|
|
|
ಸಂಗೀತಪ್ರಿಯರನ್ನು ರಂಜಿಸಿದ -ಸ್ವರ ಸಂಗಮ- ಕಾರ್ಯಕ್ರಮ |
ಪ್ರಕಟಿಸಿದ ದಿನಾಂಕ : 2007-12-05
ಮಸ್ಕತ್, ಡಿಸೆಂಬರ್ ೫. ಇಲ್ಲಿನ ಅಲ್ ಫಲಜ್ ಆಡಿಟೋರಿಯಂ ಸಭಾಂಗಣದಲ್ಲಿ ಭಾರತೀಯ ಸಮಾಜ ಕ್ಲಬ್ ನ ಕರ್ನಾಟಕ ವಿಭಾಗ ಶುಕ್ರವಾರದಂದು ಆಯೋಜಿಸಿದ್ದ ಸ್ವರ ಸಂಗಮ ಸಂಗೀತ ಕಾರ್ಯಕ್ರಮದಲ್ಲಿ ಕರ್ನಾಟಕದ ಹೆಸರಾಂತ ಗಾಯಕರಾದ ಸಿ. ಅಶ್ವಥ್, ಎಂ.ಡಿ. ಪಲ್ಲವಿ ಮತ್ತು ರವಿ ಮುರೂರ್ ಅವರು ಕನ್ನಡಿಗರಿಗೆ ಸಂಗೀತದ ರಸದೌತಣ ಬಡಿಸಿದರು.
ಕಳೆದ ೨೦೦೬ ಜನವರಿಯಲ್ಲಿ ಸಿ. ಅಶ್ವಥ್ ಹಾಗೂ ಎಂ.ಡಿ. ಪಲ್ಲವಿಯವರು ಮಸ್ಕತ್ ನಗರದಲ್ಲಿ ಭಾವ ಸಂಗಮ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಮೂರು ಘಂಟೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗಾಯಕರು ತಮ್ಮ ಸುಮಧುರ ಸ್ವರ, ಹಾಗೂ ಉತ್ತಮ ಗೀತೆಗಳೊಂದಿಗೆ ನೆರೆದ ಕನ್ನಡಿಗರನ್ನು ರಂಜಿಸಿದರು. ಕುವೆಂಪು ರಚಿತ ಜಯ ಭಾರತ್ ಜನನಿಯ ತನುಜಾತೆ ಹಾಡಿಗೆ ಜನಸ್ತೋಮ ಎದ್ದು ನಿಂತು ತನ್ನ ಭಕ್ತಿಭಾವ ಪ್ರಕಟಿಸಿತು. ಉದಯೋನ್ಮುಖ ಗಾಯಕರಾದ ರವಿ ಮುರೂರ್ ಸಹಾ ಅನುಭವಿ ಗಾಯಕರಿಗೆ ಸರಿಸಮನಾಗಿ ಹಾಡಿದರು. ಸಿ ಅಶ್ವಥ್ ಅವರ ಸೋರುತಿಹುದು ಮನೆಯ ಮಾಳಿಗೆ, ಮುಕ್ತ, ಒಂದಿರುಳು ಕನಸಿನಲಿ, ತರವಲ್ಲ ತಂಗಿ ನಿನ್ನ ಹಾಗೂ ಇನ್ನೂ ಅನೇಕ ರಚನೆಗಳು ಮಂತ್ರಮುಗ್ಢರನ್ನಾಗಿಸಿದವು.
ಎಂ.ಡಿ ಪಲ್ಲವಿಯವರ ಅಮ್ಮ ನಾನು ದೇವರಾಣೆ, ದೀಪವು ನಿನ್ನದೇ ಗಾಳಿಯೂ ನಿನ್ನದೇ ಹಾಗೂ ರವಿ ಮುರೂರ್ ಅವರ ಎಲ್ಲಾ ಕಾಲಕು ಒಂದು ಊರು, ನಾನು ಕೋ ಕೋ ಕೋಳಿಕೆ ರಂಗ, ಕುರಿಗಳು ಸಾರ್ ಗೀತೆಗಳು ಮನಸೂರೆಗೊಂಡವು.
ಸಂಚಾಲಕರಾದ ಅಹಿರಾಜ್ ಅವರು ಸ್ವಾಗತಿಸಿ ಉಪಸಂಚಾಲಕರಾದ ರಾಮಚಂದ್ರ ರಾವ್ ನಿರೂಪಣೆ ಹಾಗೂ ಖಜಾಂಜಿ ಶ್ರೀಧರ್ ಅವರು ವಂದನಾರ್ಪಣೆ ಸಲ್ಲಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-05
|
|
|
|
|