
ರಸ್ತೆ ದಾಟುತ್ತಿದ್ದ ಬಾಲಕನಿಗೆ ಅಪಘಾತಗೊಂಡು ದೇಹ ಛಿದ್ರಛಿದ್ರ: ಉದ್ರಿಕ್ತರಿಂದ ಟಿಪ್ಪರ್ ಗೆ ಬೆಂಕಿ
ಕಲಬುರಗಿ: ರಸ್ತೆ ದಾಟುತ್ತಿದ್ದ ಬಾಲಕನ ಮೇಲೆ ವೇಗವಾಗಿ ಬಂದ ಟಿಪ್ಪರೊಂದು ಆತನಿಗೆ ಹೊಡೆದ ಪರಿಣಾನ ದೇಹವು ರಸ್ತೆಯಲ್ಲೇ ಛಿದ್ರಗೊಂಡ ಘಟನೆ ಕಲಬುರಗಿ ನಗರದ ಹೀರಾಪುರ ಬಡಾವಣೆಯ ಫ್ಲೈಓವರ್ ಬಳಿ ಸಂಭವಿಸಿದೆ. ಘಟನೆಯಿಂದ ಉದ್ರಿಕ್ತರಾದ ಜನರು ಗುಂಪು ಟಿಪ್ಪರ್ಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದೆ.
ಮನೀಷ್ ಮಲ್ಲಿಕಾರ್ಜುನ (10) ಸಾವಿಗೀಡಾದ ಬಾಲಕ. ಬಾಲಕ ಮನೀಷ್ ಮಲ್ಲಿಕಾರ್ಜುನ ಪಾಲಕರೊಂದಿಗೆ ರಸ್ತೆ ದಾಟುತ್ತಿದ್ದ ಸಂದರ್ಭ ಮುಂದೆ ಓಡಿದ್ದಾನೆ. ಅದೇ ಸಮಯಕ್ಕೆ ಮೇಲ್ಸೇತುವೆಯಿಂದ ವೇಗವಾಗಿ ಬರುತ್ತಿದ್ದು ಟಿಪ್ಪರೊಂದು ಆತನಿಗೆ ಡಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬಾಲಕನ ದೇಹ ಛಿದ್ರಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಾಲಕ ಸಾವಿನಿಂದ ರೊಚ್ಚಿಗೆದ್ದ ಜನರು ಟಿಪ್ಪರ್ಗೆ ಬೆಂಕಿ ಇಟ್ಟಿದ್ದು, ಅದು ಹೊತ್ತಿ ಉರಿದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿತ್ತು.