ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಬಂದರೆ ದಂಡ: ಕತರ್ ಸಾರಿಗೆ ಸಚಿವಾಲಯ |
ಪ್ರಕಟಿಸಿದ ದಿನಾಂಕ : 2007-12-09
ದೋಹಾ, ಡಿಸೆಂಬರ್ ೯. ಚಿಕ್ಕಪುಟ್ಟ ಅಪಘಾತಗಳಲ್ಲಿ ಸಿಕ್ಕಿಕೊಂಡ ವಾಹನಗಳ ಚಾಲಕರು ಇತರ ವಾಹನಗಳ ಸುಗಮ ಚಾಲನೆಗೆ ಅಡ್ಡಿಬರದಂತೆ ಸಹಕರಿಸಬೇಕೆಂದು ಹೊಸ ಕಾನೂನು ವಿವರಿಸುತ್ತದೆ. ಒಂದು ವೇಳೆ ಅಪಘಾತದ ಪ್ರಮಾಣ ಚಿಕ್ಕದಾಗಿದ್ದು ಯಾವುದೇ ಗಾಯಗಳಿಲ್ಲದಿದ್ದಲ್ಲಿ ಚಾಲಕರು ಕೂಡಲೇ ಹತ್ತಿರದ ನಿಲುಗಡೆ ಪ್ರದೇಶದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ನಂತರ ಪೋಲೀಸರನ್ನು ಸಂಪರ್ಕಿಸಬೇಕೆಂಬ ಹೊಸ ಕಾನೂನನ್ನು ಕತರ್ ಸಾರಿಗೆ ಸಚಿವಾಲಯದ ಸಹಾಯಕ ನಿರ್ವಾಹಕರಾದ ಲೆಫ್ಟಿನೆಂಟ್ ಕರ್ನಲ್ ಶೇಖ್ ಅಬ್ದುಲ್ ಅಜೀಜ್ ಬಿನ್ ಫೈಸಲ್ ಅಲ್ ಥಾನಿಯವರು ತಿಳಿಸಿದ್ದಾರೆ.
ಸಾರಿಗೆ ಕಾನೂನಿನಲ್ಲಿ ಹೊಸತಾಗಿ ಸೇರ್ಪಡೆಯಾದ ಸಂಖ್ಯೆ ೬೬ ಅನ್ನು ಹೀಗೆ ವಿವರಿಸಲಾಗಿದೆ: ಒಂದು ವೇಳೆ ಎರೆಡು ಅಥವಾ ಹೆಚ್ಚಿನ ವಾಹನಗಳಿಗೆ ಅಪಘಾತವಾಗಿ ಯಾರಾದರೂ ಗಾಯಗೊಂಡರೆ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡುವುದು ಪ್ರಪ್ರಥಮ ಆದ್ಯತೆಯಾಗಿರುತ್ತದೆ. ನಂತರ ಕೂಡಲೇ ಪೋಲೀಸರನ್ನು ಸಂಪರ್ಕಿಸಬೇಕಾಗುತ್ತದೆ. ಒಂದು ವೇಳೆ ಗಾಯಗೊಂಡ ವ್ಯಕ್ತಿಯನ್ನು ವಾಹನವನ್ನು ಸ್ಥಳಾಂತರಿಸದೇ ಹೊರತೆಗೆಯಲು ಸಾಧ್ಯವೇ ಇಲ್ಲದ ಸಾಂಭವ್ಯದಲ್ಲಿ ಮಾತ್ರ ವಾಹನವನ್ನು ಸ್ಥಳಾಂತರಗೊಳಿಸಲು ಅವಕಾಶವಿದೆ. ಇಲ್ಲದಿದ್ದರೆ ಪೋಲೀಸರು ಬರುವವರೆಗೆ ವಾಹನವನ್ನು ಸ್ಥಳಾಂತರಿಸುವಂತಿಲ್ಲ, ಬಳಿಕ ಪೋಲಿಸರ ಅನುಮತಿಯ ಮೇರೆಗೆ ಮಾತ್ರ ವಾಹನವನ್ನು ಸ್ಥಳಾಂತರಿಸಬಹುದು. ಒಂದು ವೇಳೆ ಅಪಘಾತದ ಪ್ರಮಾಣ ಚಿಕ್ಕದಾಗಿದ್ದು ಯಾರೂ ಗಾಯಗೊಂಡಿಲ್ಲದಿದ್ದಲ್ಲಿ ಹಾಗೂ ವಾಹನಗಳನ್ನು ಸ್ಥಳಾಂತರಿಸುವ ಸಾಧ್ಯತೆಗಳಿದ್ದಲ್ಲಿ ಕೂಡಲೇ ವಾಹನಗಳನ್ನು ಹತ್ತಿರದ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಿ ಪೋಲೀಸರನ್ನು ಸಂಪರ್ಕಿಸಬೇಕಾಗುತ್ತದೆ.
ಹಲವಾರು ಪ್ರಸಂಗಗಳಲ್ಲಿ ಅಪಘಾತದ ಪ್ರಮಾಣಗಳು ನಿರ್ಲಕ್ಷಿಸುವಷ್ಟು ಚಿಕ್ಕದಾಗಿದ್ದು ಪೋಲೀಸರು ಸ್ಥಳಕ್ಕೆ ಬರುವವರೆಗೆ ವಾಹನ ದಟ್ಟಣೆ ಹೆಚ್ಚಿ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ. ಅದೇ ಹೊತ್ತಿನಲ್ಲಿ ಬೇರೊಂದು ಕಡೆ ತೀವ್ರ ಪ್ರಮಾಣದ ಅಪಘಾತವಾದರೆ ಸ್ಥಳಕ್ಕೆ ತಲುಪಲು ವಿಳಂಬವಾಗಿ ಸಹಾಯ ತಲುಪಿಸುವಷ್ಟರಲ್ಲಿ ತಡವಾಗಿರುವ ಸಂಭವವಿರುತ್ತದೆ. ಹಾಗಾಗಿ ಈ ಕಾನೂನು ಅನುಕೂಲಕರವಾಗಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಅವರು ತಿಳಿಸಿದ್ದಾರೆ.
ಒಂದು ವೇಳೆ ಚಿಕ್ಕ ಅಪಘಾತಕ್ಕೂ ವಾಹನ ಸ್ಥಳಾಂತರಿಸದಿದ್ದಲ್ಲಿ ತನಿಖಾ ದಳಕ್ಕೆ ಎರೆಡೂ ಕಡೆಯವರಿಗೆ ತಲಾ ೧,೦೦೦ ರಿಯಾಲ್ ದಂಡ ವಿಧಿಸಿ ಪ್ರಕರಣವನ್ನು ಕೊನೆಗೊಳಿಸುವ ಅಧಿಕಾರವಿರುತ್ತದೆ. ಅದೇ ತನಿಖಾ ದಳ ಪ್ರಕರಣವನ್ನು ದಾಖಲು ಮಾಡುವುದಾದರೆ ಒಂದು ವಾರ ಜೈಲುಶಿಕ್ಷೆ ಮತ್ತು/ಅಥವಾ ಕನಿಷ್ಠ ೩,೦೦೦ ದಿಂದ ಗರಿಷ್ಠ ೧೦,೦೦೦ ರಿಯಾಲುಗಳವರೆಗೂ ದಂಡ ತೆರಬೇಕಾಗಬಹುದು.
ಒಂದು ವೇಳೆ ವೃತ್ತ ಪ್ರದೇಶದಲ್ಲಿ ವಾಹನ ದಟ್ಟಣೆಯಿದ್ದರೆ ಚಾಲಕರು ಹಸಿರು ನಿಶಾನಿಯಿದ್ದರೂ ಮುಂದುವರಿಯುವಂತಿಲ್ಲ. ಈ ಮೂಲಕ ಸಾಧ್ಯವಾಗಬಹುದಾದ ಅಪಘಾತವನ್ನು ತಪ್ಪಿಸಬಹುದಾಗಿದೆ.
ಒಂದು ವೇಳೆ ವಿದ್ಯುತ್ ನಿಶಾನೆ ಕಂಭಗಳು ಸ್ಥಬ್ದಗೊಂಡಲ್ಲಿ ಅಲ್ಲಿ ನೇಮಕಗೊಂಡ ಪೋಲೀಸ್ ಅಧಿಕಾರಿಯ ಸೂಚನೆಯಂತೆ ನಡೆಯಬೇಕಾಗುತ್ತದೆ. ಈ ಸೂಚನೆಗಳ ಪಾಲಿಸದಿರುವವರಿಗೆ ೬,೦೦೦ ರಿಯಾಲ್ ದಂಡ ವಿಧಿಸಬಹುದಾಗಿದೆ.
ಕಾನೂನು ಸಂಖ್ಯೆ ೨೯ರ ಪ್ರಕಾರ ಒಂದು ವೇಳೆ ಇತರ ಗಲ್ಫ್ ರಾಷ್ಟಗಳ ನಾಗರಿಕರು ಕತರ್ ನಲ್ಲಿ ವಾಹನ ನಡೆಸಬಯಸಿದರೆ ದೇಶ ಪ್ರವೇಶಿಸಿದ ಹದಿನೈದು ದಿನಗಳೊಳಗೆ ಸಾರಿಗೆ ಇಲಾಖೆಯಲ್ಲಿ ತಾವು ವಾಸ್ತವ್ಯವಿರುವ ಅವಧಿಯನ್ನು ವಿವರಿಸಿ ಅನುಮತಿ ಪಡೆಯಬೇಕಾಗುತ್ತದೆ. ತಪ್ಪಿದರೆ ೧೦,೦೦೦ದಿಂದ ೫೦,೦೦೦ ರಿಯಾಲ್ ಗಳವರೆಗೆ ದಂಡ ವಿಧಿಸಬಹುದಾಗಿದೆ.
ವರದಿಯ ವಿವರಗಳು |
 |
ಕೃಪೆ : ದಿ ಪೆನಿನ್ಸುಲಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-09
|
|
|