ನ್ಯೂಜೆರ್ಸಿಯಲ್ಲಿ ‘ರಾಜ್ಕುಮಾರ್ ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್’ ಕೃತಿ ಬಿಡುಗಡೆ |
ಪ್ರಕಟಿಸಿದ ದಿನಾಂಕ : 2008-06-11
ನ್ಯೂಜೆರ್ಸಿ: ಲೇಖಕ ಅ.ನಾ. ಪ್ರಹ್ಲಾದರಾವ್ ಅವರು ಡಾ. ರಾಜ್ಕುಮಾರ್ ಜೀವನ ಸಾಧನೆ ಕುರಿತು ಬರೆದಿರುವ ಬಂಗಾರದ ಮನುಷ್ಯ ಆಂಗ್ಲ ಅನುವಾದಿತ ‘‘Dr. RajKumar: The inimitable Actor with Golden Voice’’ ” ಕೃತಿಯನ್ನು ಅಮೇರಿಕದ ನ್ಯೂಜೆರ್ಸಿ ನಗರದಲ್ಲಿರುವ ಬೃಂದಾವನ ಕನ್ನಡಕೂಟ ಲೋಕಾರ್ಪಣೆಗೊಳಿಸಿತು.
ಇದು ಡಾ. ರಾಜ್ಕುಮಾರ್ ಅವರ ಜೀವನ ಸಾಧನೆಯ ಮೊಟ್ಟ ಮೊದಲ ಇಂಗ್ಲೀಷ್ ಭಾಷೆಯ ಪುಸ್ತಕ ಮಾತ್ರವಲ್ಲದೆ, ವಿದೇಶದಲ್ಲಿ ಬಿಡುಗಡೆಗೊಂಡ ಕನ್ನಡ ನಟರೊಬ್ಬರನ್ನು ಕುರಿತ ಮೊದಲ ಪುಸ್ತಕವೂ ಆಗಿದೆ. ಯುಗಾದಿ ಹಬ್ಬದ ಸಲುವಾಗಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಈಶಾನ್ಯ ಕನ್ನಡ ಕೂಟಗಳ ನಾಟಕೋತ್ಸವ ಕಾರ್ಯಕ್ರಮದಲ್ಲಿ ಈ ಪುಸ್ತಕ ಲೋಕಾರ್ಪಣೆಗೊಂಡಿತು.
ನ್ಯೂಜೆರ್ಸಿ ನಗರದ ಫ್ರಾಂಕ್ಲಿನ್ ಪಾರ್ಕ್ ಪ್ರದೇಶದ ಸಿಕ್ಸ್ ಮೈಲ್ ಚರ್ಚ್ ಸಭಾಂಗಣದಲ್ಲಿ ಸೇರಿದ್ದ ಸುಮಾರು ೮೦೦ಕ್ಕೂ ಹೆಚ್ಚು ಕನ್ನಡಿಗರ ಸಮ್ಮುಖದಲ್ಲಿ ನಡೆದ ಸುಂದರ, ವರ್ಣರಂಜಿತ ಸಮಾರಂಭದಲ್ಲಿ ಐದು ನಗರಗಳ ಕನ್ನಡ ಕೂಟಗಳ ಪ್ರತಿನಿಧಿಗಳು ಈ ಪುಸ್ತಕವನ್ನು ಲೋಕಾರ್ಪಣೆಗೊಳಿಸುವ ಮೂಲಕ ಒಂದು ವಿನೂತನ ದಾಖಲೆ ಸ್ಥಾಪಿಸಿದರು. ನ್ಯೂಯಾರ್ಕ್ ಕನ್ನಡ ಕೂಟ, ಪೆನ್ಸಿನ್ವೇನಿಯಾ ನಗರದ ತ್ರಿವೇಣಿ ಕನ್ನಡ ಕೂಟ, ಕನೆಟಿಕಿಟ್ ಹೊಯ್ಸಳ ಕನ್ನಡ ಕೂಟ, ವಾಷಿಂಗ್ಟನ್ ಡಿಸಿ ನಗರದ ಕಾವೇರಿ ಕನ್ನಡ ಕೂಟ, ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಹಾಗೂ ನ್ಯೂಜೆರ್ಸಿ ನಗರದ ಬೃಂದಾವನ ಕನ್ನಡಕೂಟಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವಲ್ಲದೆ ಲೇಖಕ ಅ.ನಾ. ಪ್ರಹ್ಲಾದರಾವ್ ಹಾಗೂ ಶ್ರೀಮತಿ ಮಲ್ಲಿಕಾ ಪ್ರಹ್ಲಾದ್ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮದ ಮೊದಲಿಗೆ ಬೃಂದಾವನದ ಅಧ್ಯಕ್ಷೆ ಹಾಗೂ ಗಾಯಕಿ ಶ್ರೀಮತಿ ವಸಂತ ಶಶಿ ಅವರು ತೆರೆದಿದೆ ಮನೆ ಓ ಬಾ ಅತಿಥಿ ಹಾಡಿನ ಮೂಲಕ ಸರ್ವಧಾರಿ ಸಂವತ್ಸರವನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿದ್ದ ಲೇಳಕ ಅ.ನಾ. ಪ್ರಹ್ಲಾದರಾವ್ ಹಾಗೂ ಶ್ರೀಮತಿ ಮಲ್ಲಿಕಾ ಪ್ರಹ್ಲಾದ್ ಮತ್ತು ಎಲ್ಲ ಕನ್ನಡಕೂಟಗಳ ಪ್ರತಿನಿಧಿಗಳು ದೀಪ ಬೆಳಗುವುದರ ಮೂಲಕ ನಾಟಕೋತ್ಸವದ ಅಗರಕ್ಕೆ ಚಾಲನೆ ನೀಡಿದರು. ಡಾ. ರಾಜ್ಕುಮಾರ್ ಜೀವನ ಸಾಧನೆ ಕುರಿತು ಪುಸ್ತಕ ಬರೆದಿರುವ ಅ.ನಾ. ಪ್ರಹ್ಲಾದರಾವ್ ಅವರಿಗೆ ಶಾಲು ಹೊದೆಸಿ, ಗೌರವ ಫಲಕ ನೀಡಿ ಶ್ರೀಮತಿ ವಸಂತ ಶಶಿ ಹಾಗೂ ರಾಜ್ ಶಶಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಂಗಾರದ ಮನುಷ್ಯ ಚಿತ್ರದ ಆಹಾ ಮೈಸೂರು ಮಲ್ಲಿಗೆ ಗೀತೆಯನ್ನು ವಸಂತ ಶಶಿ ಹಾಗೂ ಮುರಳಿ ಅಯ್ಯಂಗಾರ್ ಸುಶ್ರಾವ್ಯವಾಗಿ ಹಾಡಿದರು.
ವರದಿಯ ವಿವರಗಳು |
 |
ಕೃಪೆ : ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-11
|
|
|