ಕುವೈಟಿನಲ್ಲಿ ಭಾರತೀಯ ಕಾರ್ಮಿಕರ ಪ್ರತಿಭಟನೆ |
ಪ್ರಕಟಿಸಿದ ದಿನಾಂಕ : 2007-12-14
ಕುವೈಟ್, ಡಿಸೆಂಬರ್ ೧೪: ಸುಮಾರು ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾರತೀಯ ಕಾರ್ಮಿಕರು ಬುಧವಾರದಂದು ಭಾರತೀಯ ದೂತಾವಸದೆದುರು ಪ್ರತಿಭಟನೆ ನಡೆಸಿದರು. ಎರೆಡು ತಿಂಗಳ ಹಿಂದೆ ವೇತನ ನೀಡದೇ ಇರುವ, ಕಾನೂನು ಮುರಿದಿರುವ ಮತ್ತು ಇತರ ಆಪಾದನೆಗಳನ್ನು ಹೊರಿಸಿ ಕಾರ್ಮಿಕರ ನಿಯೋಗವು ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ವಿರುದ್ಧ ದೂರು ನೀಡಿದ್ದರು. ಈ ದೂರಿನಿಂದ ಉದ್ರಿಕ್ತಗೊಂಡ ಸಂಸ್ಥೆಯ ಅಧಿಕಾರಿಗಳು ಪೋಲೀಸರಿಗೆ ದೂರು ನೀಡಿ ಕಾರ್ಮಿಕರನ್ನು ಬಂಧಿಸಲು ಆಜ್ಞೆ ನೀಡಿದ್ದರು. ಆ ಪ್ರಕಾರ ಮಂಗಳವಾರ ನಾಲ್ವರು ಪೋಲಿಸರು ಕಾರ್ಮಿಕರ ವಸತಿಸ್ಥಳದ ಮೇಲೆ ಧಾಳಿನಡೆಸಿ ಮನಬಂದಂತೆ ಕಾರ್ಮಿಕರನ್ನು ಥಳಿಸಿ ೨೯ ಭಾರತೀಯರನ್ನು ಬಂಧಿಸಿದ್ದಾರೆ. ಸೇಡು ತೀರಿಸಿಕೊಳ್ಳುವ ಸಂಸ್ಥೆಯ ಈ ಮನೋಭಾವದಿಂದ ನಡೆದ ಈ ಧಾಳಿಯ ವಿರುದ್ಧ ಕಾರ್ಮಿಕರ ನಿಯೋಗವು ಭಾರತೀಯ ದೂತಾವಾಸದ ಎದುರು ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂತಾವಾಸವನ್ನು ಒತ್ತಾಯಿಸಿದ್ದಾರೆ. ಇವರ ದೂರನ್ನು ಆಲಿಸಿದ ದೂತಾವಾಸದ ಅಧಿಕಾರಿಗಳು ಸಂಸ್ಥೆಯ ವಿರುದ್ಧ ಕಾರ್ಮಿಕ ಸಚಿವಾಲಯದಲ್ಲಿ ದೂರು ಸಲ್ಲಿಸಿದೆ.
ಹಲವರಿಗೆ ಒಂದು ವರ್ಷದಿಂದ ವೇತನ ನೀಡದೇ ಇರುವುದು, ಉತ್ತಮ ವಸತಿ ಸೌಲಭ್ಯ ಒದಗಿಸದೇ ಇರುವುದು, ಸೂಕ್ತ ವಸತಿ ಒದಗಿಸದೇ ಇದ್ದುದರಿಂದ ದುಬಾರಿ ಬಾಡಿಗೆ ಕೊಟ್ಟು ಮನೆಯೊಂದನ್ನು ಬಾಡಿಗೆಗೆ ಕೊಳ್ಳಬೇಕಾಗಿರುವುದು ಮೊದಲಾದ ಹಲವಾರು ಆರೋಪಗಳಿವೆ.
ಈ ಕಾರ್ಮಿಕರಲ್ಲಿ ಹಲವರು ಅವಧಿ ಮುಗಿದ ರೆಸಿಡೆನ್ಸಿ ಪರ್ಮಿಟ್ ಪತ್ರಗಳನ್ನು ಹೊಂದಿರುವರೆಂದೂ, ಹಲವರು ಸಂಸ್ಥೆಗೆ ಸುಳಿವು ನೀಡದೇ ಓಡಿಹೋಗಿದ್ದಾರೆಂದೂ ಬಂಧನಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕಾರ್ಮಿಕರ ಪರ ವಾದಿಸುತ್ತಿರುವ ವಕೀಲರಾದ ನಾಸರ್ ಬದರ್ ಅಲ್ ಮುಥೈರಿಯವರು ತಿಳಿಸಿದ್ದಾರೆ.
ಕಾರ್ಮಿಕರಿಗೆ ಸಂಬಳ ನೀಡದೇ ಇರುವ ದೂರನ್ನು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಲಾಗಿದೆಯೆಂದೂ ಅದರ ವಿಚಾರಣೆ ಡಿಸೆಂಬರ್ ೨೪ರಂದು ದಿನಾಂಕ ನಗದಿಗೊಳಿಸಲಾಗಿದೆಯೆಂದೂ ಅವರು ತಿಳಿಸಿದ್ದಾರೆ. ಅಂತೆಯೇ ಭಾರತೀಯ ದೂತಾವಾಸವೂ ಸಂಸ್ಥೆಯ ಅಧಿಕಾರಿಗಳ ಮತ್ತು ಕಾರ್ಮಿಕ ನಿಯೋಗದೊಂದಿಗೆ ಮುಖಾಮುಖಿ ಭೇಟಿ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲು ಪ್ರಯತ್ನ ನಡೆಸುತ್ತಿದೆ ಎಂದು ದೂತಾವಾಸದ ಅಧಿಕಾರಿಯಾಗಿರುವ ವಿ.ಕೆ. ಮಹಾಜನ್ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕುವೈಟ್ ಟೈಮ್ಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-14
|
|
|