ತುಳು ಕೂಟ ಕತರ್ ಸದಸ್ಯರಿಂದ ದಾಖಲೆ ರಕ್ತದಾನ |
ಪ್ರಕಟಿಸಿದ ದಿನಾಂಕ : 2008-06-13
ಹಮದ್ ಮೆಡಿಕಲ್ ಕಾರ್ಪೋರೇಶನ್ ನಲ್ಲಿ ಸಂಭ್ರಮದ ವಾತಾವರಣ : ಜೀವ ಉಳಿಸುವ ನಿಟ್ಟಿನಲ್ಲಿ ಹೆಚ್ಚಿನ ಉತ್ಸಾಹ
ದೋಹಾ, ಜೂನ್ ೧೩: ಇಂದು ಬೆಳಿಗ್ಗೆ ದೋಹಾ ಹಮದ್ ಮೆಡಿಕಲ್ ಕಾರ್ಪೋರೇಶನ್ ಬ್ಲಡ್ ಬ್ಯಾಂಕ್ ಯೂನಿಟ್ ನಲ್ಲಿ ತುಳು ಕೂಟ ಕತರ್ ಆಯೋಜಿಸಿದ್ದ ರಕ್ತದಾನ ಶಿಬಿರ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ರಕ್ತದಾನ ಮಾಡಲು ನೀಡಿದ್ದ ಕರೆಯನ್ನು ಮನ್ನಿಸಿ ದಾಖಲೆ ಸಂಖ್ಯೆಯಲ್ಲಿ ಸದಸ್ಯರು ಹಾಗೂ ಹಿತೈಷಿಗಳು ಆಗಮಿಸಿ ಅಮೂಲ್ಯವಾದ ರಕ್ತವನ್ನು ದಾನ ನೀಡಿದರು. ಹೆಚ್. ಎಮ್. ಸಿ ಇತಿಹಾಸದಲ್ಲಿಯೇ ಇದು ದಾಖಲೆ ಸಂಖ್ಯೆಯ ರಕ್ತದಾನವಾಗಿದ್ದು ಪ್ರಥಮ ನಾಲ್ಕು ಘಂಟೆಗಳಲ್ಲಿ ನಲವತ್ತೈದು ಸದಸ್ಯರು ರಕ್ತದಾನ ನೀಡಿದ್ದು ಮತ್ತೊಂದು ದಾಖಲೆಯಾಗಿದೆ. ಒಟ್ಟು ನೂರಾಮೂವತ್ತೈದು ಜನರು ರಕ್ತದಾನ ನೀಡಲು ಶಕ್ತರಾದರು. ಸುಮಾರು ನಲವತ್ತೈದು ಸದಸ್ಯರನ್ನು ಇತರ ಕಾರಣಗಳಿಗಾಗಿ ರಕ್ತ ಪಡೆಯಲು ನಿರಾಕರಿಸಲಾಯಿತು. ಈ ಅಭಿಯಾನದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ಅರಬ್ ಮೂಲದ ವ್ಯಕ್ತಿಗಳೂ ಇವರಲ್ಲಿ ಸೇರಿದ್ದು ವಿಶಿಷ್ಟವಾಗಿತ್ತು.
ನಿಕಟಪೂರ್ವ ಐಸಿಸಿ ಅಧ್ಯಕ್ಷ ಹಾಗೂ ರಕ್ತದಾನಿ ಎಮ್.ಐ. ಫರೀದ್, ನಿಕಟಪೂರ್ವ ತುಳುಕೂಟ ಅಧ್ಯಕ್ಷ ವಾಮನ್ ಮಲ್ರೋಯ್, ಶ್ರೀ ಪ್ರಕಾಶ್ ಅಜಿಲ ಹಾಗೂ ದಿವಾಕರ ಪೂಜಾರಿ ಮೊದಲಾದ ಗಣ್ಯರು ಅಭಿಯಾನದಲ್ಲಿ ಉಪಸ್ಥಿತರಿದ್ದರು.
ಅಭಿಯಾನದ ಉದ್ಘಾಟನೆಯನ್ನು ಅಧ್ಯಕ್ಷರಾದ ರವಿಶೆಟ್ಟಿಯವರು ಸ್ವಾಗತಿಸಿದರು. ಡಾ. ವಿಶ್ವನಾಥ್ ಹೆಚ್.ಕೆ.ಶೆಟ್ಟಿಯವರು ರಕ್ತದಾನದ ಅಮೂಲ್ಯತೆಯ ಬಗ್ಗೆ ವಿವರ ನೀಡಿದರು. ಸಹಕಾರ್ಯದರ್ಶಿ ವಿವಿಯನ್ ಡಿಸೋಜಾರವರು ವಂದನಾರ್ಪಣೆ ಸಲ್ಲಿಸಿದರು.
ಟ್ಯಾಕ್ಸಿಯಲ್ಲಿ ಪ್ರಯಾಣಿಕರೊಬ್ಬರು ಮರೆತಿದ್ದ ಹಣವನ್ನು ಹಿಂತಿರುಗಿಸಿ ಮಾನವತೆಯನ್ನು ಮೆರೆದ ಭಾಲಕೃಷ್ಣ ಶೆಟ್ಟಿಯವರನ್ನು ಸಭೆಗೆ ಪರಿಚಯಿಸಿ ಅವರ ಪ್ರಾಮಾಣಿಕತೆಯನ್ನು ಪ್ರಶಂಸಿಸಲಾಯಿತು. ಬಾಲಕೃಷ್ಣರವರು ಮಂಗಳೂರಿನ ತೊಕ್ಕೊಟ್ಟಿನವರಾಗಿದ್ದಾರೆ.
ಹೆಚ್.ಎಮ್.ಸಿ ಸುಪರ್ ವೈಸರ್ ಶ್ರೀಮತಿ ಸಾದಿಕಾ ಇಸ್ಮಾಯಿಲ್ ಅವರು ತುಳು ಕೂಟ ಕತರ್ ಸದಸ್ಯರಿಗೆ ಹಾಗೂ ಸಮಿತಿವೃಂದದವರಿಗೆ ಧನ್ಯವಾದ ಅರ್ಪಿಸಿದರು. ಇಂದಿನ ರಕ್ತಸಂಗ್ರಹ ಹೊಸ ದಾಖಲೆಯಾಗಿದ್ದು ರೋಗಿಗಳ ಪ್ರಾಣಗಳನ್ನು ಉಳಿಸಲು ಈ ರಕ್ತ ಕಾರಣವಾಗಲಿದೆ, ಈ ಕಾರ್ಯಕ್ಕೆ ಸಹಕರಿಸಿದ ಶ್ರೀ ಇಕ್ಬಾಲ್ ಮನ್ನಾ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.
ಇಂದು ವಿಶ್ವ ರಕ್ತದಾನ ದಿನಾಚರಣೆ ವಿಶ್ವದಾದ್ಯಂತ ನಡೆಯುತ್ತಿದ್ದು ನಾಳೆ ಈ ಬಗ್ಗೆ ಹಲವು ಕಾರ್ಯಕ್ರಮಗಳನ್ನು ನಗರದ ಪ್ರಮುಖ ಮಳಿಗೆಗಳಲ್ಲಿ ಹೆಚ್.ಎಮ್.ಸಿ. ಹಮ್ಮಿಕೊಂಡಿದೆ.
ವರದಿಯ ವಿವರಗಳು |
 |
ಕೃಪೆ : ಇಕ್ಬಾಲ್ ಮನ್ನಾ, ಕತರ್ | ಕನ್ನಡ ಅನುವಾದ: ಅರ್ಶದ್.ಎಮ್.ಎಚ್ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-13
|
|
|