ ತನ್ನ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿಲಾಸಿನಿಯವರ ಪೂರಕ ಸಹಕಾರ ಸದಾ ಸ್ಮರಿಸುವಂತದ್ದು. ನಾವು ಒಳ್ಳೆಯದನ್ನು ಮಾಡಿದರೆ ನಮಗೆ ಒಳ್ಳೆದು ಆಗುತ್ತದೆ ಎಂದರು. ಕರ್ಯಕಾರಿ ಸಮಿತಿಯ ಸದಸ್ಯರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.